ಮಾನನಿಧಿ ಸಾವಿತ್ರಿಯ ಉಅಪಾ
ಖ್ಯಾನವನು ಕೇಳಿದನು ಚಿತ್ತ
ಗ್ಲಾನಿಯನು ಬೀಳ್ಕೊಟ್ಟನಮಳೋತ್ಸಾಹ ಭಾವದಲಿ
ಕಾನನಾನುಭವಕ್ಕೆ ಕಡೆ ಯಿ
ನ್ನೇನು ನಮಗೆನುತತುಳ ಹರುಷಾ
ನೂನ ಕುಂತೀತನುಜರಿರ್ದರು ಪರ್ಣಶಾಲೆಯಲಿ (ಅರಣ್ಯ ಪರ್ವ, ೨೫ ಸಂಧಿ, ೨ ಪದ್ಯ)
ತಾತ್ಪರ್ಯ:
ಸಾವಿತ್ರಿಯ ಕಥೆಯನ್ನು ಕೇಳಿ, ಧರ್ಮಜನು ಮನಸ್ಸಿನ ವಿಷಾದವನ್ನು ಕಳೆದುಕೊಂಡು ಉತ್ಸಾಹಿತನಾದನು. ಇನ್ನೇನು ವನವಾಸ ಮುಗಿದು ಹೋಯಿತೆಂದು ಪಾಂಡವರು ಸಂತಸ ಭರಿತರಾಗಿದ್ದರು.
ಅರ್ಥ:
ಮಾನನಿಧಿ: ಮಾನವನ್ನೇ ಐಶ್ವರ್ಯವನ್ನಾಗಿಸಿದವ; ಉಪಾಖ್ಯಾನ: ಪೂರ್ವ ಕಥೆ; ಕೇಳು: ಆಲಿಸು; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ, ದಣಿವು; ಬೀಳ್ಕೊಡು: ತೊರೆ; ಅಮಳ: ನಿರ್ಮಲ; ಉತ್ಸಾಹ: ಹುರುಪು, ಆಸಕ್ತಿ; ಭಾವ: ಭಾವನೆ, ಚಿತ್ತವೃತ್ತಿ; ಕಾನನ: ಕಾಡು, ಅರಣ್ಯ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಕಡೆ: ಕೊನೆ; ನೂನ: ಕೊರತೆ, ನ್ಯೂನತೆ; ತನುಜ: ಮಕ್ಕಳು; ಪರ್ಣಶಾಲೆ: ಕುಟೀರ;
ಪದವಿಂಗಡಣೆ:
ಮಾನನಿಧಿ +ಸಾವಿತ್ರಿಯ +ಉಪಾ
ಖ್ಯಾನವನು +ಕೇಳಿದನು +ಚಿತ್ತ
ಗ್ಲಾನಿಯನು +ಬೀಳ್ಕೊಟ್ಟನ್+ಅಮಳ+ಉತ್ಸಾಹ +ಭಾವದಲಿ
ಕಾನನ+ಅನುಭವಕ್ಕೆ +ಕಡೆ+ ಯಿ
ನ್ನೇನು +ನಮಗೆನುತ್+ಅತುಳ +ಹರುಷಾ
ನೂನ +ಕುಂತೀ+ತನುಜರಿರ್ದರು+ ಪರ್ಣಶಾಲೆಯಲಿ
ಅಚ್ಚರಿ:
(೧) ಅಮಳೋತ್ಸಾಹ, ಅತುಳ ಹರುಷಾನೂನು – ಪದಗಳ ಬಳಕೆ