ವಿದ್ಯೆ ಸತ್ಕುಲ ಬಹು ವಿವೇಕವು
ಬುದ್ಧಿ ಜಾಣ್ಮೆಯ ನುಡಿಯ ಸಡಗರ
ಶುದ್ಧ ಚಿತ್ತ ಸುಶೀಲ ಭುಜಬಲ ಭದ್ರನೆಂದೆನಿಸಿ
ಉದ್ಯುಗವು ಮೊದಲಾದ ಗುಣಗಳಿ
ವಿದ್ದು ಫಲವೇನೀ ಜಗದ ತೊರೆ
ಮದ್ದು ಹೊದ್ದದ ನರಗೆ ದಾರಿದ್ರಂಗನಾ ವರಗೆ (ಉದ್ಯೋಗ ಪರ್ವ, ೩ ಸಂಧಿ, ೧೧೬ ಪದ್ಯ)
ತಾತ್ಪರ್ಯ:
ಯಾವ ಮನುಷ್ಯನಲ್ಲಿ ವಿದ್ಯೆ, ಒಳ್ಳೆಯ ಕುಲದ ಹಿನ್ನಲೆ, ವಿವೇಕ ವಿಚಾರದ ಬುದ್ಧಿ, ಜಾಣತನ, ವಾಕ್ಚಾತುರ್ಯ, ನಿರ್ಮಲವಾದ ಚಿತ್ತಶುದ್ಧಿ, ಒಳ್ಳೆಯ ನಡತೆ, ಪರಾಕ್ರಮದ ಗುಣ, ಉದ್ಯಮಶೀಲತೆ ಇಂತಹ ಸದ್ಗುಣಗಳಿದ್ದರೂ ಏನು ಫಲ, ಅವನಲ್ಲಿ ವೈರಾಗ್ಯವೆಂಬ ಗುಣವಿಲ್ಲದಿದ್ದರೆ ಈ ಎಲ್ಲಾ ಗುಣಗಳು ವ್ಯರ್ಥ, ಅವನಲ್ಲಿ ವೈರಾಗ್ಯಗುಣ ಬರುವವರೆಗೂ ಅವನನ್ನು ದರಿದ್ರನೆಂದೇ ಪರಿಗಣಿಸಬೇಕು ಎಂದು ವಿದುರ ವೈರಾಗ್ಯದ ಮಹತ್ತ್ವವನ್ನು ತಿಳಿಸಿದ.
ಅರ್ಥ:
ವಿದ್ಯೆ: ತಿಳುವಳಿಕೆ, ಜ್ಞಾನ; ಸತ್ಕುಲ: ಒಳ್ಳೆಯ ವಂಶ; ಬಹು: ಬಹಳ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಬುದ್ಧಿ: ತಿಳಿವು, ಅರಿವು; ಜಾಣ: ಬುದ್ಧಿವಂತ, ಚತುರ; ನುಡಿ: ಮಾತು; ಸಡಗರ: ಉತ್ಸಾಹ, ಸಂಭ್ರಮ; ಶುದ್ಧ: ನಿರ್ಮಲ; ಚಿತ್ತ; ಬುದ್ಧಿ; ಸುಶೀಲ: ಒಳ್ಳೆಯ ನಡತೆ; ಭುಜಬಲ: ಪರಾಕ್ರಮ; ಭದ್ರ:ಸುಖ, ಶ್ರೇಯಸ್ಸು; ಉದ್ಯುಗ: ಪ್ರಯತ್ನ, ಉದ್ಯೋಗಶೀಲ; ಮೊದಲಾದ: ಮುಂತಾದ; ಗುಣ: ನಡತೆ, ಸ್ವಭಾವ; ಫಲ: ಫಲಿತಾಂಶ; ಜಗ: ಜಗತ್ತು; ತೊರೆ: ಬಿಡು; ಮದ್ದು: ಜೌಷದಿ; ಹೊದ್ದದ: ಹೊಂದಿರದ; ನರ: ಮನುಷ್ಯ; ದಾರಿದ್ರ: ಬಡತನ,ಕೊರತೆ, ಹೀನ; ಆವರಗೆ: ಅಲ್ಲಿಯ ತನಕ;
ಪದವಿಂಗಡಣೆ:
ವಿದ್ಯೆ +ಸತ್ಕುಲ +ಬಹು +ವಿವೇಕವು
ಬುದ್ಧಿ +ಜಾಣ್ಮೆಯ +ನುಡಿಯ +ಸಡಗರ
ಶುದ್ಧ +ಚಿತ್ತ +ಸುಶೀಲ +ಭುಜಬಲ +ಭದ್ರನೆಂದ್+ಎನಿಸಿ
ಉದ್ಯುಗವು+ ಮೊದಲಾದ+ ಗುಣಗಳಿ
ವಿದ್ದು+ ಫಲವೇನ್+ಈ+ ಜಗದ +ತೊರೆ
ಮದ್ದು+ ಹೊದ್ದದ +ನರಗೆ+ ದಾರಿದ್ರಂಗನಾ +ವರಗೆ
ಅಚ್ಚರಿ:
(೧) ಜಗದ ತೊರೆ ಮದ್ದು – ವೈರಾಗ್ಯವನ್ನು ಹೇಳಿರುವ ಪರಿ