ಪದ್ಯ ೫: ಕೌರವನ ಸ್ಥಿತಿ ಹೇಗಿತ್ತು?

ದ್ರೋಣ ಭೀಷ್ಮಾದಿಗಳು ಸಮಯವ
ಕಾಣರುಳಿದ ಪಸಾಯ್ತ ಸಚಿವ
ಶ್ರೇಣಿ ಬಾಗಿಲ ಹೊರಗೆ ನಿಂದುದು ಮತ್ತೆ ಮನೆಗಗಳಲಿ
ಕಾಣೆನೊಳಪೈಕದ ಸುವೇಣಿಯ
ರಾಣಿಯರ ದುರ್ಮನದ ಬೆಳಸಿನ
ಕೇಣಿಯನು ಕೈಕೊಂಡನೊಬ್ಬನೆ ಕೌರವರ ರಾಯ (ಸಭಾ ಪರ್ವ, ೧೩ ಸಂಧಿ, ೫ ಪದ್ಯ)

ತಾತ್ಪರ್ಯ:
ಭೀಷ್ಮ ದ್ರೋಣರಿಗೆ ದುರ್ಯೋಧನನ್ನು ಭೇಟಿಯಾಗಲು ಅವಕಾಶ ಸಿಗಲಿಲ್ಲ. ಉಳಿದ ಮಂತ್ರಿಗಳು, ಸಚಿವರು, ಆಪ್ತರು ಅರಮನೆಯ ಬಾಗಿಲ ಹೊರಗೇ ನಿಂತರು. ಕೌರವನ ಭವನದಲ್ಲಿ ರಾಣಿಯರೇ ಬರುವಂತಿರಲಿಲ್ಲ. ಮನಸ್ಸಿನ ದುಷ್ಟ ಸಂಕಲ್ಪವನ್ನು ಬೆಳೆಸುವ ಗುತ್ತಿಗೆಯನ್ನು ತಾನೇ ಹೊತ್ತುಕೊಂಡು ಕೌರವನು ಏಕಾಂಗಿಯಾಗಿದ್ದನು.

ಅರ್ಥ:
ಸಮಯ: ಕಾಲ, ಗಳಿಗೆ; ಕಾಣರು: ತೋರು; ಉಳಿದ: ಮಿಕ್ಕ; ಪಸಾಯ್ತ: ತಣಿವೆ, ತೃಪ್ತಿಗೊಂಡ; ಸಚಿವ: ಮಂತ್ರಿ; ಶ್ರೇಣಿ: ಗುಂಪು; ಬಾಗಿಲು: ಕದ, ಕವಾಟ; ಹೊರಗೆ: ಆಚೆ; ನಿಂದು: ನಿಲ್ಲು; ಮತ್ತೆ: ಪುನಃ; ಮನೆ: ಆಲಯ; ಕಾಣೆ: ತೋರದು; ವೇಣಿ: ಜಡೆ, ತರುಬು; ರಾಣಿ: ಅರಸಿ; ದುರ್ಮನ: ಕೆಟ್ಟ ಮನಸ್ಸು; ಬೆಳಸು: ಏಳಿಗೆ; ಕೇಣಿ: ಗುತ್ತಿಗೆ, ಗೇಣಿ; ಒಬ್ಬ: ಏಕಾಂಗಿ; ರಾಯ: ರಾಜ; ಕೈಕೊಂಡು: ಪ್ರಾರಂಭಿಸು;

ಪದವಿಂಗಡಣೆ:
ದ್ರೋಣ +ಭೀಷ್ಮಾದಿಗಳು +ಸಮಯವ
ಕಾಣರ್+ಉಳಿದ+ ಪಸಾಯ್ತ +ಸಚಿವ
ಶ್ರೇಣಿ +ಬಾಗಿಲ +ಹೊರಗೆ +ನಿಂದುದು +ಮತ್ತೆ +ಮನೆಗಳಲಿ
ಕಾಣೆನ್+ಒಳಪೈಕದ +ಸುವೇಣಿಯ
ರಾಣಿಯರ +ದುರ್ಮನದ +ಬೆಳಸಿನ
ಕೇಣಿಯನು +ಕೈಕೊಂಡನ್+ಒಬ್ಬನೆ +ಕೌರವರ+ ರಾಯ

ಅಚ್ಚರಿ:
(೧) ದುರ್ಯೋಧನನ ಮನಃ ಸ್ಥಿತಿ – ದುರ್ಮನದ ಬೆಳಸಿನ ಕೇಣಿಯನು ಕೈಕೊಂಡನೊಬ್ಬನೆ ಕೌರವರ ರಾಯ