ದಿವಿಜ ನಗರಿಯ ಸೂಳೆಗೇರಿಗೆ
ಕವಿವ ಮನವೇ ಮುಂದು ಹಜ್ಜೆಗೆ
ತವಕಿಸುವರಳುಕುವರೆ ಮೇಣ ಕೈತಪ್ಪ ಮಾಡಿಸೆನು
ಕವಿಯಿರೈ ಕಾಲಾಳು ರಾವುತ
ರವಗಡಿಸಿರೈ ಜೋದರೆಸಿರೈ
ನವ ಮಹಾರಥರಂಬ ಕರೆಯಿರೆನುತ್ತ ಕವಿದೆಚ್ಚ (ಭೀಷ್ಮ ಪರ್ವ, ೯ ಸಂಧಿ, ೧೭ ಪದ್ಯ)
ತಾತ್ಪರ್ಯ:
ಎಲೈ ಶತ್ರು ಸೈನಿಕರೇ ಅಮರಾವತಿಯ ಅಪ್ಸರೆಯರ ಕೇರಿಗೆ ಹೋಗುವ ಆತುರವಿದೆಯೇ? ಹಾಗೆ ತವಕಿಸುವವರನ್ನು ಖಂಡಿತವಾಗಿ ಅಲ್ಲಿಗೆ ಕಳಿಸುತ್ತೇನೆ; ಖಂಡಿತ ತಪ್ಪುವುದಿಲ್ಲ, ಬನ್ನಿ ಕಾಲಾಳುಗಳು, ರಾವುತರು, ಜೋದರು, ಮಹಾರಥರು ಬನ್ನಿ. ಇನ್ನೂ ಅಲ್ಲಿಗೆ ಹೋಗುವ ತವಕವಿದ್ದವರನ್ನು ಕರೆಯಿರಿ ಎಂದು ಭೀಷ್ಮನು ಬಾಣಗಳನ್ನು ಬಿಟ್ಟನು.
ಅರ್ಥ:
ದಿವಿಜ: ದೇವತೆ; ನಗರಿ: ಊರು; ದಿವಿಜನಗರಿ: ಅಮರಾವತಿ; ಸೂಳೆ: ವೇಶ್ಯೆ; ಕೇರಿ: ಬೀದಿ, ಓಣಿ; ಕವಿ: ಆವರಿಸು; ಮನ: ಮನಸ್ಸು; ಮುಂದು: ಎದುರು; ಹಜ್ಜೆ: ಪಾದ; ತವಕ: ಬಯಕೆ, ಆತುರ; ಅಳುಕು: ಹೆದರು; ಮೇಣ್: ಅಥವಾ; ಕೈತಪ್ಪು: ಕಳಚು; ಕಾಲಾಳು: ಸೈನಿಕರು; ರಾವುತ: ರಥಿ; ಅವಗಡಿಸು: ಕಡೆಗಣಿಸು; ಜೋದರು: ಯೋಧರು; ನವ: ಹೊಸ; ಮಹಾರಥ: ಯೋಧ, ಪರಾಕ್ರಮಿ; ಕರೆ: ಬರೆಮಾಡು; ಎಚ್ಚು: ಬಾಣಬಿಡು;
ಪದವಿಂಗಡಣೆ:
ದಿವಿಜ +ನಗರಿಯ +ಸೂಳೆ+ಕೇರಿಗೆ
ಕವಿವ +ಮನವೇ +ಮುಂದು +ಹಜ್ಜೆಗೆ
ತವಕಿಸುವರ್+ಅಳುಕುವರೆ+ ಮೇಣ್ +ಕೈತಪ್ಪ +ಮಾಡಿಸೆನು
ಕವಿಯಿರೈ +ಕಾಲಾಳು +ರಾವುತರ್
ಅವಗಡಿಸಿರೈ +ಜೋದರೆಸಿರೈ
ನವ +ಮಹಾರಥರ್+ಅಂಬ +ಕರೆಯಿರ್+ಎನುತ್ತ +ಕವಿದ್+ಎಚ್ಚ
ಅಚ್ಚರಿ:
(೧) ಸಾಯಬೇಕೆ ಎಂದು ಹೇಳುವ ಪರಿ – ದಿವಿಜ ನಗರಿಯ ಸೂಳೆಗೇರಿಗೆಕವಿವ ಮನವೇ