ಪದ್ಯ ೩೯: ಅರ್ಜುನನೇಕೆ ಆಯಾಸಗೊಂಡ?

ದೊರೆಗಳೇರಿತು ರಥತುರಂಗಮ
ಕರಿಗಳಲಿ ಕಾಲಾಳ ಬಿಂಕವ
ನರಸ ಬಣ್ಣಿಸಲರಿಯೆನಾಸುರ ಕಲಹಕರ್ಮವಲೆ
ಸರಿಗರೆದ್ದುದು ಮೂರು ಕೋಟಿಯ
ಸುರರು ಸರಿಗಳಲಿಟ್ಟರಶನಿಯ
ಶರದಲೆಡೆಯಲಿ ತರುಬಿದರು ಕೈಸೋತುದೆನಗೆಂದ (ಅರಣ್ಯ ಪರ್ವ, ೧೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ರಾಕ್ಷಸರಾಜರು ರಥಗಳನ್ನೇರಿದರು. ಆನೆ ಕುದುರೆ ಕಾಳಾಳುಗಳ ಶೌರ್ಯವನ್ನು ಹೇಗೆ ವರ್ಣಿಸಲಿ? ಅದು ರಾಕ್ಷಸೀ ಕಲಹ. ಸರಿಸಮಾನ ಬಲರಾದ ಮೂರು ಕೋಟಿ ರಾಕ್ಷಸರು ಮಳೆಯಂತೆ ವಜ್ರಶರಗಳನ್ನು ಬಿಟ್ಟು ನನ್ನನ್ನು ತಡೆದರು. ಯುದ್ಧ ಮಾಡಿ ನನ್ನ ಕೈ ಸೊತು ಹೋಯಿತು.

ಅರ್ಥ:
ದೊರೆ: ರಾಜ; ಏರು: ಮೇಲೆ ಹತ್ತು; ರಥ: ಬಂಡಿ; ತುರಗ: ಕುದುರೆ; ಕರಿ: ಆನೆ; ಕಾಲಾಳ: ಸೈನಿಕ; ಬಿಂಕ: ಗರ್ವ, ಜಂಬ, ಸೊಕ್ಕು; ಅರಸ: ರಾಜ; ಬಣ್ಣಿಸು: ವಿವರಿಸು; ಅರಿ: ತಿಳಿ; ಅಸುರ: ರಾಕ್ಷಸ; ಕಲಹ: ಜಗಳ; ಕರ್ಮ: ಕೆಲಸ; ಸರಿಗ: ಸಮಾನನಾದವ; ಸುರ: ದೇವತೆ; ಅಶನಿ: ಸಿಡಿಲು, ವಜ್ರಾಸ್ತ್ರ; ಶರ: ಬಾಣ; ತರುಬು: ತಡೆ, ನಿಲ್ಲಿಸು; ಸೋಲು: ಅಪಜಯ;

ಪದವಿಂಗಡಣೆ:
ದೊರೆಗಳ್+ಏರಿತು +ರಥ+ತುರಂಗಮ
ಕರಿಗಳಲಿ +ಕಾಲಾಳ +ಬಿಂಕವನ್
ಅರಸ +ಬಣ್ಣಿಸಲ್+ಅರಿಯೆನ್+ಅಸುರ +ಕಲಹ+ಕರ್ಮವಲೆ
ಸರಿಗರೆದ್ದುದು +ಮೂರು+ ಕೋಟಿಯ
ಸುರರು +ಸರಿಗಳಲ್+ಇಟ್ಟರ್+ಅಶನಿಯ
ಶರದಲ್+ಎಡೆಯಲಿ +ತರುಬಿದರು +ಕೈಸೋತುದ್+ಎನಗೆಂದ

ಅಚ್ಚರಿ:
(೧) ಯುದ್ಧದ ತೀವ್ರತೆ – ಸರಿಗಳಲಿಟ್ಟರಶನಿಯ ಶರದಲೆಡೆಯಲಿ ತರುಬಿದರು