ಪದ್ಯ ೧೦: ವಿಧಿಯು ಧರ್ಮಜನ ಮೇಲೆ ಹೇಗೆ ಕೋಪಗೊಂಡಿತು?

ನಕುಲ ಸಹದೇವಾರ್ಜುನರ ಮಣಿ
ಮಕುಣ ಕರ್ಣಾಭರಣ ಪದಕಾ
ಧಿಕ ಸಮಸ್ತಾಭರಣವೊಡ್ಡಿತು ಹಲಗೆಯೊಂದರಲಿ
ವಿಕಟ ಮಾಯಾ ವಿಷಮ ಕರ್ಮವ
ನಕಟ ಬಲ್ಲನೆ ಸಾಧುಜನ ಸೇ
ವಕನು ಸೋತನು ಸಾಧ್ಯವಹುದೇ ವಿಧಿಯ ಮುಳಿಸಿನಲಿ (ಸಭಾ ಪರ್ವ, ೧೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ನಕುಲ ಸಹದೇವ ಅರ್ಜುನರ ಮಣಿಭರಿತ ಮಕುಟ, ಧರಿಸಿದ್ದ ಪದಕ, ಕರ್ಣಾಭರಣವೇ ಮೊದಲಾದ ಸಮಸ್ತ ಒಡವೆಗಳನ್ನೂ ಒಂದು ಹಲಗೆಯಲ್ಲಿ ಸೋತನು. ಸಾಧುಜನರ ಸೇವಕನಾದ ಧರ್ಮಜನು ಮಾಯೆಯ ತಳಮೇಲು ಮಾಡುವ ಕರ್ಮವನ್ನು ಅರಿಯುವುದಾದರೂ ಹೇಗೆ? ವಿಧಿಯು ಯುಧಿಷ್ಠಿರನ ಮೇಲೆ ಕೋಪಗೊಂಡಿತು. ವಿಧಿಯ ಕೋಪವನ್ನು ತಡೆಯಲು ಸಾಧ್ಯವೇ?
ವಿಧಿಯು ಯುಧಿಷ್ಠಿರನ ಮೇಲೆ ಮುಳಿಯಿತು.

ಅರ್ಥ:
ಮಣಿ: ಬೆಲೆಬಾಳುವ ರತ್ನ; ಮಕುಟ: ಕಿರೀಟ; ಕರ್ಣ: ಕಿವಿ; ಆಭರಣ: ಒಡವೆ; ಪದಕ: ಹಾರಗಳಲ್ಲಿ ಅಳವಡಿಸುವ ಅಲಂಕಾರದ ಬಿಲ್ಲೆ; ಅಧಿಕ: ಹೆಚ್ಚು; ಸಮಸ್ತ: ಎಲ್ಲಾ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಹಲಗೆ: ಮರದ ಅಗಲವಾದ ಹಾಗೂ ತೆಳುವಾದ ಸೀಳು, ಪಟ; ವಿಕಟ: ವಕ್ರವಾದ, ವಿಡಂಬನ; ಮಾಯ: ಗಾರುಡಿ, ಭ್ರಾಂತಿ; ವಿಷಮ: ಕಷ್ಟಕರ; ಕರ್ಮ: ಕೆಲಸ, ಕಾರ್ಯದ ಫಲ; ಅಕಟ: ಅಯ್ಯೋ; ಬಲ್ಲನೆ: ತಿಳಿದವ; ಸಾಧುಜನ: ಸಜ್ಜನ; ಸೇವಕ: ಆಳು; ಸೋತು: ಪರಾಭವ; ಸಾಧ್ಯ: ಸಾಧಿಸಬಹುದಾದುದು; ವಿಧಿ: ಆಜ್ಞೆ, ಆದೇಶ, ನೇಮ; ಮುಳಿಸು: ಕೆರಳು, ಕೋಪಗೊಳ್ಳು;

ಪದವಿಂಗಡಣೆ:
ನಕುಲ +ಸಹದೇವ+ಅರ್ಜುನರ +ಮಣಿ
ಮಕುಣ +ಕರ್ಣಾಭರಣ +ಪದಕ+
ಅಧಿಕ +ಸಮಸ್ತ+ಆಭರಣವ್+ಒಡ್ಡಿತು +ಹಲಗೆ+ಒಂದರಲಿ
ವಿಕಟ +ಮಾಯಾ +ವಿಷಮ +ಕರ್ಮವನ್
ಅಕಟ +ಬಲ್ಲನೆ +ಸಾಧುಜನ +ಸೇ
ವಕನು +ಸೋತನು +ಸಾಧ್ಯವಹುದೇ +ವಿಧಿಯ +ಮುಳಿಸಿನಲಿ

ಅಚ್ಚರಿ:
(೧) ವಿಕಟ, ಅಕಟ – ಪ್ರಾಸಪದ
(೨) ವಿಧಿಯ ಕೋಪದ ಪ್ರತಾಪ – ಸಾಧುಜನ ಸೇವಕನು ಸೋತನು ಸಾಧ್ಯವಹುದೇ ವಿಧಿಯ ಮುಳಿಸಿನಲಿ
(೩) ಯುಧಿಷ್ಠಿರನನ್ನು ಸಾಧುಜನ ಸೇವಕ ಎಂದು ಹೊಗಳಿರುವುದು