ಅರಸ ಕೇಳ್ ಶಲ್ಯನ ಯುಧಿಷ್ಠಿರ
ಧರಣಿಪನ ಸಂಗ್ರಾಮವಮ್ದಿನ
ಸುರನದೀನಂದನನ ದ್ರೋಣನ ಸೂತಸಂಭವನ
ನರನ ಭೂರಿಶ್ರವನ ಭೀಮನ
ಕುರುಪತಿಯ ವೃಷಸೇನ ಸೌಭ
ದ್ರರ ಸಮಗ್ರಾಹವವ ಮರಸಿತು ಹೇಳಲೇನೆಂದ (ಶಲ್ಯ ಪರ್ವ, ೩ ಸಂಧಿ, ೩೪ ಪದ್ಯ)
ತಾತ್ಪರ್ಯ:
ಎಲೈ ರಾಜನೇ ಕೇಳು, ಶಲ್ಯ ಯುಧಿಷ್ಠಿರರ ಕಾಳಗವು ಭೀಷ್ಮ, ದ್ರೋಣ, ಕರ್ಣ, ಅರ್ಜುನ, ಭೂರಿಶ್ರವ, ಭೀಮ, ದುರ್ಯೋಧನ, ವೃಷಸೇನ, ಅಭಿಮನ್ಯು ಮೊದಲಾದವರೆಲ್ಲ ಮಾಡಿದ ಘೋರ ಸಂಗ್ರಾಮಗಳನ್ನು ಮರೆಸಿತು.
ಅರ್ಥ:
ಅರಸ: ರಾಜ; ಧರಣಿಪ: ರಾಜ; ಸಂಗ್ರಾಮ: ಯುದ್ಧ; ಸುರನದಿ: ಗಂಗೆ; ನಂದನ: ಮಗ; ಸೂತ: ಸಾರಥಿ; ಸಂಭವ: ಹುಟ್ಟಿದ; ನರ: ಅರ್ಜುನ; ಆಹವ: ಯುದ್ಧ; ಮರಸು: ನೆನಪಿನಿಂದ ದೂರ ಮಾಡು;
ಪದವಿಂಗಡಣೆ:
ಅರಸ +ಕೇಳ್ +ಶಲ್ಯನ +ಯುಧಿಷ್ಠಿರ
ಧರಣಿಪನ +ಸಂಗ್ರಾಮವ್+ಅಂದಿನ
ಸುರನದೀನಂದನನ +ದ್ರೋಣನ +ಸೂತ+ಸಂಭವನ
ನರನ+ ಭೂರಿಶ್ರವನ+ ಭೀಮನ
ಕುರುಪತಿಯ+ ವೃಷಸೇನ +ಸೌಭ
ದ್ರರ +ಸಮಗ್ರ+ಆಹವವ +ಮರಸಿತು +ಹೇಳಲೇನೆಂದ
ಅಚ್ಚರಿ:
(೧) ಅರಸ, ಧರಣಿಪ – ಸಾಮಾನಾರ್ಥಕ ಪದ
(೨) ಭೀಷ್ಮರನ್ನು ಸುರನದೀನಂದನ, ಕರ್ಣನನ್ನು ಸೂತಸಂಭವ ಎಂದು ಕರೆದಿರುವುದು