ಪದ್ಯ ೨೦: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು?

ಶಶಿರುಚಿಗೆ ಸೈರಿಸದ ಸಿರಿಮುಡಿ
ಬಿಸಿಲ ಸೆಕೆಗಾಂತುದೆ ಸುಗಂಧ
ಪ್ರಸರಪೂರ್ಣಘ್ರಾಣವೀ ಹಳೆವೆಣನ ಹೊಲಸಿನಲಿ
ಉಸುರುದೆಗಹಾದುದೆ ಸುಗೀತದ
ರಸದ ಮಧುವಿಂಗಾಂತ ಕಿವಿ ವಾ
ಯಸ ಸೃಗಾಲಧ್ವನಿಗೆ ಸೊಗಸಿತೆ ತಂದೆ ಕುರುರಾಯ (ಗದಾ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಮಾತನ್ನು ಮುಂದುವರೆಸುತ್ತಾ, ತಂದೆ ಕುರುರಾಯ, ಬೆಳುದಿಂಗಳನ್ನೂ ತಡೆಯದ ನಿನ್ನ ಮುಡಿಯು ಈಗ ಬಿಸಿಲಿಗೊಡ್ಡಿತೇ? ಸುಗಂಧವನ್ನಾಘ್ರಾಣಿಸುವ ಮೂಗು ಹಳೆಯ ಹೆಣಗಳ ಹೊಲಸು ವಾಸನೆಯಿಂದ ಉಸುರಾಡಲು ಕಷ್ಟಪಡುತ್ತಿದೆಯೇ? ಮಧುರ ಸಂಗೀತದ ರಸವನ್ನು ಕೇಳುವ ಕಿವಿ, ಕಾಗೆ ನರಿಗಳ ಕೂಗನ್ನು ಕೇಳುವಂತಾಯಿತೇ ಎಂದು ಕೊರಗಿದನು.

ಅರ್ಥ:
ಶಶಿ: ಚಂದ್ರ; ರುಚಿ: ಸವಿ; ಸೈರಿಸು: ತಾಳು, ಸಹಿಸು; ಸಿರಿಮುಡಿ: ಶ್ರೇಷ್ಠವಾದ ಶಿರ; ಬಿಸಿಲು: ಸೂರ್ಯನ ಪ್ರಕಾಶ; ಸೆಕೆ: ಹಬೆ; ಸುಗಂಧ: ಪರಿಮಳ: ಪ್ರಸರ: ಹರಡು; ಪೂರ್ಣ: ತುಂಬ; ಘ್ರಾಣ: ಮೂಗು, ಮೂಸುವಿಕೆ; ಹಳೆ: ಹಿಂದಿನ; ಹಳೆವೆಣ: ಬಹಳ ಸಮಯವಾದ ಹೆಣ (ಜೀವವಿಲ್ಲದ ಶರೀರ); ಹೊಲಸು: ಕೊಳಕು, ಅಶುದ್ಧ; ಉಸುರು: ಜೀವ; ತೆಹವು: ತೆರವು, ಬಿಡುವು; ಸುಗೀತ: ಸುಸ್ವರವಾದ ಗಾಯನ, ಸಂಗೀತ; ರಸ: ಸಾರ; ಮಧು: ಜೇನು; ಕಿವಿ: ಕರ್ಣ; ವಾಯಸ: ಕಾಗೆ; ಸೃಗಾಅ: ನರಿ; ಧ್ವನಿ: ಶಬ್ದ; ಸೊಗಸು: ಚೆಂದ; ರಾಯ: ರಾಜ;

ಪದವಿಂಗಡಣೆ:
ಶಶಿರುಚಿಗೆ +ಸೈರಿಸದ +ಸಿರಿಮುಡಿ
ಬಿಸಿಲ +ಸೆಕೆಗಾಂತುದೆ +ಸುಗಂಧ
ಪ್ರಸರ+ಪೂರ್ಣ+ಘ್ರಾಣವೀ +ಹಳೆವೆಣನ +ಹೊಲಸಿನಲಿ
ಉಸುರುದೆಗಹಾದುದೆ +ಸುಗೀತದ
ರಸದ +ಮಧುವಿಂಗಾಂತ +ಕಿವಿ +ವಾ
ಯಸ +ಸೃಗಾಲ+ಧ್ವನಿಗೆ +ಸೊಗಸಿತೆ +ತಂದೆ +ಕುರುರಾಯ

ಅಚ್ಚರಿ:
(೧) ದುರ್ಯೋಧನನ ಹಿಂದಿನ ಸ್ಥಿತಿ – ಶಶಿರುಚಿಗೆ ಸೈರಿಸದ ಸಿರಿಮುಡಿ, ಸುಗಂಧ ಪ್ರಸರಪೂರ್ಣಘ್ರಾಣ, ಸುಗೀತದರಸದ ಮಧುವಿಂಗಾಂತ ಕಿವಿ