ಬೆಳೆವುತಿರ್ದರು ಹರಿಣಪಕ್ಷದ
ನಳಿನರಿಪುವಿನವೊಲ್ ಕುಮಾರರು
ಕುಲವಿಹಿತ ಚೌಲೋಪನಯನವನಿಬ್ಬರಿಗೆ ರಚಿಸಿ
ಕಲಿತವಿದ್ಯರ ಮಾಡಿ ತಾಯು
ಮ್ಮಳಿಸದಂತಿರೆ ಸೋಮವಂಶದ
ಬೆಳವಿಗೆಯನೇ ಮಾಡಿ ಕೊಂಡಾಡಿದನು ಕಲಿಭೀಷ್ಮ (ಆದಿ ಪರ್ವ, ೩ ಸಂಧಿ, ೧೧ ಪದ್ಯ)
ತಾತ್ಪರ್ಯ:
ಮೂವರು ಕುಮಾರರು ಶುಕ್ಲಪಕ್ಷದ ಚಂದ್ರನಂತೆ ಬೆಳೆಯುತ್ತಿದ್ದರು. ಕುಲಾಚಾರದಂತೆ ಧೃತರಾಷ್ಟ್ರ, ಪಾಂಡು ಇವರಿಗೆ ಚೌಲ, ಉಪನಯನ ಕರ್ಮಗಳನ್ನು ಭೀಷ್ಮನು ಮಾಡಿಸಿದನು. ಅವರಿಗೆ ವಿದ್ಯಾಭ್ಯಾಸವನ್ನು ಮಾಡಿಸಿ ಯೋಜನಗಂಧಿಗೆ ದುಃಖವಾಗದಂತೆ ಚಂದ್ರವಂಶದ ಅಭ್ಯುದಯಕ್ಕೆ ಭೀಷ್ಮನು ಕಾರಣನಾದನು.
ಅರ್ಥ:
ಬೆಳೆ: ವೃದ್ಧಿಸು; ಹರಿಣ: ಬಿಳಿಯ ಬಣ್ಣ; ಪಕ್ಷ: ಹದಿನೈದು ದಿನಗಳ ಕಾಲ; ನಳಿನರಿಪು: ಚಂದ್ರ; ನಳಿನ: ಕಮಲ; ರಿಪು: ವೈರಿ; ಕುಮಾರ: ಮಕ್ಕಳು; ಕುಲ: ವಂಶ; ವಿಹಿತ: ಯೋಗ್ಯವಾದುದು; ಚೌಲ: ಹುಟ್ಟು ಕೂದಲನ್ನು ತೆಗೆಸುವುದು; ಉಪನಯನ: ಮುಂಜಿ, ಬ್ರಹ್ಮೋಪದೇಶ; ರಚಿಸು: ನಿರ್ಮಿಸು; ಕಲಿತವಿದ್ಯ: ವಿದ್ಯಾಭ್ಯಾಸ; ತಾಯಿ: ಮಾತೆ; ಉಮ್ಮಳಿಸು: ಅ೦ತರಾಳದಿ೦ದ ಹೊರಹೊಮ್ಮು; ಸೋಮ: ಚಂದ್ರ; ವಂಶ: ಕುಲ; ಬೆಳವಿಗೆ: ಏಳಿಗೆ; ಕೊಂಡಾಡು: ಹೊಗಳು; ಕಲಿ: ಶೂರ;
ಪದವಿಂಗಡಣೆ:
ಬೆಳೆವುತಿರ್ದರು +ಹರಿಣಪಕ್ಷದ
ನಳಿನರಿಪುವಿನವೊಲ್ +ಕುಮಾರರು
ಕುಲವಿಹಿತ +ಚೌಲ+ಉಪನಯನವನ್+ಇಬ್ಬರಿಗೆ +ರಚಿಸಿ
ಕಲಿತವಿದ್ಯರ+ ಮಾಡಿ +ತಾಯ್
ಉಮ್ಮಳಿಸದಂತಿರೆ +ಸೋಮ+ವಂಶದ
ಬೆಳವಿಗೆಯನೇ +ಮಾಡಿ +ಕೊಂಡಾಡಿದನು +ಕಲಿ+ಭೀಷ್ಮ
ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿಣಪಕ್ಷದ ನಳಿನರಿಪುವಿನವೊಲ್