ಪದ್ಯ ೧೦: ಅಂತಃಪುರದಲ್ಲಿ ಯಾವ ಭೀತಿ ಹಬ್ಬಿತು?

ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ (ಗದಾ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಾಳೆಯದ ಅರಮನೆಗೆ ಸಂಜಯನು ಬಂದು, ಮಂತ್ರಿಗಳನ್ನು ಅಕ್ರೆಸಿ, ಕೌರವನ ಸರ್ವವೂ ಇಲ್ಲದಂತಾಗಿದೆ. ಅರಸನು ಓಡಿಹೋಗಿದ್ದಾನೆ ಎಂಬ ಗುಟ್ಟನ್ನು ಅವರಿಗೆ ತಿಳಿಸಿದನು. ಭಾನುಮತಿಗೆ ಇದು ತಿಳಿಯಿತು, ಅವಳು ಉಳಿದ ರಾಣಿಯರಿಗೆ ತಿಳಿಸಿದಳು. ಅಂತಃಪುರದಲ್ಲಿ ಯುದ್ಧದಲ್ಲಿ ಸೋಲಾದ ಭೀತಿ ಹಬ್ಬಿತು.

ಅರ್ಥ:
ಅರಮನೆ: ರಾಜರ ಆಲಯ; ಬಂದು: ಆಗಮಿಸು; ಅಖಿಳ: ಎಲ್ಲಾ; ಸಚಿವ: ಮಂತ್ರಿ; ಕರಸು: ಬರೆಮಾಡು; ರಹಸ್ಯ: ಗುಟ್ಟು; ವಿಸ್ತರಿಸು: ವಿಸ್ತಾರವಾಗಿ ತಿಳಿಸು; ಸರ್ವ: ಎಲ್ಲವೂ; ಅಪಹಾರ: ಕಿತ್ತುಕೊಳ್ಳುವುದು; ನೃಪ: ರಾಜ; ಪಲಾಯನ: ಓಡಿಹೋಗು; ಅರಸಿ: ರಾಣಿ; ಅರಿ: ತಿಳಿ; ಮಿಕ್ಕ: ಉಳಿದ; ಅರುಹು: ತಿಳಿಸು; ಅಂತಃಪುರ: ರಾಣಿಯರ ವಾಸಸ್ಥಾನ; ಹರೆದು: ವ್ಯಾಪಿಸು; ರಣ: ಯುದ್ಧ; ಭೀತಿ: ಭಯ;

ಪದವಿಂಗಡಣೆ:
ಅರಮನೆಗೆ +ಬಂದ್+ಅಖಿಳ +ಸಚಿವರ
ಕರಸಿದನು +ಸರಹಸ್ಯವನು +ವಿ
ಸ್ತರಿಸಿದನು +ಸರ್ವ+ಅಪಹಾರವ +ನೃಪ+ಪಲಾಯನವ
ಅರಸಿ+ಅರಿದಳು +ಭಾನುಮತಿ +ಮಿ
ಕ್ಕರಸಿಯರಿಗ್+ಅರುಹಿಸಿದಳ್+ಅಂತಃ
ಪುರದೊಳ್+ಅಲ್ಲಿಂದಲ್ಲಿ +ಹರೆದುದು +ಕೂಡೆ +ರಣಭೀತಿ

ಅಚ್ಚರಿ:
(೧) ಅರಸಿ, ಮಿಕ್ಕರಸಿ, ಕರಸಿ, ವಿಸ್ತರಿಸಿ – ಪ್ರಾಸ ಪದ

ಪದ್ಯ ೧೧: ವ್ಯಾಸರು ಯಾವ ಭವಿಷ್ಯವನ್ನು ನುಡಿದರು?

