ಪದ್ಯ ೨೭: ಧರ್ಮಜನು ಅರ್ಜುನನಿಗೆ ಯಾವ ಪ್ರಶ್ನೆಗಳನ್ನು ಕೇಳಿದನು?

ಭಜಿಸಿದೈ ಭರ್ಗನನು ಶಾಂಭವ
ಯಜನ ಸಾರಸಮಾಧಿ ಶಿವಪದ
ರಜವ ಬೆರಸಿತೆ ಬಗೆಯಕುಣಿ ತೆವರಾಯ್ತೆ ತಡಿದೆಗೆದು
ವಿಜಯ ಶಬ್ದವು ಪಾರ್ಥಕೃತಿಯಲಿ
ಯಜಡವಲ್ಲಲೆ ವೈರಿ ರಾಯರ
ಕುಜನತಾ ವಿಚ್ಛೇದ ಸಾಧ್ಯವೆಯೆಂದನಾ ಭೂಪ (ಅರಣ್ಯ ಪರ್ವ, ೧೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮರಾಜನು ಅರ್ಜುನನ್ನು ವಿಚಾರಿಸುತ್ತಾ, ಅರ್ಜುನ ಶಿವನನ್ನು ಭಜಿಸಿದ್ದಿಯಾ? ಶೈವಾಗಮೋಕ್ತ ಸಮಾಧಿಯು ಶಿವನ ಪಾದದ ಧೂಳನ್ನು ತೋರಿಸಿತೇ? ಮನಸ್ಸಿನ ಆಳದಲ್ಲಿದ್ದ ಬಯಕೆಯು ಮೇಲಕ್ಕೆ ಬಂದು ಫಲಿಸಿತೇ? ವಿಜಯವೆಂಬ ನಿನ್ನ ಹೆಸರು ಜಡವಾಗದೇ ಚೇತನಾತ್ಮಕವಾಗಿ ಸಾರ್ಥಕವಾಯಿತೇ? ಶತ್ರುರಾಜರ ಕುಜನತೆಯನ್ನು ಕತ್ತರಿಸಿ ಹಾಕಲು ಸಮರ್ಥರಾದವೇ? ಎಂದು ಹೇಳುತ್ತಾ ಧರ್ಮಜನ ಹರ್ಷಿಸಿದನು.

ಅರ್ಥ:
ಭಜಿಸು: ಆರಾಧಿಸು; ಭರ್ಗ: ಶಿವ; ಶಾಂಭವ: ಶಿವ; ಯಜನ: ಯಜ್ಞ, ಪೂಜೆ; ಸಾರ: ಶ್ರೇಷ್ಠ; ಸಮಾಧಿ: ಏಕಾಗ್ರತೆ, ತನ್ಮಯತೆ; ಶಿವ: ಶಂಕರ; ಪದ: ಪಾದ, ಚರಣ; ರಜ: ಧೂಳು; ಬೆರಸು: ಕೂಡಿಸು; ಬಗೆ: ಯೋಚಿಸು, ಎಣಿಸು; ಕುಣಿ: ಗುಂಡಿ, ಹಳ್ಳ; ತೆವರು: ಅಟ್ಟು, ಓಡಿಸು, ಹೆದರು; ತಡಿ: ಎಲ್ಲೆ, ಮಿತಿ, ಹತ್ತಿರ; ತೆಗೆ: ಈಚೆಗೆ ತರು; ವಿಜಯ: ಗೆಲುವು; ಶಬ್ದ: ಸದ್ದು, ಸಪ್ಪಳ; ಕೃತಿ: ರಚನೆ, ಕೆಲಸ; ಜಡ: ಅಚೇತನ; ವೈರಿ: ಶತ್ರು; ರಾಯ: ರಾಜ; ಕುಜನತೆ: ಕೆಟ್ಟ ಜನ; ವಿಚ್ಛೇದ: ಕಡಿ; ಸಾಧ್ಯ: ಕಾರ್ಯ ರೂಪಕ್ಕೆ ತರಬಹುದಾದುದು; ಭೂಪ: ರಾಜ;

ಪದವಿಂಗಡಣೆ:
ಭಜಿಸಿದೈ +ಭರ್ಗನನು +ಶಾಂಭವ
ಯಜನ+ ಸಾರ+ಸಮಾಧಿ +ಶಿವ+ಪದ
ರಜವ +ಬೆರಸಿತೆ+ ಬಗೆಯ+ಕುಣಿ +ತೆವರಾಯ್ತೆ ತ+ಡಿದೆಗೆದು
ವಿಜಯ +ಶಬ್ದವು +ಪಾರ್ಥ+ಕೃತಿಯಲಿ
ಅಜಡವಲ್ಲಲೆ +ವೈರಿ+ ರಾಯರ
ಕುಜನತಾ +ವಿಚ್ಛೇದ +ಸಾಧ್ಯವೆ+ಎಂದನಾ +ಭೂಪ

ಅಚ್ಚರಿ:
(೧) ಯಜನ ಕುಜನ; ರಜ, ಅಜ – ಪ್ರಾಸ ಪದಗಳು