ದೊದ್ದೆ ತೆಗೆಯಲಿ ಪಾರ್ಥ ಪವನಜ
ರಿದ್ದರಾದರೆ ಬರಲಿ ಸಮರವ
ಹೊದ್ದಲಾಪರೆ ಹೊಗಲಿ ಹರಿ ತೋರಲಿ ಸಹಾಯತೆಯ
ಇದ್ದರೆಯು ರಣವಿಜಯ ವನಿತೆಗೆ
ಹೊದ್ದಿಗರು ದ್ರುಪದಾದಿ ರಾಯರ
ಹೊದ್ದಿಸಲು ಬೇಡವರಿಗಂಜುವೆವೆನುತ ನೂಕಿದರು (ಭೀಷ್ಮ ಪರ್ವ, ೮ ಸಂಧಿ, ೨೧ ಪದ್ಯ)
ತಾತ್ಪರ್ಯ:
ಕೆಲಸಕ್ಕೆ ಬಾರದ ಸೈನಿಕರು ತೊಲಗಲಿ, ಅವರಿಂದ ಏನಾದೀತು? ಭೀಮಾರ್ಜುನರಿದ್ದರೆ ಬರಲಿ, ಅವರಿಗೆ ಯುದ್ಧ ಚಾತುರ್ಯವಿಲ್ಲದಾದರೆ ಕೃಷ್ಣನಿಂದ ಸಹಾಯ ಪಡೆಯಲಿ, ಒಂದು ವೇಳೆ ದ್ರುಪದನೇ ಮೊದಲಾದ ರಾಜರು ಸನ್ನದ್ಧರಾಗಿದ್ದರೂ ವಿಜಯಲಕ್ಷ್ಮಿಯನ್ನವರು ಒಲಿಸಲು ಬರುವುದು ಬೇಡ, ನಾವು ಅವರಿಗೆ ಹೆದರುತ್ತೇವೆ ಎನ್ನುತ್ತಾ ಕೌರವ ವೀರರು ನುಗ್ಗಿದರು.
ಅರ್ಥ:
ದೊದ್ದೆ: ಗುಂಪು; ತೆಗೆ: ಹೊರತರು; ಪವನಜ: ವಾಯುಪುತ್ರ (ಭೀಮ); ಬರಲಿ: ಆಗಮಿಸಲಿ; ಸಮರ: ಯುದ್ಧ; ಹೊದ್ದು:ಪಡೆದುಕೊ, ಒದಗಿಬರು; ಹೊಗು: ಒಳಸೇರು, ಪ್ರವೇಶಿಸು; ಹರಿ: ವಿಷ್ಣು, ಕೃಷ್ಣ; ತೋರು: ಗೋಚರ; ಸಹಾಯ: ನೆರವು; ರಣ: ರಣರಂಗ, ಯುದ್ಧ; ವಿಜಯ: ಗೆಲುವು; ವನಿತೆ: ಹೆಣ್ಣು; ಆದಿ: ಮೊದಲಾದ; ರಾಯ: ರಾಜ; ಬೇಡ: ಸಲ್ಲದು, ಕೂಡದು; ಅಂಜು: ಹೆದರು; ನೂಕು: ತಳ್ಳು;
ಪದವಿಂಗಡಣೆ:
ದೊದ್ದೆ +ತೆಗೆಯಲಿ +ಪಾರ್ಥ +ಪವನಜರ್
ಇದ್ದರ್+ಆದರೆ +ಬರಲಿ +ಸಮರವ
ಹೊದ್ದಲಾಪರೆ+ ಹೊಗಲಿ+ ಹರಿ +ತೋರಲಿ +ಸಹಾಯತೆಯ
ಇದ್ದರೆಯು +ರಣವಿಜಯ +ವನಿತೆಗೆ
ಹೊದ್ದಿಗರು+ ದ್ರುಪದಾದಿ +ರಾಯರ
ಹೊದ್ದಿಸಲು+ ಬೇಡ್+ಅವರಿಗ್+ಅಂಜುವೆವ್+ಎನುತ +ನೂಕಿದರು
ಅಚ್ಚರಿ:
(೧) ವಿಜಯಲಕ್ಷ್ಮಿ ಎಂದು ಹೇಳುವ ಪರಿ – ರಣವಿಜಯ ವನಿತೆ
(೨) ಹ ಕಾರದ ತ್ರಿವಳಿ ಪದ – ಹೊದ್ದಲಾಪರೆ ಹೊಗಲಿ ಹರಿ