ಪದ್ಯ ೩೬: ಚಂದ್ರವಂಶಕ್ಕೆ ಯಾರು ಮೊದಲಿಗರು?

ಆದಿಯಲಿ ಕೃತಯುಗ ಹರಿಶ್ಚಂ
ದ್ರಾದಿಗಳು ಸೂರ್ಯಾನ್ವಯಕೆ ಬುಧ
ನಾದಿ ನಿಮ್ಮನ್ವಯಕೆ ಬಳಿಕ ಪುರೂರವ ಕ್ಷಿತಿಪ
ಮೇದಿನಿಯನಾ ಯುಗದೊಳವರೋ
ಪಾದಿ ಸಲಹಿದರಿಲ್ಲ ಬೆಳಗಿತು
ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಸರಿಯಾಗಿ (ಅರಣ್ಯ ಪರ್ವ, ೧೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೃತಯುಗವು ಮೊದಲನೆಯ ಯುಗ. ಹರಿಶ್ಚಂದ್ರನೇ ಮೊದಲಾದವರು ಆಗ ಸೂರ್ಯವಂಶದ ರಾಜರು. ನಿಮ್ಮ ಚಂದ್ರ ವಂಶಕೆ ಬುಧನೇ ಮೊದಲು. ಆನಂತರ ಪುರೂರವ. ಆ ಯುಗದಲ್ಲಿ ಅವರ ಹಾಗೆ ರಾಜ್ಯಭಾರ ಮಾಡಿದವರಾರು ಇಲ್ಲ. ವೈದಿಕ ಧರ್ಮವು ಆಗ ಸೂರ್ಯ ಪ್ರಕಾಶಕ್ಕೆ ಸರಿಯಾಗಿ ಬೆಳಗಿತು.

ಅರ್ಥ:
ಆದಿ: ಮುಂಚೆ, ಮೊದಲು; ಕೃತಯುಗ: ಸತ್ಯಯುಗ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ಆದಿ: ಮೊದಲಾದ; ಅನ್ವಯ: ವಂಶ; ಬಳಿಕ: ನಂತರ; ಕ್ಷಿತಿಪ: ರಾಜ; ಮೇದಿನಿ: ಭೂಮಿ; ಉಪಾಧಿ: ಕಾರಣ; ಸಲಹು: ಪೋಷಿಸು; ಬೆಳಗು: ಪ್ರಜ್ವಲಿಸು; ವೇದ: ಶೃತಿ; ಬೋಧಿತ: ಹೇಳಿದ; ಧರ್ಮ: ಧಾರಣ ಮಾಡಿದುದು, ನಿಯಮ; ಸೂರ್ಯ: ರವಿ; ಪ್ರಭೆ: ಕಾಂತಿ, ಪ್ರಕಾಶ; ಸರಿ: ಸಮ;

ಪದವಿಂಗಡಣೆ:
ಆದಿಯಲಿ +ಕೃತಯುಗ +ಹರಿಶ್ಚಂ
ದ್ರಾದಿಗಳು +ಸೂರ್ಯ+ಅನ್ವಯಕೆ+ ಬುಧ
ನಾದಿ +ನಿಮ್ಮ್+ಅನ್ವಯಕೆ +ಬಳಿಕ+ ಪುರೂರವ +ಕ್ಷಿತಿಪ
ಮೇದಿನಿಯನ್+ಆ+ ಯುಗದೊಳ್+ಅವರೋ
ಪಾದಿ +ಸಲಹಿದರಿಲ್ಲ+ ಬೆಳಗಿತು
ವೇದ+ ಬೋಧಿತ+ ಧರ್ಮ +ಸೂರ್ಯಪ್ರಭೆಗೆ+ ಸರಿಯಾಗಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೆಳಗಿತು ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಸರಿಯಾಗಿ

ಪದ್ಯ ೨: ಕುರುಸೈನ್ಯದ ಸ್ಥಿತಿ ಹೇಗಾಯಿತು?

