ಪದ್ಯ ೨೩: ಭೀಮನಿಗೆ ಯಾರು ಎದುರಾದರು?

ಅರಸ ಕೇಳಂದೇಕ ಚಕ್ರದೊ
ಳೊರಸಿದನಲಾ ಭೀಮನಾತಗೆ
ಹಿರಿಯನೀ ಕಿಮ್ಮೀರ ಬಾಂಧವನಾ ಹಿಡಿಂಬಕಗೆ
ಧರಣಿಪಾಲನ ಸಪರಿವಾರದ
ಬರವ ಕಂಡನು ತನ್ನ ತಮ್ಮನ
ಹರಿಬವನು ಮರಳಿಚುವೆನೆನುತಿದಿರಾದನಮರಾರಿ (ಅರಣ್ಯ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಪ್ರಶ್ನೆಗೆ ಉತ್ತರಿಸುತ್ತಾ, ರಾಜ ಕೇಳು, ಹಿಂದೆ ಏಕಚಕ್ರಪುರದಲ್ಲಿ ಭೀಮನು ಬಕಾಸುರನನ್ನು ಕೊಲ್ಲಲಿಲ್ಲವೇ? ಬಕನ ಅಣ್ಣನೇ ಕಿಮ್ಮೀರ, ಹಿಡಿಂಬಕನಿಗೆ ಸಂಬಂಧಿಕ. ಪರಿವಾರದೊಡನೆ ಧರ್ಮಜನು ಬರುವುದನ್ನು ಕಂಡು, ತನ್ನ ತಮ್ಮನ ವಧೆಯ ನೋವನ್ನು ತೀರಿಸಿಕೊಳ್ಳಲು ಕಿಮ್ಮೀರನು ಎದುರಾಗಿ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಒರಸು: ನಾಶಮಾದು; ಹಿರಿಯ: ದೊಡ್ಡವ; ಬಾಂಧವ: ಸಂಬಂಧಿಕ; ಧರಣಿಪಾಲ: ರಾಜ; ಧರಣಿ: ಭೂಮಿ; ಸಪರಿವಾರ: ಪರಿಜನ; ಬರವ: ಆಗಮನ; ಕಂಡು: ನೋಡು; ತಮ್ಮ: ಅನುಜ; ಹರಿಬ: ಕಷ್ಟ, ತೊಂದರೆ; ಮರಳು: ಹಿಂದಿರುಗು; ಇದಿರು: ಎದುರು; ಅಮರ: ದೇವತೆ; ಅಮರಾರಿ: ದೇವತೆಗಳ ವೈರಿ, ರಾಕ್ಷಸ;

ಪದವಿಂಗಡಣೆ:
ಅರಸ +ಕೇಳ್+ಅಂದ್+ಏಕ ಚಕ್ರದೊಳ್
ಒರಸಿದನಲ್+ಆ+ ಭೀಮನ್+ಆತಗೆ
ಹಿರಿಯನ್+ಈ+ ಕಿಮ್ಮೀರ+ ಬಾಂಧವನಾ+ ಹಿಡಿಂಬಕಗೆ
ಧರಣಿಪಾಲನ +ಸಪರಿವಾರದ
ಬರವ +ಕಂಡನು +ತನ್ನ +ತಮ್ಮನ
ಹರಿಬವನು +ಮರಳಿಚುವೆನ್+ಎನುತ್+ಇದಿರಾದನ್+ಅಮರಾರಿ

ಅಚ್ಚರಿ:
(೧) ಸಾಯಿಸಿದನು ಎಂದು ಹೇಳಲು – ಒರಸಿದ ಪದದ ಬಳಕೆ
(೨) ಅರಸ, ಧರಣಿಪಾಲ – ಸಮನಾರ್ಥಕ ಪದ