ಅರಸ ಕೇಳೈ ನಾರದಾದ್ಯರು
ಸರಸಿರುಹಸಂಭವನ ಸಭೆಯೊಳು
ವರಮಹಾಭಾರತವ ಕೊಂಡಾಡಿದರು ಭಕ್ತಿಯಲಿ
ವರಮಹತ್ವದಿ ಭಾರವತ್ವದಿ
ವರಮಹಾಭರತವಿದೊಂದೇ
ದುರಿತ ದುರ್ಗ ವಿಭೇದಕರವೀರೇಳು ಲೋಕದಲಿ (ಆದಿ ಪರ್ವ, ೨ ಸಂಧಿ, ೧೨ ಪದ್ಯ)
ತಾತ್ಪರ್ಯ:
ರಾಜನೇ ಕೇಳು, ನಾರದಾದಿ ಋಷಿಗಳು ಬ್ರಹ್ಮನ ಸಭೆಯಲ್ಲಿ ಮಹಾಭಾರತವು ಮಹತ್ವವನ್ನೂ, ಭಾರವತ್ವವನ್ನೂ ಹೊಂದಿರುವುದೆಂದು ಕೊಂಡಾಡಿದರು. ಹದಿನಾಲ್ಕು ಲೋಕಗಳಲ್ಲಿ ಪಾಪದ ಕೋಟೆಯನ್ನು ಒಡೆಯಲು ಮಹಾಭಾರತವೊಂದಕ್ಕೇ ಸಾಧ್ಯ ಎಂದು ಹೇಳಿದರು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ಆದಿ: ಮೊದಲಾದ; ಸರಸಿರುಹಸಂಭವ: ಬ್ರಹ್ಮ; ಸರಸಿರುಹ: ಕಮಲ; ಸಂಭವ: ಹುಟ್ಟಿದ; ಸಭೆ: ದರಬಾರು; ವರ: ಶ್ರೇಷ್ಠ; ಕೊಂಡಾಡು: ಮೆಚ್ಚು, ಹೊಗಳು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಮಹತ್ವ: ಮುಖ್ಯ; ದುರಿತ: ಪಾಪ; ದುರ್ಗ: ಕೋಟೆ; ವಿಭೇದ: ಒಡೆಯುವಿಕೆ; ಈರೇಳು: ಹದಿನಾಲ್ಕು; ಲೋಕ: ಜಗತ್ತು; ಭಾರವತ್ವ: ಭಾರ, ಹೊರೆ;
ಪದವಿಂಗಡಣೆ:
ಅರಸ+ ಕೇಳೈ +ನಾರದಾದ್ಯರು
ಸರಸಿರುಹಸಂಭವನ +ಸಭೆಯೊಳು
ವರ+ಮಹಾಭಾರತವ +ಕೊಂಡಾಡಿದರು +ಭಕ್ತಿಯಲಿ
ವರ+ಮಹತ್ವದಿ+ ಭಾರವತ್ವದಿ
ವರ+ಮಹಾಭರತವ್+ಇದೊಂದೇ
ದುರಿತ +ದುರ್ಗ +ವಿಭೇದಕರವ್+ಈರೇಳು +ಲೋಕದಲಿ
ಅಚ್ಚರಿ:
(೧) ಮಹಾಭಾರತದ ಹಿರಿಮೆ: ವರಮಹಾಭರತವಿದೊಂದೇದುರಿತ ದುರ್ಗ ವಿಭೇದಕರವೀರೇಳು ಲೋಕದಲಿ