ಪದ್ಯ ೨೯: ಉತ್ಪಾತಗಳು ಏನನ್ನು ಸೂಚಿಸುತ್ತವೆ ಎಂದು ವ್ಯಾಸರು ನುಡಿದರು?

ಇದು ಕಣಾ ಕುರುರಾಯ ವಂಶಾ
ಭ್ಯುದಯ ವಿಗ್ರಹಪೂರ್ವ ಸೂಚಕ
ವಿದು ಸುಯೋಧನ ನೃಪನ ಕತಿಪಯ ಕಾಲ ಸುಖಬೀಜ
ಇದು ಸಮಸ್ತ ಕ್ಷತ್ರ ಕುಲ ವಾ
ರಿದ ಘಟೋಚ್ಚಾಟನ ಸಮೀರಣ
ವಿದರ ಫಲ ನಿಮಗಪಜಯಾವಹವೆಂದನಾ ಮುನಿಪ (ಸಭಾ ಪರ್ವ, ೧೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ವೇದವ್ಯಾಸರು, ಈ ಉತ್ಪಾತಗಳು ಕೌರವವಂಶದ ಅಭ್ಯುದಯಕ್ಕೆ ಬಂದೊದಗುವ ಕುತ್ತನ್ನು ಸೂಚಿಸುತ್ತವೆ. ದುರ್ಯೋಧನನು ಕೆಲವು ಕಾಲ ಸುಖದಿಮ್ದಿರುತ್ತಾನೆ, ಸಮಸ್ತ ಕ್ಷತ್ರಿಯ ಕುಲಗಳೆಂಬ ಮೋಡಗಳನ್ನು ಹಾರಿಸುವ ಬಿರುಗಾಳಿಯಿದು, ನಿಮಗೆ ಅಪಜಯವು ಕಾದಿದೆಯೆಂದು ಈ ಉತ್ಪಾತಗಳು ಸೂಚಿಸುತ್ತವೆ ಎಂದು ನುಡಿದರು.

ಅರ್ಥ:
ರಾಯ: ರಾಜ; ವಂಶ: ಕುಲ; ಅಭ್ಯುದಯ: ಏಳಿಗೆ; ವಿಗ್ರಹ: ರೂಪ; ಪೂರ್ವ: ಮೊದಲು, ಹಿಂದೆ; ಸೂಚಕ: ಸೂಚನೆ; ನೃಪ: ರಾಜ; ಕತಿಪಯ: ಕೆಲವು; ಕಾಲ: ಸಮಯ; ಸುಖ: ಸಂತಸ, ನೆಮ್ಮದಿ; ಬೀಜ: ಮೂಲ; ಸಮಸ್ತ: ಎಲ್ಲಾ; ಕ್ಷತ್ರ: ಕ್ಷತ್ರಿಯ; ಕುಲ: ವಂಶ; ವಾರಿದ: ಮೋಡ; ಘಟ: ದೊಡ್ಡ; ಉಚ್ಚಾಟನ: ಹೊರಹಾಕು; ಸಮೀರ: ಗಾಳಿ, ವಾಯು; ಫಲ: ಪ್ರಯೋಜನ; ಅಪಜಯ: ಪರಾಭವ; ಆವಹಿಸು: ಕೂಗಿ ಕರೆ;

ಪದವಿಂಗಡಣೆ:
ಇದು+ ಕಣಾ +ಕುರುರಾಯ +ವಂಶ
ಅಭ್ಯುದಯ +ವಿಗ್ರಹ+ಪೂರ್ವ +ಸೂಚಕವ್
ಇದು +ಸುಯೋಧನ+ ನೃಪನ+ ಕತಿಪಯ+ ಕಾಲ +ಸುಖಬೀಜ
ಇದು+ ಸಮಸ್ತ +ಕ್ಷತ್ರ +ಕುಲ+ ವಾ
ರಿದ +ಘಟೋಚ್ಚಾಟನ+ ಸಮೀರಣವ್
ಇದರ+ ಫಲ+ ನಿಮಗ್+ಅಪಜಯ+ಆವಹವೆಂದನಾ +ಮುನಿಪ

ಅಚ್ಚರಿ:
(೧) ಉತ್ಪಾತದ ತೀವ್ರತೆ ಬಗ್ಗೆ ತಿಳಿಸಿದ ವ್ಯಾಸರು – ಇದು ಸಮಸ್ತ ಕ್ಷತ್ರ ಕುಲ ವಾ
ರಿದ ಘಟೋಚ್ಚಾಟನ ಸಮೀರಣ