ಪದ್ಯ ೪೬: ಅರ್ಜುನನು ಕೃಪ ಮತ್ತು ಅಶ್ವತ್ಥಾಮರನ್ನು ಹೇಗೆ ಯುದ್ಧಕ್ಕೆ ಕರೆದ?

ಇವರ ಹದನಿದು ಕರ್ಣನಾಡಿದ
ಕವಡಿಕೆಯ ಬೆಸುಗೊಳ್ಳಿರೈ ಕೌ
ರವನ ಸರ್ವಗ್ರಾಸಕಿವೆ ರಾಹುಗಳು ಲಟಕಟಿಸಿ
ನಿವಗೆ ಹರಿಬದೊಳೊಂದು ಮುಟ್ಟಿಗೆ
ರವಣವುಂಟೇ ಹಾಯ್ಕಿ ನಿಮ್ಮಾ
ಟವನು ನೋಡುವೆನೆಂದು ಕರೆದನು ಕೃಪನ ಗುರುಸುತನ (ಕರ್ಣ ಪರ್ವ, ೨೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಇವರ ಹಣೆಬರಹವು ಇಷ್ಟಾಯಿತು, ಕರ್ಣನ ಮೋಸದ ಮಾತೇನು ಕೇಳಿರಿ, ಕೌರವನ ಸರ್ವಸ್ವವನ್ನು ನುಂಗಲು ರಾಹುಗಳು ಆತುರದಿಂದಿವೆ. ಈ ಯುದ್ಧದಲ್ಲಿ ನಿಮ್ಮದೂ ಒಂದು ಪಣವಿದ್ದರೆ ಅದನ್ನು ಕಟ್ಟಿ ಆಟವಾಡಿ, ನಾನು ನೋಡುತ್ತೇನೆ ಎಂದು ಕೃಪ ಮತ್ತು ಅಶ್ವತ್ಥಾಮರನ್ನು ಅರ್ಜುನನು ಆಹ್ವಾನಿಸಿದನು.

ಅರ್ಥ:
ಹದ: ಸರಿಯಾದ ಸ್ಥಿತಿ; ಆಡು: ಮಾತಾಡು; ಕವಡಿಕೆ: ಮೋಸ; ಬೆಸುಗೊಳ್: ಕೇಳು, ಪ್ರಾರ್ಥಿಸು; ಸರ್ವ: ಎಲ್ಲಾ; ಗ್ರಾಸ:ತುತ್ತು, ಆಹಾರ, ಊಟ; ರಾಹು: ನವಗ್ರಹಗಳಲ್ಲಿ ಒಂದು; ಲಟಕಟಿಸು: ಉದ್ರೇಕಗೊಳ್ಳು, ಚಕಿತನಾಗು; ಹರಿಬ:ಯುದ್ಧ, ಕಾರ್ಯ; ಮುಟ್ಟಿಗೆ: ಮುಚ್ಚಿದ ಅಂಗೈ, ಮುಷ್ಟಿ, ಹಿಡಿ; ರವಣ: ಹಾಯ್ಕು: ಇಡು, ಇರಿಸು, ತೊಡು; ಆಟ: ಕ್ರೀಡೆ; ನೋಡು: ವೀಕ್ಷಿಸು; ಕರೆ: ಬರೆಮಾಡು; ಸುತ: ಮಗ; ಗುರು: ಆಚಾರ್ಯ;

ಪದವಿಂಗಡಣೆ:
ಇವರ+ ಹದನಿದು +ಕರ್ಣನಾಡಿದ
ಕವಡಿಕೆಯ +ಬೆಸುಗೊಳ್ಳಿರೈ+ ಕೌ
ರವನ +ಸರ್ವಗ್ರಾಸಕಿವೆ +ರಾಹುಗಳು +ಲಟಕಟಿಸಿ
ನಿವಗೆ +ಹರಿಬದೊಳ್+ಒಂದು +ಮುಟ್ಟಿಗೆ
ರವಣವುಂಟೇ +ಹಾಯ್ಕಿ +ನಿಮ್ಮಾ
ಟವನು +ನೋಡುವೆನೆಂದು +ಕರೆದನು +ಕೃಪನ +ಗುರುಸುತನ

ಅಚ್ಚರಿ:
(೧) ಪದಬಳಕೆ – ಕೌರವನ ಸರ್ವಗ್ರಾಸಕಿವೆ ರಾಹುಗಳು ಲಟಕಟಿಸಿ