ಪದ್ಯ ೨೧: ಕೌರವ ವೀರರು ಹೇಗೆ ನುಗ್ಗಿದರು?

ದೊದ್ದೆ ತೆಗೆಯಲಿ ಪಾರ್ಥ ಪವನಜ
ರಿದ್ದರಾದರೆ ಬರಲಿ ಸಮರವ
ಹೊದ್ದಲಾಪರೆ ಹೊಗಲಿ ಹರಿ ತೋರಲಿ ಸಹಾಯತೆಯ
ಇದ್ದರೆಯು ರಣವಿಜಯ ವನಿತೆಗೆ
ಹೊದ್ದಿಗರು ದ್ರುಪದಾದಿ ರಾಯರ
ಹೊದ್ದಿಸಲು ಬೇಡವರಿಗಂಜುವೆವೆನುತ ನೂಕಿದರು (ಭೀಷ್ಮ ಪರ್ವ, ೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕೆಲಸಕ್ಕೆ ಬಾರದ ಸೈನಿಕರು ತೊಲಗಲಿ, ಅವರಿಂದ ಏನಾದೀತು? ಭೀಮಾರ್ಜುನರಿದ್ದರೆ ಬರಲಿ, ಅವರಿಗೆ ಯುದ್ಧ ಚಾತುರ್ಯವಿಲ್ಲದಾದರೆ ಕೃಷ್ಣನಿಂದ ಸಹಾಯ ಪಡೆಯಲಿ, ಒಂದು ವೇಳೆ ದ್ರುಪದನೇ ಮೊದಲಾದ ರಾಜರು ಸನ್ನದ್ಧರಾಗಿದ್ದರೂ ವಿಜಯಲಕ್ಷ್ಮಿಯನ್ನವರು ಒಲಿಸಲು ಬರುವುದು ಬೇಡ, ನಾವು ಅವರಿಗೆ ಹೆದರುತ್ತೇವೆ ಎನ್ನುತ್ತಾ ಕೌರವ ವೀರರು ನುಗ್ಗಿದರು.

ಅರ್ಥ:
ದೊದ್ದೆ: ಗುಂಪು; ತೆಗೆ: ಹೊರತರು; ಪವನಜ: ವಾಯುಪುತ್ರ (ಭೀಮ); ಬರಲಿ: ಆಗಮಿಸಲಿ; ಸಮರ: ಯುದ್ಧ; ಹೊದ್ದು:ಪಡೆದುಕೊ, ಒದಗಿಬರು; ಹೊಗು: ಒಳಸೇರು, ಪ್ರವೇಶಿಸು; ಹರಿ: ವಿಷ್ಣು, ಕೃಷ್ಣ; ತೋರು: ಗೋಚರ; ಸಹಾಯ: ನೆರವು; ರಣ: ರಣರಂಗ, ಯುದ್ಧ; ವಿಜಯ: ಗೆಲುವು; ವನಿತೆ: ಹೆಣ್ಣು; ಆದಿ: ಮೊದಲಾದ; ರಾಯ: ರಾಜ; ಬೇಡ: ಸಲ್ಲದು, ಕೂಡದು; ಅಂಜು: ಹೆದರು; ನೂಕು: ತಳ್ಳು;

ಪದವಿಂಗಡಣೆ:
ದೊದ್ದೆ +ತೆಗೆಯಲಿ +ಪಾರ್ಥ +ಪವನಜರ್
ಇದ್ದರ್+ಆದರೆ +ಬರಲಿ +ಸಮರವ
ಹೊದ್ದಲಾಪರೆ+ ಹೊಗಲಿ+ ಹರಿ +ತೋರಲಿ +ಸಹಾಯತೆಯ
ಇದ್ದರೆಯು +ರಣವಿಜಯ +ವನಿತೆಗೆ
ಹೊದ್ದಿಗರು+ ದ್ರುಪದಾದಿ +ರಾಯರ
ಹೊದ್ದಿಸಲು+ ಬೇಡ್+ಅವರಿಗ್+ಅಂಜುವೆವ್+ಎನುತ +ನೂಕಿದರು

ಅಚ್ಚರಿ:
(೧) ವಿಜಯಲಕ್ಷ್ಮಿ ಎಂದು ಹೇಳುವ ಪರಿ – ರಣವಿಜಯ ವನಿತೆ
(೨) ಹ ಕಾರದ ತ್ರಿವಳಿ ಪದ – ಹೊದ್ದಲಾಪರೆ ಹೊಗಲಿ ಹರಿ

ಪದ್ಯ ೧೦: ಮುಕ್ತಿರಾಜ್ಯವನ್ನು ಹೇಗೆ ವಶಪಡಿಸಿಕೊಳ್ಳಬೇಕು?

