ಪದ್ಯ ೭೬: ವಿದುರನು ಧೃತರಾಷ್ಟ್ರನ ಯೋಚನೆಗೆ ಹೇಗೆ ಉತ್ತರಿಸಿದನು?

ಮಾತು ಹೊಲಸಿನ ಗಂಧವಾಗಿದೆ
ಭೀತಿ ರಸದಲಿ ಮನ ಮುಳುಗಿತೀ
ಪ್ರೀತಿ ಮಾರಿಯ ಮುಸುಕನುಗಿವುದನಾರು ಕಲಿಸಿದರು
ಕೈತವದ ಕಣಿ ನಿನ್ನ ಮಗ ನೀ
ಸೋತೆಲಾ ಶಿವಶಿವ ಸುಖಾಂಗ
ದ್ಯೂತವೇ ಹಾ ಹಾಯೆನುತ ತಲೆದೂಗಿದನು ವಿದುರ (ಸಭಾ ಪರ್ವ, ೧೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಮಾತನ್ನು ಕೇಳಿದ ವಿದುರನು, ನಿನ್ನ ಮಾತು ಹೊಲಸು ವಾಸನೆಯಿಂದ ತುಂಬಿದೆ, ನಿನ್ನ ಪ್ರೀತಿಯ ಮಾತುಗಳನ್ನು ಕೇಳಿ, ನನ್ನ ಮನಸ್ಸು ಭೀತಿಯಲ್ಲಿ ಮುಳುಗಿದೆ, ಮಾರಿಯ ಮುಸುಕನ್ನು ತೆಗೆಯುವುದನ್ನು ನಿನಗೆ ಯಾರು ಹೇಳಿಕೊಟ್ಟರು? ನಿನ್ನ ಮಗನು ಮೋಸದ ಗಣಿ, ಅವನ ಮಾತಿಗೆ ನೀನು ಒಪ್ಪಿದೆಯೋ? ಶಿವ ಶಿವಾ ಸುಖದ್ಯೂತಾ ಹಾಹಹಹ ಎಂದು ತಲೆದೂಗಿದನು ವಿದುರ.

ಅರ್ಥ:
ಮಾತು: ವಾಣಿ; ಹೊಲಸು: ಕೊಳಕು; ಗಂಧ: ವಾಸನೆ; ಭೀತಿ: ಭಯ; ರಸ: ಸಾರ; ಮನ: ಮನಸ್ಸು; ಮುಳುಗು: ಮುಚ್ಚಿಹೋಗು, ತೋಯು; ಪ್ರೀತಿ: ಒಲವು; ಮಾರಿ: ಕ್ಷುದ್ರದೇವತೆ; ಮುಸುಕು: ಆವರಿಸು, ಮುಚ್ಚು; ಉಗಿ: ಹೊರಹಾಕು; ಕಲಿಸು: ಹೇಳಿಕೊಟ್ಟರು; ಕೈತ: ಮೋಸ; ಕಣಿ: ಗಣಿ, ಆಕರ; ಮಗ: ಸುತ; ಸೋತೆ: ಪರಾಭವ ಹೊಂದು; ಸುಖ: ಸಂತಸ; ದ್ಯೂತ: ಜೂಜು, ಪಗಡೆ; ತಲೆ: ಶಿರ; ದೂಗು: ಅಲ್ಲಾಡಿಸು;

ಪದವಿಂಗಡಣೆ:
ಮಾತು +ಹೊಲಸಿನ +ಗಂಧವಾಗಿದೆ
ಭೀತಿ +ರಸದಲಿ +ಮನ +ಮುಳುಗಿತ್+ಈ
ಪ್ರೀತಿ +ಮಾರಿಯ +ಮುಸುಕನ್+ಉಗಿವುದನ್+ಆರು +ಕಲಿಸಿದರು
ಕೈತವದ +ಕಣಿ +ನಿನ್ನ +ಮಗ +ನೀ
ಸೋತೆಲಾ +ಶಿವಶಿವ+ ಸುಖಾಂಗ
ದ್ಯೂತವೇ +ಹಾ +ಹಾ+ಎನುತ +ತಲೆದೂಗಿದನು+ ವಿದುರ

ಅಚ್ಚರಿ:
(೧) ವಿದುರನ ಉತ್ತರವನ್ನು ಚಿತ್ರಿಸಿರುವ ಪದ್ಯ
(೨) ಕೆಟ್ಟ ಮಾತು ಎಂದು ಹೇಳಲು – ಮಾತು ಹೊಲಸಿನ ಗಂಧವಾಗಿದೆ
(೨) ಭಯವನ್ನುಂಟುಮಾಡುತ್ತದೆ ಎಂದು ಹೇಳಲು – ಭೀತಿ ರಸದಲಿ ಮನ ಮುಳುಗಿತೀ
(೪) ದುರ್ಯೋಧನನನ್ನು ಬಯ್ಯುವ ಪರಿ – ಕೈತವದ ಕಣಿ ನಿನ್ನ ಮಗ