ಪದ್ಯ ೩: ಭೀಮನನ್ನು ಹುಡುಕಲು ಯಾರು ಬಂದರು?

ಆ ಸಕಲ ಪರಿವಾರ ರಾಣೀ
ವಾಸ ಸಹಿತಾರಣ್ಯ ಭವನಾ
ಭ್ಯಾಸಿ ಬಂದನು ಭೀಮಸೇನನ ಗಮನ ಪಥವಿಡಿದು
ಆ ಸುಗಂಧಿಕ ಕಮಲ ಪರಿಮಳ
ಬಾಸಣಿಸಿತೀ ಜನಮನೊವಿ
ನ್ಯಾಸವನು ಇದೆ ಬಂದನನಿಲಜನೆಂದುದಖಿಳ ಜನ (ಅರಣ್ಯ ಪರ್ವ, ೧೨ ಸಂಧಿ, ೩ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನ ಪರಿವಾರ, ರಾಣೀವಾಸದ ಜನರು ಮತ್ತು ಕಾಡುಜನರ ಜೊತೆ ಭೀಮನು ಹೋದ ದಾರಿಯಲ್ಲಿ ಬರುತ್ತಿರಲು, ಸೌಗಂಧಿಕ ಕಮಲದ ಪರಿಮಳವು ಜನರ ಮನಸ್ಸನ್ನು ಆಹ್ಲಾದಗೊಳಿಸಿತು, ಇದೋ ಭೀಮ ಬಂದನು ಎಂದು ಎಲ್ಲರೂ ಹೇಳಿದರು.

ಅರ್ಥ:
ಸಕಲ: ಎಲ್ಲಾ; ಪರಿವಾರ: ಬಂಧುಜನ; ರಾಣಿ: ಅರಸಿ; ಸಹಿತ: ಜೊತೆ; ಅರಣ್ಯ: ಕಾಡು; ಭವನ: ಆಲಯ; ಅಭ್ಯಾಸಿ: ಕಲಿಯಲು ಶ್ರಮಿಸುವವ; ಬಂದು: ಆಗಮಿಸು; ಗಮನ: ನಡೆಯುವುದು, ನಡಗೆ; ಪಥ: ಮಾರ್ಗ; ಕಮಲ: ತಾವರೆ; ಪರಿಮಳ: ಸುಗಂಧ; ಬಾಸಣಿಸು: ಮುಚ್ಚು; ವಿನ್ಯಾಸ: ರಚನೆ; ಅನಿಲಜ: ವಾಯುಪುತ್ರ;

ಪದವಿಂಗಡಣೆ:
ಆ +ಸಕಲ+ ಪರಿವಾರ+ ರಾಣೀ
ವಾಸ +ಸಹಿತ+ಅರಣ್ಯ +ಭವನ
ಅಭ್ಯಾಸಿ +ಬಂದನು +ಭೀಮಸೇನನ +ಗಮನ +ಪಥವಿಡಿದು
ಆ +ಸುಗಂಧಿಕ+ ಕಮಲ+ ಪರಿಮಳ
ಬಾಸಣಿಸಿತೀ +ಜನಮನೊ+ವಿ
ನ್ಯಾಸವನು +ಇದೆ +ಬಂದನ್+ಅನಿಲಜನ್+ಎಂದುದ್+ಅಖಿಳ +ಜನ