ಒಡಲನೊಡೆದಾ ಜ್ಯೋತಿ ಗಗನಕೆ
ನಡೆದುದಿತ್ತಲು ಸುರರು ಮರ್ತ್ಯರು
ಸುಡು ಸುಡೆಂದುದು ಸಾತ್ಯಕಿಯ ದುಷ್ಕರ್ಮವಾಸನೆಗೆ
ಹಿಡಿದ ದುಗುಡದಲರ್ಜುನನು ಮನ
ಮಿಡುಕಿದನು ಕುರುನೃಪರು ಶೋಕದ
ಕಡಲೊಳದ್ದರು ಬೈವುತಿರ್ದರು ಕೃಷ್ಣಫಲುಗುಣರ (ದ್ರೋಣ ಪರ್ವ, ೧೪ ಸಂಧಿ, ೨೪ ಪದ್ಯ)
ತಾತ್ಪರ್ಯ:
ಭೂರಿಶ್ರವನ ಆತ್ಮಜ್ಯೋತಿಯು ದೇಹವನ್ನು ಬಿಟ್ಟು ಆಕಾಶಕ್ಕೆ ಹೋಯಿತು. ಮನುಷ್ಯರು, ದೇವತೆಗಳು ಸಾತ್ಯಕಿಯ ದುಷ್ಕರ್ಮದ ವಾಸನೆಯನ್ನು ಸುಡು ಎಂದರು. ಅರ್ಜುನನ ಮನ ಮಿಡಿದು ದುಃಖಿಸಿದನು. ಕುರುರಾಜರು ಶೋಕಸಾಗರದಲ್ಲಿ ಮುಳುಗಿ ಕೃಷ್ಣಾರ್ಜುನರನ್ನು ಬೈದರು.
ಅರ್ಥ:
ಒಡಲು: ದೇಹ; ಒಡೆ: ಸೀಳು; ಜ್ಯೋತಿ: ಬೆಳಕು, ಕಾಂತಿ; ಗಗನ: ಆಗಸ; ನಡೆ: ಚಲಿಸು; ಸುರ: ಅಮರ; ಮರ್ತ್ಯ: ಮನುಷ್ಯ; ಸುಡು: ದಹಿಸು; ದುಷ್ಕರ್ಮ: ಕೆಟ್ಟ ಕಾರ್ಯ; ವಾಸನೆ: ಬಯಕೆ, ಆಸೆ; ಹಿಡಿ: ಗ್ರಹಿಸು; ದುಗುಡ: ದುಃಖ; ಮನ: ಮನಸ್ಸು; ಮಿಡುಕು: ಅಲುಗಾಟ, ಚಲನೆ; ನೃಪ: ರಾಜ; ಶೋಕ: ದುಃಖ; ಕಡಲು: ಸಾಗರ; ಬೈವು: ಜರಿ; ಅದ್ದು: ತೋಯು;
ಪದವಿಂಗಡಣೆ:
ಒಡಲನ್+ಒಡೆದ್+ಆ+ ಜ್ಯೋತಿ +ಗಗನಕೆ
ನಡೆದುದ್+ಇತ್ತಲು +ಸುರರು +ಮರ್ತ್ಯರು
ಸುಡು +ಸುಡೆಂದುದು +ಸಾತ್ಯಕಿಯ +ದುಷ್ಕರ್ಮ+ವಾಸನೆಗೆ
ಹಿಡಿದ +ದುಗುಡದಲ್+ಅರ್ಜುನನು +ಮನ
ಮಿಡುಕಿದನು +ಕುರು+ನೃಪರು +ಶೋಕದ
ಕಡಲೊಳ್+ಅದ್ದರು +ಬೈವುತಿರ್ದರು +ಕೃಷ್ಣ+ಫಲುಗುಣರ
ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ಒಡಲನೊಡೆದಾ ಜ್ಯೋತಿ ಗಗನಕೆನಡೆದುದ್
(೨) ಅರ್ಜುನನ ಮನಃಸ್ಥಿತಿ – ಹಿಡಿದ ದುಗುಡದಲರ್ಜುನನು ಮನಮಿಡುಕಿದನು