ಹರಿಗೆ ಹರಿದವು ಮುಂದೆ ಬಿಲ್ಲಾ
ಳುರವಣಿಸಿದರು ಮೋಹರವ ಮಿ
ಕ್ಕುರುಬಿದರು ಸಬಳಿಗರು ಮುಂಚಿತು ರಣಕೆ ಖಡ್ಗಿಗಳು
ತುರಗ ಕವಿದವು ದಂತಿಘಟೆಗಳು
ತುರುಗಿದವು ರಥ ರಾಜಿ ಮುಂಗುಡಿ
ವರಿದುದವನೀಪತಿಯ ಚೂಣಿಯ ನೃಪರ ಜೋಕೆಯಲಿ (ದ್ರೋಣ ಪರ್ವ, ೧ ಸಂಧಿ, ೪೬ ಪದ್ಯ)
ತಾತ್ಪರ್ಯ:
ಗುರಾಣಿ ಹಿಡಿದ ಸೈನ್ಯ ಮುನ್ನುಗ್ಗಿತು. ಬಿಲ್ಲಾಳುಗಳು ವೇಗವಾಗಿ ಚಲಿಸಿದರು. ಇವರನ್ನು ಹಿಂದಿಟ್ಟು ಸಬಳಿಗರು ಮುಂದಾದರು. ಕತ್ತಿ ಹಿಡಿದವರು ಅವರನ್ನು ಹಿಂದಿಟ್ಟು ನಡೆದರು. ಆನೆ ಕುದುರೆ ರಥಗಳ ಮುಂಚೂಣಿ ದೊರೆಯ ನಿರ್ದೇಶನದಂತೆ ಯುದ್ಧರಂಗಕ್ಕೆ ಬಂದವು.
ಅರ್ಥ:
ಹರಿ: ದಾಳಿ ಮಾಡು, ಮುತ್ತಿಗೆ ಹಾಕು; ಮುಂದೆ: ಎದುರು, ಮುಂಚೂಣೀ; ಬಿಲ್ಲಾಳು: ಬಿಲ್ಲುಗಾರರು; ಉರವಣೆ: ರಭಸ; ಮೋಹರ: ಯುದ್ಧ, ಸೈನ್ಯ; ಮಿಕ್ಕು: ಉಳಿದ; ಉರುಬು: ಅತಿಶಯವಾದ ವೇಗ; ಸಬಳ: ಈಟಿ, ಭರ್ಜಿ; ರಣ: ಯುದ್ಧಭೂಮಿ; ಖಡ್ಗಿ: ಕತ್ತಿಯನ್ನು ಹಿಡಿದವ; ತುರಗ: ಕುದುರೆ; ಕವಿ: ಆವರಿಸು; ದಂತಿಘಟೆ: ಆನೆಯ ಗುಂಪು; ತುರುಗು: ಸಂದಣಿಸು; ರಥ: ಬಂಡಿ; ರಾಜಿ: ಪಂಕ್ತಿ, ಗುಂಪು; ಮುಂಗುಡಿ: ಮುಂದೆ; ಅವನೀಪತಿ: ರಾಜ; ಚೂಣಿ: ಮೊದಲು; ನೃಪ: ರಾಜ; ಜೋಕೆ: ಎಚ್ಚರಿಕೆ;
ಪದವಿಂಗಡಣೆ:
ಹರಿಗೆ +ಹರಿದವು +ಮುಂದೆ +ಬಿಲ್ಲಾಳ್
ಉರವಣಿಸಿದರು +ಮೋಹರವ+ ಮಿಕ್ಕ್
ಉರುಬಿದರು +ಸಬಳಿಗರು +ಮುಂಚಿತು +ರಣಕೆ +ಖಡ್ಗಿಗಳು
ತುರಗ +ಕವಿದವು +ದಂತಿಘಟೆಗಳು
ತುರುಗಿದವು +ರಥ +ರಾಜಿ +ಮುಂಗುಡಿ
ವರಿದುದ್+ಅವನೀಪತಿಯ +ಚೂಣಿಯ +ನೃಪರ +ಜೋಕೆಯಲಿ
ಅಚ್ಚರಿ:
(೧) ಅವನೀಪತಿ, ನೃಪ – ಸಮಾನಾರ್ಥಕ ಪದ
(೨) ಆನೆ ಕುದುರೆಗಳು ಸಜ್ಜಾದ ಪರಿ – ತುರಗ ಕವಿದವು ದಂತಿಘಟೆಗಳು
ತುರುಗಿದವು