ಕಾಯವಿದು ನೆಲೆಯಲ್ಲ ಸಿರಿತಾ
ಮಾಯರೂಪಿನ ಮೃತ್ಯು ದೇವತೆ
ಬಾಯಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿತು ಮಹಾತ್ಮರಿದಕೆ ಸ
ಹಾಯ ಧರ್ಮವ ವಿರಚಿಸುತ ನಿ
ರ್ದಾಯದಲಿ ಕೈ ಸೂರೆಗೊಂಬುದು ಮುಕ್ತಿ ರಾಜ್ಯವನು (ಉದ್ಯೋಗ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಈ ದೇಹವು ಶಾಶ್ವತವಲ್ಲ. ಐಶ್ವರ್ಯವು ಮಾಯರೂಪವಾಗಿರುವು ಮೃತ್ಯು ದೇವತೆ, ಇದು ಬಾಯಿಬಿಡುತ್ತಾ ಇವನ ಕಾಲವೆಂದು ಕೊನೆಗೊಳ್ಳುತ್ತದೆ ಎಂದು ಕಾಯುತ್ತಿದಾಳೆ. ಈ ವ್ಯೂಹವನ್ನು ಯಾವ ಲೆಕ್ಕದಿಂದ ದಾಟಬೇಕು ಎಂದರಿತ ಮಹಾತ್ಮರು, ಧರ್ಮದ ಸಹಾಯದಿಂದ ಜೀವನವನ್ನು ರೂಪಿಸಿಕೊಂಡು, ಮೋಕ್ಷದ ಸ್ಥಾನಕ್ಕೆ ನಿರ್ದಾಕ್ಷಿಣ್ಯದಿಂದ ವಶಪಡಿಸಿಕೊಳ್ಳಬೇಕು.

ಅರ್ಥ:
ಕಾಯ: ದೇಹ; ನೆಲೆ: ಆಶ್ರಯ, ವಾಸಸ್ಥಾನ; ಸಿರಿ: ಐಶ್ವರ್ಯ; ಮಾಯ: ಇಂದ್ರಜಾಲ; ರೂಪ: ಆಕಾರ; ಮೃತ್ಯು: ಸಾವು; ದೇವತೆ: ದೇವಿ; ಬಾಯಿ: ಮುಖದ ಅಂಗ; ಬಿಡು: ಅಡೆಯಿಲ್ಲದಿರು ; ಕಾಲ: ಸಮಯ, ಸಾವು; ದಾಯ: ರೀತಿ; ಪಾಲು; ಅರಿ: ತಿಳಿ; ಮಹಾತ್ಮ: ಶ್ರೇಷ್ಠ; ಸಹಾಯ: ನೆರವು; ಧರ್ಮ: ಧಾರಣೆ ಮಾಡಿರುವುದು; ವಿರಚಿಸು: ಕಟ್ಟು, ನಿರ್ಮಿಸು; ನಿರ್ದಾಯದ: ಅಖಂಡ; ಕೈ: ಕರ; ಸೂರೆ: ಸುಲಿಗೆ; ಮುಕ್ತಿ: ಮೋಕ್ಷ; ರಾಜ್ಯ: ದೇಶ;

ಪದವಿಂಗಡಣೆ:
ಕಾಯವಿದು +ನೆಲೆಯಲ್ಲ +ಸಿರಿ+ತಾ+
ಮಾಯ+ರೂಪಿನ +ಮೃತ್ಯು +ದೇವತೆ
ಬಾಯಬಿಡುತಿಹಳ್ +ಆವುದೀತನ+ ಕಾಲಗತಿಯೆಂದು
ದಾಯವರಿತು +ಮಹಾತ್ಮರ್+ಇದಕೆ +ಸ
ಹಾಯ +ಧರ್ಮವ +ವಿರಚಿಸುತ+ ನಿ
ರ್ದಾಯದಲಿ +ಕೈ +ಸೂರೆಗೊಂಬುದು+ ಮುಕ್ತಿ +ರಾಜ್ಯವನು

ಅಚ್ಚರಿ:
(೧) ಕಾಯ, ಮಾಯ, ದಾಯ, ಸಹಾಯ, ನಿರ್ದಾಯ, ಬಾಯ – ಪ್ರಾಸ ಪದಗಳು
(೨) ಕಾಲ, ಮೃತ್ಯು – ಸಮನಾರ್ಥಕ ಪದ