ಪದ್ಯ ೨೨: ಕರ್ಣನು ಭೀಮನೊಡನೆ ಹೇಗೆ ಯುದ್ಧ ಮಾಡಿದನು?

ಸಾರೆಲವೊ ಸಾಯದೆ ವೃಥಾಹಂ
ಕಾರವೇತಕೆ ನುಗ್ಗ ಸದೆದ ಕ
ಠೋರ ಸಾಹಸವಿಲ್ಲಿ ಕೊಳ್ಳದು ಕರ್ಣ ತಾನೆನುತ
ಆರಿದೈದಂಬಿನಲಿ ಪವನಕು
ಮಾರಕನನೆಸೆ ಮೇಘ ಘನಗಂ
ಭೀರರವದಲಿ ಭೀಮ ನುಡಿದನು ಭಾನುನಂದನನ (ದ್ರೋಣ ಪರ್ವ, ೧೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಎಲೋ ಭೀಮ, ನುಗ್ಗುನುಸಿಗಳನ್ನು ಬಡಿದು ಬಂಡು ವೃಥ ಅಹಂಕಾರದಿಂದ ಸಾಹಸ ಮಾಡಲು ಬಂದರೆ ಇಲ್ಲಿ ನಡೆಯುವುದಿಲ್ಲ. ನಾನು ಕರ್ಣ, ಎನ್ನುತ್ತಾ ಗರ್ಜಿಸಿ ಭೀಮನನ್ನು ಐದು ಬಾಣಗಳಿಂದ ಹೊಡೆಯಲು ಭೀಮನು ಗಂಭೀರ ಶಬ್ದಗಳಿಂದ ಕರ್ಣನಿಗೆ ಹೀಗೆ ಹೇಳಿದನು.

ಅರ್ಥ:
ಸಾರು: ಪ್ರಕಟಿಸು, ಘೋಷಿಸು; ವೃಥ: ಸುಮ್ಮನೆ; ಅಹಂಕಾರ: ಗರ್ವ; ನುಗ್ಗು: ಳ್ಳಿಕೊಂಡು ಮುಂದೆ ಸರಿ; ಸದೆ: ಹೊಡಿ, ಬಡಿ; ಕಠೋರ: ಬಿರುಸಾದ; ಸಾಹಸ: ಪರಾಕ್ರಮ; ಕೊಳ್ಳು: ಪಡೆ; ಅಂಬು: ಬಾಣ; ಪವನಕುಮರ: ವಾಯುಪುತ್ರ (ಭೀಮ); ಮೇಘ: ಮೋಡ; ಘನ: ಶ್ರೇಷ್ಠ; ಗಂಭೀರ: ಆಳವಾದ; ರವ: ಶಬ್ದ; ನುಡಿ: ಮಾತಾಡಿಸು; ಭಾನು: ಸೂರ್ಯ; ನಂದನ: ಮಗ;

ಪದವಿಂಗಡಣೆ:
ಸಾರ್+ಎಲವೊ +ಸಾಯದೆ +ವೃಥ+ಅಹಂ
ಕಾರವ್+ಏತಕೆ +ನುಗ್ಗ +ಸದೆದ +ಕ
ಠೋರ+ ಸಾಹಸವ್+ಇಲ್ಲಿ +ಕೊಳ್ಳದು +ಕರ್ಣ +ತಾನೆನುತ
ಆರಿದ್+ಐದಂಬಿನಲಿ +ಪವನಕು
ಮಾರಕನನ್+ಎಸೆ +ಮೇಘ +ಘನ+ಗಂ
ಭೀರ + ರವದಲಿ +ಭೀಮ +ನುಡಿದನು +ಭಾನುನಂದನನ

ಅಚ್ಚರಿ:
(೧) ಪವನಕುಮಾರ, ಭಾನುನಂದನ – ಕರ್ಣ ಮತ್ತು ಭೀಮರನ್ನು ಕರೆದ ಪರಿ
(೨) ಭೀಮನ ಆರ್ಭಟ – ಮೇಘ ಘನಗಂಭೀರರವದಲಿ ಭೀಮ ನುಡಿದನು