ಈ ಪವಿತ್ರೋದಕವಲೇ ದೋ
ಷಾಪಹರ ದರ್ಭಾಸನದಲಿಂ
ದೀ ಪೃಥಿವಿ ಸರ್ವಾಧಿಪತ್ಯವು ಸೇರುವುದು ನಿನಗೆ
ಭೂಪಕೇಳೈ ಜೇನುನೊಣದ ಮ
ಧೂಪಚಯವವಕಿಲ್ಲಲೇ ಸ
ರ್ವಾಪಹಾರವು ಪರರಿಗಾ ಕೌರವನ ಸಿರಿಯೆಂದ (ಅರಣ್ಯ ಪರ್ವ, ೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಎಲೈ ರಾಜ, ನೀನು ನೀಡಿದ ಪವಿತ್ರ ಜಲವು ಎಲ್ಲಾ ದೋಷಗಳನ್ನು ಪರಿಹರಿಸಿತು. ನೀನು ನೀಡಿದ ದರ್ಭಾಸನದಿಂದ ಈ ಭೂಮಿಯ ಸರ್ವಾಧಿಪತ್ಯವೂ ನಿನಗೆ ಸೇರುತ್ತದೆ. ರಾಜನೇ ಕೇಳು ಹಲವು ಹೂಗಳಿಂದ ಹೀರಿತಂದು ಮಾಡಿದ ಜೇನು ತುಪ್ಪವು ಯಾವ ರೀತಿ ಜೀನುನೊಣಗಳಿಗೆ ದಕ್ಕುವುದಿಲ್ಲವೋ ಹಾಗೆಯೇ ಕೌರವನ ಐಶ್ವರ್ಯವೆಲ್ಲವೂ ಇತರಉ ಅಪಹರಿಸುತ್ತಾರೆ ಎಂದು ವ್ಯಾಸರು ಹೇಳಿದರು.

ಅರ್ಥ:
ಪವಿತ್ರ: ಶುದ್ಧ; ಉದಕ: ನೀರು; ದೋಷ: ಕುಂದು, ಕಳಂಕ; ಪರಿಹರಿಸು: ನಿವಾರಣೆ, ಹೋಗಲಾಡಿಸು; ದರ್ಭೆ: ಹುಲ್ಲು; ಆಸನ: ಪೀಠ; ಪೃಥಿವಿ: ಭೂಮಿ; ಸರ್ವಾಧಿಪತ್ಯ: ಚಕ್ರೇಶ್ವರ ಸ್ಥಾನ; ಸೇರು: ಜೊತೆಗೂಡು; ಭೂಪ: ರಾಜ; ಕೇಳು: ಆಲಿಸು; ಜೇನು: ಮಧು; ಉಪಚಯ: ಶೇಖರಣೆ; ಅವಕ್ಕೆ; ತಮಗೆ; ಸರ್ವ: ಎಲ್ಲಾ; ಅಪಹಾರ: ಕಿತ್ತುಕೊಳ್ಳುವುದು; ಪರರು: ಬೇರೆಯವರು; ಸಿರಿ: ಐಶ್ವರ್ಯ;

ಪದವಿಂಗಡಣೆ:
ಈ +ಪವಿತ್ರ+ಉದಕವಲೇ+ ದೋ
ಷಾಪಹರ+ ದರ್ಭಾಸನದಲಿಂದ್
ಈ+ ಪೃಥಿವಿ+ ಸರ್ವಾಧಿಪತ್ಯವು+ ಸೇರುವುದು +ನಿನಗೆ
ಭೂಪಕೇಳೈ+ ಜೇನುನೊಣದ +ಮ
ಧೂಪಚಯವ್+ ಅವಕಿಲ್ಲಲೇ +ಸ
ರ್ವ+ಅಪಹಾರವು+ ಪರರಿಗಾ+ ಕೌರವನ+ ಸಿರಿಯೆಂದ

ಅಚ್ಚರಿ:
(೧) ಸರ್ವಾಧಿಪತ್ಯ, ಸರ್ವಾಪಹಾರ – ಸರ್ವ ಪದದ ಬಳಕೆ
(೨) ಉಪಮಾನದ ಬಳಕೆ – ಜೇನುನೊಣದ ಮಧೂಪಚಯವವಕಿಲ್ಲಲೇ ಸರ್ವಾಪಹಾರವು ಪರರಿಗಾ ಕೌರವನ ಸಿರಿಯೆಂದ