ಕಳೆದ ಹೂವಿನ ಪರಿಮಳವೊ ಧರೆ
ಗಿಳಿದ ಸೂರ್ಯಪ್ರಭೆಯೊ ಶರದದ
ಹೊಳೆಯೊ ಮೇಘಸ್ಥಿತಿಯೊ ಸುರಪತಿ ಚಾಪ ವಿಭ್ರಮವೊ
ಇಳಿದ ಜವ್ವನದೊಲುಮೆಯೋ ಕುರು
ಬಲವ ಕಂಡೆನು ಜೀಯ ಜಯದ
ಗ್ಗಳಿಕೆಗಳ ಜಾರುಗಳ ನಿನ್ನ ಕುಮಾರನೊಡ್ಡಿನಲಿ (ಕರ್ಣ ಪರ್ವ, ೨೬ ಸಂಧಿ, ೨ ಪದ್ಯ)

ತಾತ್ಪರ್ಯ:
ಪರಿಮಳವನ್ನು ಕಳೆದುಕೊಂಡ ಹೂವು ಮುದುಡುವಹಾಗೆ, ಸೂರ್ಯನ ಅಸ್ತಂಗತನಾದ ಬಳಿಕೆ ಇಲ್ಲದ ಸೂರ್ಯನ ಪ್ರಭೆ, ಶರತ್ಕಾಲದ ಕಾಂತಿ, ಮೋಡಗಳ ಸ್ಥಿತಿ, ಕಾಮನಬಿಲ್ಲನ ಸೌಂದರ್ಯ, ಯೌವ್ವನವಿಳಿದ ಪ್ರೇಮ, ಹೀಗೆ ಕುರುಸೈನ್ಯವು ತನ್ನ ಪ್ರಭೆಯನ್ನು ಕಳೆದುಕೊಂಡಿತು.

ಅರ್ಥ:
ಕಳಿದ: ತೀರಿಹೋದ; ಹೂವು: ಪುಷ್ಪ; ಪರಿಮಳ: ಸುಗಂಧ; ಧರೆ: ಭೂಮಿ; ಇಳಿ: ಕೆಳಕ್ಕೆ ಹೋಗು; ಸೂರ್ಯ: ರವಿ; ಪ್ರಭೆ: ಕಾಂತಿ; ಸುರಪತಿ: ಇಂದ್ರ; ಚಾಪ: ಬಿಲ್ಲು; ಶರದ: ಶರತ್ಕಾಲ; ಹೊಳೆ: ಕಾಂತಿ; ಮೇಘ: ಮೋಡ; ಸ್ಥಿತಿ: ಇರವು, ಅಸ್ತಿತ್ವ; ವಿಭ್ರಮ: ಅಲೆದಾಟ, ಸುತ್ತಾಟ; ಜವ್ವನ: ಯೌವನ; ಒಲುಮೆ: ಪ್ರೀತಿ; ಬಲ: ಸೈನ್ಯ; ಕಂಡೆ: ನೋಡು; ಜೀಯ: ಒಡೆಯ; ಜಯ: ಗೆಲುವು; ಅಗ್ಗಳಿಕೆ: ಹಿರಿಮೆ; ಜಾರು: ಕೆಳಕ್ಕೆ ಬೀಳು; ಒಡ್ಡು: ಸೈನ್ಯ, ಗುಂಪು;

ಪದವಿಂಗಡಣೆ:
ಕಳೆದ +ಹೂವಿನ +ಪರಿಮಳವೊ +ಧರೆ
ಗಿಳಿದ +ಸೂರ್ಯಪ್ರಭೆಯೊ +ಶರದದ
ಹೊಳೆಯೊ +ಮೇಘಸ್ಥಿತಿಯೊ +ಸುರಪತಿ+ ಚಾಪ +ವಿಭ್ರಮವೊ
ಇಳಿದ +ಜವ್ವನದ್+ಒಲುಮೆಯೋ +ಕುರು
ಬಲವ +ಕಂಡೆನು +ಜೀಯ +ಜಯದ್
ಅಗ್ಗಳಿಕೆಗಳ+ ಜಾರುಗಳ+ ನಿನ್ನ +ಕುಮಾರನ್+ಒಡ್ಡಿನಲಿ

ಅಚ್ಚರಿ:
(೧) ಉಪಮಾನಗಳ ಸಾಲನ್ನು ಈ ಕವನದಲ್ಲಿ ಕಾಣಬಹುದು
(೨) ಮುಪ್ಪು ಎಂದು ಹೇಳಲು – ಇಳಿದ ಜವ್ವನ
(೩) ಕಾಮನಬಿಲ್ಲು ಎಂದು ಹೇಳಲು – ಸುರಪತಿ ಚಾಪ
(೪) ಜ ಕಾರದ ತ್ರಿವಳಿ ಪದ – ಜೀಯ ಜಯದಗ್ಗಳಿಕೆಗಳ ಜಾರುಗಳ