ಅಹುದಲೇ ಬಳಿಕೇನು ನೀನ ತಿ
ಬಹಳ ಮತಿಯೈ ಕರ್ಣ ನೀನೀ
ಕುಹಕ ಕೋಟಿಯನೆತ್ತ ಬಲ್ಲೆ ವೃಥಾಭಿಮಾನಿಗಳ
ರಹಣಿ ಸಾಕಂತಿರಲಿ ತೊತ್ತಿರ
ಸಹಚರರ ಸೂಳಾಯಿತರ ಕರೆ
ಮಹಿಳೆಯನು ನೂಕೆಂದು ದುಶ್ಯಾಸನಗೆ ನೇಮಿಸಿದ (ಸಭಾ ಪರ್ವ, ೧೬ ಸಂಧಿ, ೨೧ ಪದ್ಯ)
ತಾತ್ಪರ್ಯ:
ದುರ್ಯೋಧನನು ಕರ್ಣನ ಮಾತನ್ನು ಸಮರ್ಥಿಸುತ್ತಾ, ಕರ್ಣ ವಿಶಾಲಬುದ್ಧಿಯುಳ್ಳ ನಿನ್ನ ಮಾತು ಸರಿಯಾಗಿದೆ, ಈ ದುರಭಿಮಾನಿಗಳಾದ ಪಾಂಡವರ ಮೋಸಗಳು ನಿನಗೇನು ಗೊತ್ತು, ಅವರ ದುರ್ಮಾರ್ಗಗಳು ಅವರಿಗೇ ಇರಲಿ, ಎಂದು ದುಶ್ಯಾಸನನ್ನು ಕರೆದು ದಾಸಿಯರ ಭವನದಲ್ಲಿ ಸಹಾರರು, ಅವರ ವೇಳೆಗಳನ್ನು ಸರದಿಗಳನ್ನು ಗೊತ್ತುಪಡಿಸುವವರು ಬರಲಿ, ಈ ಹೆಣ್ಣನ್ನು ದಾಸಿಯರ ಭವನಕ್ಕೆ ನೂಕೆಂದು ದುರ್ಯೋಧನನು ದುಶ್ಯಾಸನನಿಗೆ ಆಜ್ಞಾಪಿಸಿದನು.
ಅರ್ಥ:
ಬಳಿಕ: ನಂತರ; ಬಹಳ: ತುಂಬ; ಮತಿ: ಬುದ್ಧಿ; ಕುಹಕ: ಮೋಸ, ವಂಚನೆ; ಕೋಟಿ: ವರ್ಗ, ಕೊನೆ; ಬಲ್ಲೆ: ತಿಳಿ; ವೃಥ: ಸುಮ್ಮನೆ; ಅಭಿಮಾನಿ: ಪ್ರೀತಿಯುಳ್ಳವನು; ರಹಣಿ: ಹೊಂದಿಕೆ, ಕ್ರಮ; ಸಾಕು: ಕೊನೆ, ಅಂತ್ಯ; ತೊತ್ತು: ದಾಸ; ಸಹಚರ: ಅನುಚರ, ಸೇವಕ; ಸೂಳಾಯತ: ಓಲೆಯಕಾರ; ಕರೆ: ಬರೆಮಾಡು; ಮಹಿಳೆ: ಸ್ತ್ರೀ; ನೂಕು: ತಳ್ಳು; ನೇಮಿಸು: ಅಜ್ಞಾಪಿಸು;
ಪದವಿಂಗಡಣೆ:
ಅಹುದಲೇ+ ಬಳಿಕೇನು +ನೀನ್+ಅತಿ
ಬಹಳ +ಮತಿಯೈ +ಕರ್ಣ +ನೀನ್+ಈ
ಕುಹಕ+ ಕೋಟಿಯನೆತ್ತ+ ಬಲ್ಲೆ +ವೃಥ+ಅಭಿಮಾನಿಗಳ
ರಹಣಿ+ ಸಾಕಂತಿರಲಿ+ ತೊತ್ತಿರ
ಸಹಚರರ+ ಸೂಳಾಯಿತರ+ ಕರೆ
ಮಹಿಳೆಯನು +ನೂಕೆಂದು +ದುಶ್ಯಾಸನಗೆ+ ನೇಮಿಸಿದ
ಅಚ್ಚರಿ:
(೧) ದುರ್ಯೋಧನನು ಪಾಂಡವರನ್ನು ನೋಡುವ ಪರಿ – ಕುಹಕ ಕೋಟಿಯನೆತ್ತ ಬಲ್ಲೆ, ವೃಥಾಭಿಮಾನಿಗಳ ರಹಣಿ