ಪದ್ಯ ೧೭: ಭೀಷ್ಮನು ಶತ್ರು ಸೈನಿಕರಿಗೆ ಏನು ಹೇಳಿದನು?

ದಿವಿಜ ನಗರಿಯ ಸೂಳೆಗೇರಿಗೆ
ಕವಿವ ಮನವೇ ಮುಂದು ಹಜ್ಜೆಗೆ
ತವಕಿಸುವರಳುಕುವರೆ ಮೇಣ ಕೈತಪ್ಪ ಮಾಡಿಸೆನು
ಕವಿಯಿರೈ ಕಾಲಾಳು ರಾವುತ
ರವಗಡಿಸಿರೈ ಜೋದರೆಸಿರೈ
ನವ ಮಹಾರಥರಂಬ ಕರೆಯಿರೆನುತ್ತ ಕವಿದೆಚ್ಚ (ಭೀಷ್ಮ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಎಲೈ ಶತ್ರು ಸೈನಿಕರೇ ಅಮರಾವತಿಯ ಅಪ್ಸರೆಯರ ಕೇರಿಗೆ ಹೋಗುವ ಆತುರವಿದೆಯೇ? ಹಾಗೆ ತವಕಿಸುವವರನ್ನು ಖಂಡಿತವಾಗಿ ಅಲ್ಲಿಗೆ ಕಳಿಸುತ್ತೇನೆ; ಖಂಡಿತ ತಪ್ಪುವುದಿಲ್ಲ, ಬನ್ನಿ ಕಾಲಾಳುಗಳು, ರಾವುತರು, ಜೋದರು, ಮಹಾರಥರು ಬನ್ನಿ. ಇನ್ನೂ ಅಲ್ಲಿಗೆ ಹೋಗುವ ತವಕವಿದ್ದವರನ್ನು ಕರೆಯಿರಿ ಎಂದು ಭೀಷ್ಮನು ಬಾಣಗಳನ್ನು ಬಿಟ್ಟನು.

ಅರ್ಥ:
ದಿವಿಜ: ದೇವತೆ; ನಗರಿ: ಊರು; ದಿವಿಜನಗರಿ: ಅಮರಾವತಿ; ಸೂಳೆ: ವೇಶ್ಯೆ; ಕೇರಿ: ಬೀದಿ, ಓಣಿ; ಕವಿ: ಆವರಿಸು; ಮನ: ಮನಸ್ಸು; ಮುಂದು: ಎದುರು; ಹಜ್ಜೆ: ಪಾದ; ತವಕ: ಬಯಕೆ, ಆತುರ; ಅಳುಕು: ಹೆದರು; ಮೇಣ್: ಅಥವಾ; ಕೈತಪ್ಪು: ಕಳಚು; ಕಾಲಾಳು: ಸೈನಿಕರು; ರಾವುತ: ರಥಿ; ಅವಗಡಿಸು: ಕಡೆಗಣಿಸು; ಜೋದರು: ಯೋಧರು; ನವ: ಹೊಸ; ಮಹಾರಥ: ಯೋಧ, ಪರಾಕ್ರಮಿ; ಕರೆ: ಬರೆಮಾಡು; ಎಚ್ಚು: ಬಾಣಬಿಡು;

ಪದವಿಂಗಡಣೆ:
ದಿವಿಜ +ನಗರಿಯ +ಸೂಳೆ+ಕೇರಿಗೆ
ಕವಿವ +ಮನವೇ +ಮುಂದು +ಹಜ್ಜೆಗೆ
ತವಕಿಸುವರ್+ಅಳುಕುವರೆ+ ಮೇಣ್ +ಕೈತಪ್ಪ +ಮಾಡಿಸೆನು
ಕವಿಯಿರೈ +ಕಾಲಾಳು +ರಾವುತರ್
ಅವಗಡಿಸಿರೈ +ಜೋದರೆಸಿರೈ
ನವ +ಮಹಾರಥರ್+ಅಂಬ +ಕರೆಯಿರ್+ಎನುತ್ತ +ಕವಿದ್+ಎಚ್ಚ

ಅಚ್ಚರಿ:
(೧) ಸಾಯಬೇಕೆ ಎಂದು ಹೇಳುವ ಪರಿ – ದಿವಿಜ ನಗರಿಯ ಸೂಳೆಗೇರಿಗೆಕವಿವ ಮನವೇ

ಪದ್ಯ ೨೧: ಅಪ್ಸರೆಯರ ಬೀದಿಯು ಯಾರಿಂದ ತುಂಬಿತು?

