ಪದ್ಯ ೧೪: ಶಕುನಿ ಯಾವ ಕಾಲ ಒಳಿತೆಂದನು?

ಅವರ ವನವಾಸದ ದಿನಂಗಳು
ನವಗೆ ಸುದಿನ ಸುಖಾನುಭವವವ
ರವಧಿ ತುಂಬಿದ ಬಳಿಕ ನೋಡಾ ಸಾಧುಗಳ ಪರಿಯ
ನಿನಗೆ ದುರ್ಯೋಧನನ ಸಾಮ್ರಾ
ಜ್ಯವ ನಿರೀಕ್ಷಿಸುವರ್ತಿಯಲಿ ಪಾಂ
ಡವರ ಹಂಬಲ ಬಿಡುವುದುಚಿತವಿದೆಂದನಾ ಶಕುನಿ (ಅರಣ್ಯ ಪರ್ವ, ೧೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅವರು ಕಾಡಿನಲ್ಲಿರುವ ದಿನಗಳೇ ನಮಗೆ ಸುದಿನಗಳು. ಸುಖವನ್ನನುಭವಿಸುವ ದಿನಗಳು. ವನವಾಸ ಮುಗಿಯಲಿ ನೀನು ಯಾರಿಗೆ ಮರುಗುತ್ತಿರುವೆಯೋ ಆ ಸಾಧುಗಳ ನಿಜವಾದ ಬಣ್ನ ಬಯಲಾಗುತ್ತದೆ. ದುರ್ಯೋಧನನ ಸಾಮ್ರಾಜ್ಯವನ್ನು ನೋಡುವ ಪ್ರೀತಿಯಿದ್ದರೆ, ಪಾಂಡವರು ಹಂಬಲವನ್ನು ಬಿಟ್ಟು ಬಿಡುವುದು ಉಚಿತ ಎಂದ ಶಕುನಿಯು ಹೇಳಿದನು.

ಅರ್ಥ:
ವನವಾಸ: ಕಾಡಿನಲ್ಲಿ ಜೀವನ; ದಿನ: ವಾರ; ಸುದಿನ: ಒಳ್ಳೆಯ ದಿನ; ಸುಖ: ನೆಮ್ಮದಿ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಬಳಿಕ: ನಂತರ; ಸಾಧು: ಒಳ್ಳೆಯ ಜನ; ಪರಿ: ರೀತಿ; ಸಾಮ್ರಾಜ್ಯ: ಚಕ್ರಾಧಿಪತ್ಯ; ನಿರೀಕ್ಷೆ: ನೋಡುವುದು; ಹಂಬಲ: ಆಸೆ; ಉಚಿತ: ಸರಿಯಾದ ರೀತಿ;

ಪದವಿಂಗಡಣೆ:
ಅವರ +ವನವಾಸದ +ದಿನಂಗಳು
ನವಗೆ +ಸುದಿನ +ಸುಖಾನುಭವವ್+
ಅವರ್+ಅವಧಿ+ ತುಂಬಿದ +ಬಳಿಕ +ನೋಡಾ +ಸಾಧುಗಳ +ಪರಿಯ
ನಿನಗೆ +ದುರ್ಯೋಧನನ +ಸಾಮ್ರಾ
ಜ್ಯವ +ನಿರೀಕ್ಷಿಸುವರ್ತಿಯಲಿ+ ಪಾಂ
ಡವರ+ ಹಂಬಲ+ ಬಿಡುವುದ್+ಉಚಿತವಿದೆಂದನಾ+ ಶಕುನಿ

ಅಚ್ಚರಿ:
(೧) ಶಕುನಿಯ ಉಪದೇಶ – ಪಾಂಡವರ ಹಂಬಲ ಬಿಡುವುದುಚಿತವಿದೆಂದನಾ ಶಕುನಿ