ಶಿವಶಿವಾ ಶಿಶುವಿವನು ರಿಪುಗಳು
ಜವನ ಜೂಜೆನಿಸುವ ಮಹಾರಥ
ನಿವಹಕೊಬ್ಬನೆ ಗಡ ಸಮಾಹಿತವಲ್ಲ ಸಮರಂಗ
ಅವನಿಪತಿ ನಿರ್ದಯನಲಾ ಕಂ
ಡೆವು ಕುಮಾರನನಿಕ್ಕಿ ಬಹ
ರಾಜ್ಯವನು ಸುಡು ಸುಡಲೇತಕೆಂದುದು ನಿಖಿಳ ಪರಿವಾರ (ದ್ರೋಣ ಪರ್ವ, ೪ ಸಂಧಿ, ೪೭ ಪದ್ಯ)
ತಾತ್ಪರ್ಯ:
ಯುಧಿಷ್ಠಿರನ ಪರಿವಾರದವರೆಲ್ಲಾ, ಶಿವಶಿವಾ, ಇನ್ವನಿನ್ನೂ ಬಾಲಕ. ಯಮನೊಡನೆ ಯುದ್ಧಮಾಡಬಲ್ಲ ಮಹಾರಥರು ವೈರಿಸೈನ್ಯದಲ್ಲಿದ್ದಾರೆ, ಅವರು ಅನೇಕರು, ಇವನಾದರೋ ಒಬ್ಬನೇ, ಯುದ್ಧರಂಗವು ಸಮಬಲವಾಗಿಲ್ಲ. ರಾಜನು ನಿರ್ದಯನಾಗಿದ್ದಾನೆ, ನಾವೇ ನೋಡಿದೆವಲ್ಲಾ, ಮಗನನ್ನು ಕೊಂದು ಬರುವ ರಾಜ್ಯವು ಏತಕ್ಕಾಗಿ ಬೇಕು, ಅಂತಹ ರಾಜ್ಯವನ್ನು ಸುಡಬೇಕು ಎಂದು ಹೇಳಿದರು.
ಅರ್ಥ:
ಶಿಶು: ಮಗು; ರಿಪು: ವೈರಿ; ಜವ: ಯಮ; ಜೂಜು: ಜುಗಾರಿ, ಸಟ್ಟ; ಮಹಾರಥ: ಪರಾಕ್ರಮಿ; ನಿವಹ: ಗುಂಪು; ಸಮಾಹಿತ: ಒಟ್ಟುಗೂಡಿಸಿದ; ಸಮರಂಗ: ಯುದ್ಧ; ಅವನಿಪತಿ: ರಾಜ; ನಿರ್ದಯ: ಕರುಣೆಯಿಲ್ಲದವ; ಕಂಡು: ನೋಡು; ಕುಮಾರ: ಪುತ್ರ; ಬಹ: ಬರುವ; ರಾಜ್ಯ: ರಾಷ್ಟ್ರ; ಸುಡು: ದಹಿಸು; ನಿಖಿಳ: ಎಲ್ಲಾ; ಪರಿವಾರ: ಸಂಬಂಧಿಕರು, ಪರಿಜನ;
ಪದವಿಂಗಡಣೆ:
ಶಿವಶಿವಾ +ಶಿಶುವಿವನು +ರಿಪುಗಳು
ಜವನ +ಜೂಜೆನಿಸುವ +ಮಹಾರಥ
ನಿವಹಕ್+ಒಬ್ಬನೆ+ ಗಡ +ಸಮಾಹಿತವಲ್ಲ+ ಸಮರಂಗ
ಅವನಿಪತಿ+ ನಿರ್ದಯನಲಾ +ಕಂ
ಡೆವು +ಕುಮಾರನನಿಕ್ಕಿ +ಬಹ
ರಾಜ್ಯವನು +ಸುಡು +ಸುಡಲೇತಕ್+ಎಂದುದು +ನಿಖಿಳ +ಪರಿವಾರ
ಅಚ್ಚರಿ:
(೧) ಶಿವ ಶಿವಾ, ಸುಡು ಸುಡಲೆನುತ – ಜೋಡಿ ಪದಗಳು
(೨) ವೈರಿ ಸೈನ್ಯದ ಪರಾಕ್ರಮ – ರಿಪುಗಳು ಜವನ ಜೂಜೆನಿಸುವ ಮಹಾರಥನಿವಹ