ಮರುಳಲಾ ಗುರುಸುತ ಯುಧಿಷ್ಠಿರ
ನಿರೆ ವಿಭಾಡಿಸುವಾ ಮೃಗೇಂದ್ರನ
ಗರವಟಿಗೆಯಲಿ ಬಡಸೃಗಾಲನ ಬಾಧೆ ಬಲುಹು ಗಡಾ
ಕುರುನೃಪತಿಯಾಸ್ಥಾನವಲ್ಲು
ಬ್ಬರಿಸಿ ಬೊಬ್ಬಿಡಲಾಹವಾಂತ
ಸ್ಸರಣಿ ಗುರುಸುತ ನಿನಗೆ ಸದರವೆಯೆಂದನಸುರಾರಿ (ಗದಾ ಪರ್ವ, ೧೦ ಸಂಧಿ, ೧೯ ಪದ್ಯ)
ತಾತ್ಪರ್ಯ:
ಎಲೇ ಮೂಢ, ನಿನಗೇನಾದರು ತಲೆಕೆಟ್ಟಿದೆಯೇ? ಧರ್ಮಜನನ್ನು ಕೊಲ್ಲುತ್ತಿದ್ದೆಯೇ? ಸಿಂಹದ ಆಸ್ಥಾನದಲ್ಲಿ ಬಡನರಿಯ ಬಾಧೆ ಅಷ್ಟು ಬಲವಾಗಿರಲು ಸಾಧ್ಯವೇ? ಉಬ್ಬಿ ಕೂಗಾಡಲು ಇದು ಕೌರವನ ಆಸ್ಥಾನವೆಂದು ಕೊಂಡೆಯಾ? ಯುದ್ಧದ ನಡೆ ಪರಿಣಾಮಗಳು ನಿನಗೆ ಅಷ್ಟು ಸದರವೆಂದುಕೊಂಡೆಯಾ ಎಂದು ಗದರಿಸಿದನು.
ಅರ್ಥ:
ಮರುಳ: ಮೂಢ; ವಿಭಾಡಿಸು: ನಾಶಮಾಡು; ಮೃಗೇಂದ್ರ: ಸಿಂಹ; ಗರವಟಿಗೆ: ದರಬಾರು, ಆಸ್ಥಾನ; ಸೃಗಾಲ: ನರಿ; ಬಡ: ಅಲ್ಪ; ಬಾಧೆ: ನೋವು; ಬಲುಹು: ಬಲ, ಶಕ್ತಿ; ನೃಪತಿ: ರಾಜ; ಆಸ್ಥಾನ: ದರ್ಬಾರು; ಉಬ್ಬರಿಸು: ಉತ್ಸಾಹಿತನಾಗು; ಬೊಬ್ಬಿಡು: ಆರ್ಭಟಿಸು; ಆಹವ: ಯುದ್ಧ; ಸರಣಿ: ಕ್ರಮ, ರೀತಿ; ಸುತ: ಮಗ; ಸದರ: ಸಲಿಗೆ, ಸಸಾರ;
ಪದವಿಂಗಡಣೆ:
ಮರುಳಲಾ +ಗುರುಸುತ +ಯುಧಿಷ್ಠಿರ
ನಿರೆ+ ವಿಭಾಡಿಸುವಾ +ಮೃಗೇಂದ್ರನ
ಗರವಟಿಗೆಯಲಿ +ಬಡ+ಸೃಗಾಲನ+ ಬಾಧೆ +ಬಲುಹು +ಗಡಾ
ಕುರು+ನೃಪತಿ+ಆಸ್ಥಾನವಲ್ಲ್
ಉಬ್ಬರಿಸಿ+ ಬೊಬ್ಬಿಡಲ್+ಆಹವ+ಅಂತ
ಸ್ಸರಣಿ+ ಗುರುಸುತ +ನಿನಗೆ +ಸದರವೆ+ಯೆಂದನ್+ಅಸುರಾರಿ
ಅಚ್ಚರಿ:
(೧) ಉಪಮಾನದ ಪ್ರಯೋಗ – ಮೃಗೇಂದ್ರನ ಗರವಟಿಗೆಯಲಿ ಬಡಸೃಗಾಲನ ಬಾಧೆ ಬಲುಹು ಗಡಾ