ಪದ್ಯ ೩೩: ಯಾವ ಶಕುನಗಳನ್ನು ನೋಡುತ್ತಾ ಅರ್ಜುನನು ನಡೆದನು?

ಹರಡೆ ವಾಮದೊಳುಲಿಯೆ ಮಧುರ
ಸ್ವರದಲಪಸವ್ಯದಲಿ ಹಸುಬನ
ಸರ ಸಮಾಹಿತವಾಗೆ ಸೂರ್ಯೋದಯದ ಸಮಯದಲಿ
ಹರಿಣ ಭಾರದ್ವಾಜ ನುಡಿಕೆಯ
ಸರಟ ನಕುಲನ ತಿದ್ದುಗಳ ಕು
ಕ್ಕುರನ ತಾಳಿನ ಶಕುನವನು ಕೈಕೊಳುತ ನಡೆತಂದ (ಅರಣ್ಯ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ನೀರು ಹಕ್ಕಿಯ, ಹಸುಬಗಳ ಎಡದಲ್ಲಿ ಸುಹಕುನದ ಸದ್ದು ಮಾಡಿದವು. ಜಿಂಕೆ, ಭಾರದ್ವಾಜ ಪಕ್ಷಿಗಳು ದಾರಿಕೊಟ್ಟವು. ಮುಂಗುಸಿ, ಓತಿಕೇತಗಳು ದಾರಿಯನ್ನು ತಿದ್ದಿಕೊಟ್ಟವು. ನಾಯಿಯು ಅನುಕೂಲ ಶಕುನವನ್ನು ತೋರಿತು. ಸೂರ್ಯೋದಯ ಸಮಯದಲ್ಲಿ ಶುಭಶಕುನಗಳನ್ನು ನೋಡುತ್ತಾ ಅರ್ಜುನನು ಇಂದ್ರಕೀಲ ಪರ್ವತದತ್ತ ಪ್ರಯಾಣ ಬೆಳಸಿದನು.

ಅರ್ಥ:
ಹರಡೆ: ನೀರುಹಕ್ಕಿಯ ಜಾತಿ, ಪ್ರಸರಿಸು; ವಾಮ: ಎಡಭಾಗ; ಉಲಿ:ಧ್ವನಿ, ಕೂಗು; ಮಧುರ: ಇಂಪು; ಸ್ವರ: ನಾದ; ಅಪಸವ್ಯ: ಬಲಗಡೆ; ಹಸುಬ: ಹಕ್ಕಿಯ ಜಾತಿ; ಸರ: ಉಲಿ, ಧ್ವನಿ; ಸಮಾಹಿತ: ಜೊತೆ; ಸೂರ್ಯ: ಭಾನು; ಉದಯ: ಹುಟ್ಟು; ಸಮಯ: ಕಾಲ; ಹರಿಣ: ಜಿಂಕೆ; ಭಾರದ್ವಾಜ: ಪಕ್ಷಿಯ ಜಾತಿ; ನುಡಿ: ಮಾತು; ಸರಟ: ಓತಿಕೇತ, ಊಸರವಳ್ಳಿ; ನಕುಲ: ಮುಂಗುಲಿ, ಮುಂಗಸಿ; ತಿದ್ದು: ಸರಿಪಡಿಸು; ಕುಕ್ಕುರ: ನಾಯಿ, ಶ್ವಾನ; ತಾಳು: ಹೊಂದಿಕೆಯಾಗು; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಕೈಕೊಳುತ: ನಿರ್ವಹಿಸು; ನಡೆ: ಚಲಿಸು;

ಪದವಿಂಗಡಣೆ:
ಹರಡೆ +ವಾಮದೊಳ್+ಉಲಿಯೆ +ಮಧುರ
ಸ್ವರದಲ್+ಅಪಸವ್ಯದಲಿ +ಹಸುಬನ
ಸರ +ಸಮಾಹಿತವಾಗೆ +ಸೂರ್ಯೋದಯದ +ಸಮಯದಲಿ
ಹರಿಣ +ಭಾರದ್ವಾಜ +ನುಡಿಕೆಯ
ಸರಟ+ ನಕುಲನ +ತಿದ್ದುಗಳ+ ಕು
ಕ್ಕುರನ +ತಾಳಿನ+ ಶಕುನವನು +ಕೈಕೊಳುತ +ನಡೆತಂದ

ಅಚ್ಚರಿ:
(೧) ಹರಡೆ, ಹಸುಬ, ಭಾರದ್ವಾಜ – ಪಕ್ಷಿಗಳ ಬಗೆ
(೨) ಉಲಿ, ಸ್ವರ, ಸರ – ಸಾಮ್ಯಾರ್ಥ ಪದಗಳು