ಆರಿವರು ಸಹದೇವ ನಕುಲರೆ
ಭಾರಿಯಾಳುಗಳಹಿರಲೇ ಬಿಲು
ಗಾರರಲ್ಲಾ ಕಳಶಸಿಂಧನ ಕೋಲ ಮಕ್ಕಳಲೇ
ಸೈರಿಸಿದರೊಪ್ಪುವುದಲೇ ಜ
ಜ್ಝಾರತನಕಾಭರಣವಹುದೆನು
ತಾರುಭಟೆಯಲಿ ಶಲ್ಯ ಹಳಚಿದನರ್ಜುನಾನುಜರ (ಶಲ್ಯ ಪರ್ವ, ೨ ಸಂಧಿ, ೨೨ ಪದ್ಯ)
ತಾತ್ಪರ್ಯ:
ಇವರು ಯಾರು? ನಕುಲ ಸಹದೇವರೇ? ಮಹಾವೀರರೋ? ಬಾಣವಿದ್ಯೆಯ ಗುರು ದ್ರೋಣನ ಶಿಷ್ಯರಲ್ಲವೇ? ಯುದ್ಧದಲ್ಲಿ ನನ್ನ ಹೊಡೆತವನ್ನು ತಡೆದುಕೊಂಡರೆ ಆಗ ನೀವು ವೀರರೆಂದು ಒಪ್ಪಬಹುದು. ನಿಮ್ಮ ಶೌರ್ಯಕ್ಕೆ ಭೂಷನವೆನಿಸೀತು, ಎನ್ನುತ್ತಾ ಶಲ್ಯನು ನಕುಲ ಸಹದೇವರೊಡನೆ ಹೋರಾಡಿದನು.
ಅರ್ಥ:
ಭಾರಿ: ದೊಡ್ಡ; ಆಳು: ಸೇವಕ, ವೀರ; ಬಿಲುಗಾರ: ಬಿಲ್ವಿದ್ಯೆಯಲ್ಲಿ ನುರಿತನಾದ; ಕಳಶಸಿಂಧ: ದ್ರೋಣ; ಕೋಲು: ಬಾಣ; ಮಕ್ಕಳು: ಸುತರು; ಸೈರಿಸು: ತಳು; ಒಪ್ಪು: ಸಮ್ಮತಿ; ಜಜ್ಝಾರ: ಪರಾಕ್ರಮಿ, ಶೂರ; ಆಭರಣ: ಒಡವೆ; ಆರುಭಟೆ: ಆರ್ಭಟ; ಹಳಚು: ತಾಗು, ಬಡಿ; ಅನುಜ: ತಮ್ಮ;
ಪದವಿಂಗಡಣೆ:
ಆರಿವರು +ಸಹದೇವ +ನಕುಲರೆ
ಭಾರಿ+ಆಳುಗಳಹಿರಲೇ+ ಬಿಲು
ಗಾರರಲ್ಲಾ +ಕಳಶಸಿಂಧನ+ ಕೋಲ +ಮಕ್ಕಳಲೇ
ಸೈರಿಸಿದರ್+ಒಪ್ಪುವುದಲೇ +ಜ
ಜ್ಝಾರತನಕ್+ಆಭರಣವಹುದ್+ಎನುತ್
ಆರುಭಟೆಯಲಿ +ಶಲ್ಯ +ಹಳಚಿದನ್+ಅರ್ಜುನ+ಅನುಜರ
ಅಚ್ಚರಿ:
(೧) ೪ ಸಾಲು ಒಂದೇ ಪದವಾಗಿ ರಚನೆ – ಜ್ಝಾರತನಕಾಭರಣವಹುದೆನು