ರಚಿಸುವೆವು ಪುರಮೂರನಗ್ಗದ
ಖಚರ ಕಿನ್ನರ ಸಿದ್ಧ ನಿರ್ಜರ
ನಿಚಯವೆಮಗೋಲೈಸಿ ಹೋಗಲಿ ಹಲವು ಮಾತೇನು
ಉಚಿತದಲಿ ನಿಮ್ಮಡಿಗಳನು ಪರಿ
ರಚಿಸಲಾವೋಲೈಸುವೆವು ವರ
ವಚನ ನಿಮ್ಮದು ಕರುಣಿಸುವುದಮರತ್ವವನು ನಮಗೆ (ಕರ್ಣ ಪರ್ವ, ೬ ಸಂಧಿ, ೫ ಪದ್ಯ)
ತಾತ್ಪರ್ಯ:
ಆ ಮೂವರು ರಾಕ್ಷಸ ಪುತ್ರರು ನಾವು ಮೂರು ಊರುಗಳನ್ನು ರಚಿಸುತ್ತೇವೆ, ದೇವತೆಗಳು, ಕಿನ್ನರರು, ಸಿದ್ಧರು, ಮೊದಲಾದವರೆಲ್ಲರೂ ನಮಗೆ ಸೇವಕರಾಗಿರಬೇಕು, ಕೇಳಿದುದನ್ನು ಕೊಡುತ್ತೇವೆ ಎಂದಿರಿ, ಅದಕ್ಕಾಗಿ ಕೇಳುತ್ತಿದ್ದೇವೆ, ನಮಗೆ ಮರಣವೇ ಬರಬಾರದು ಎಂದು ಕೇಳಿದರು.
ಅರ್ಥ:
ರಚಿಸು: ನಿರ್ಮಿಸು; ಪುರ: ಊರು; ಮೂರು: ತ್ರಿ, ತ್ರಯ; ಅಗ್ಗ: ಶ್ರೇಷ್ಠ; ಖಚರ: ಗಂಧರ್ವ; ಕಿನ್ನರ: ದೇವತೆಗಳ ಒಂದುವರ್ಗ, ಕಿಂಪುರುಷ; ಸಿದ್ಧ:ದೇವತೆಗಳಲ್ಲಿ ಒಂದು ಪಂಗಡ; ನಿರ್ಜರ: ದೇವತೆಗಳು; ನಿಚಯ: ಗುಂಪು; ಓಲೈಸು: ಉಪಚರಿಸು; ಹಲವು: ಬಹಳ; ಮಾತು: ನುಡಿ; ಉಚಿತ: ಸರಿಯಾದ; ನಿಮ್ಮಡಿ: ನಿಮ್ಮ ಸೇವೆ; ಪರಿ: ರೀತಿ; ವರ: ಶ್ರೇಷ್ಠ; ವಚನ: ನುಡಿ; ಅಮರ: ಮರಣವಿಲ್ಲದ;
ಪದವಿಂಗಡಣೆ:
ರಚಿಸುವೆವು +ಪುರ+ಮೂರನ್+ಅಗ್ಗದ
ಖಚರ+ ಕಿನ್ನರ +ಸಿದ್ಧ +ನಿರ್ಜರ
ನಿಚಯವ್+ಎಮಗ್+ಓಲೈಸಿ +ಹೋಗಲಿ +ಹಲವು +ಮಾತೇನು
ಉಚಿತದಲಿ +ನಿಮ್ಮಡಿಗಳನು +ಪರಿ
ರಚಿಸಲಾವ್+ಓಲೈಸುವೆವು +ವರ
ವಚನ +ನಿಮ್ಮದು +ಕರುಣಿಸುವುದ್+ಅಮರತ್ವವನು +ನಮಗೆ
ಅಚ್ಚರಿ:
(೧) ರಚಿಸು – ೧, ೫ ಸಾಲಿನ ಮೊದಲ ಪದ
(೨) ದೇವತೆಗಳ ಗುಂಪುಗಳು: ಖಚರ, ಕಿನ್ನರ, ಸಿದ್ಧ
(೩) ಅಗ್ಗ, ವರ – ಸಾಮ್ಯಾರ್ಥಪದಗಳು