ಮುಡುಹುಗಳೊಳೊಡೆಹೊಯ್ವ ಕಾಲಲಿ
ಮಿಡಿಯ ಮೆಟ್ಟುವ ತಂಬುಲವ ತೆಗೆ
ದಿಡುವ ಕರೆಕರೆದೊರೆಯನುರ್ಚುವ ನಾಯ ಹೆಸರಿಡುವ
ತೊಡರುಗಟ್ಟುವ ಬೈವ ಭಟ್ಟರ
ಬಿಡುವ ಕಾದುವ ವೀರ ಭಟರಿಂ
ದಿಡಿದುದಮರಾವತಿಯ ಸೊಂಪಿನ ಸೂಳೆಗೇರಿಗಳು (ಭೀಷ್ಮ ಪರ್ವ, ೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭುಜಾಗ್ರವನ್ನು ಸಜ್ಜುಮಾದಿ ಶತ್ರುಗಳನ್ನು ಬಡಿಯುವ, ಕಾಲಿಂದ ಕೆಳಗೆ ಬಿದ್ದವರನ್ನು ಮೆಟ್ಟುವ ಮತ್ತೆ ಮತ್ತೆ ಆಯಾಸ ಪರಿಹಾರಕ್ಕಾಗಿ ತಾಂಬೂಲವನ್ನು ಹಾಕಿಕೊಳ್ಳುವ, ಶತ್ರುಗಳನ್ನು ಕರೆಕರೆದು ಒರೆಯಿಂದ ಕತ್ತಿಯನ್ನೆಳೆಯುವ, ಅವರಿಗೆ ತಮ್ಮ ನಾಯಿಯ ಹೆಸರಿಡುವ, ತೊಡರು ಕೊಡುವ, ಬೈಯುವ ವೀರಭಟರಿಂದ ಅಮರಾವತಿಯ ಅಪ್ಸರೆಯರ ಬೀದಿಗಳು ತುಂಬಿದವು.

ಅರ್ಥ:
ಮುಡುಹು: ಹೆಗಲು, ಭುಜಾಗ್ರ; ಒಡೆ: ಚೂರುಮಾದು; ಕಾಲು: ಪಾದ; ಮಿಡಿಯ: ತವಕಿಸು, ಹಾರು; ಮೆಟ್ಟು: ತುಳಿ; ತಂಬುಲ: ವೀಳೆಯ, ಅಡಿಕೆ; ತೆಗೆ: ಹೊರತರು; ಕರೆ: ಬರೆಮಾದು; ಉರ್ಚು: ಹೊರಕ್ಕೆ ತೆಗೆ; ನಾಯ: ನಾಯಿ, ಶ್ವಾನ; ಹೆಸರು: ನಾಮ; ತೊಡರು: ಸರಪಳಿ, ಸಂಕೋಲೆ; ಬೈವ: ಜರಿಯುವ; ಭಟ್ಟ: ಸೈನಿಕ; ಬಿಡು: ತೊರೆ; ಕಾದು: ಹೋರಾಡು; ವೀರ: ಶೂರ; ಭಟ: ಸೈನಿಕ; ಅಮರಾವತಿ: ಸ್ವರ್ಗ; ಸೊಂಪು: ಸೊಗಸು, ಚೆಲುವು; ಸೂಳೆ: ವೇಶ್ಯೆ; ಕೇರಿ: ಬೀದಿ;

ಪದವಿಂಗಡಣೆ:
ಮುಡುಹುಗಳೊಳ್+ಒಡೆಹೊಯ್ವ+ ಕಾಲಲಿ
ಮಿಡಿಯ +ಮೆಟ್ಟುವ +ತಂಬುಲವ +ತೆಗೆ
ದಿಡುವ +ಕರೆಕರೆದ್+ಒರೆಯನ್+ಉರ್ಚುವ +ನಾಯ +ಹೆಸರಿಡುವ
ತೊಡರು+ಕಟ್ಟುವ +ಬೈವ +ಭಟ್ಟರ
ಬಿಡುವ +ಕಾದುವ +ವೀರ +ಭಟರಿಂದ್
ಇಡಿದುದ್+ಅಮರಾವತಿಯ +ಸೊಂಪಿನ +ಸೂಳೆ+ಕೇರಿಗಳು

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೈವ ಭಟ್ಟರ ಬಿಡುವ