ಪದ್ಯ ೩೨: ವಿದ್ವಾಂಸರಿಗೆ ಯಾವ ತತ್ತ್ವವೇ ಜೀವನ?

ಮನುವರಿವನಜ ಬಲ್ಲನೀಶ್ವರ
ನೆರೆವ ನಾರದ ಮುನಿಪ ವರ್ಣಿಪ
ಮನದಿ ಸನಕ ಸನತ್ಸುಜಾತಾದ್ಯರಿಗಿದೇ ವ್ಯಸನ
ಮುನಿಗಳಿಗೆ ಮುಕ್ತರಿಗೆ ಕರ್ಮದ
ಕಣಿಗಳಿಗೆ ಕೋವಿದರಿಗಿದೆ ಜೀ
ವನವಿದೇಗತಿ ಪರಮವೈಷ್ಣವ ತತ್ತ್ವವಿದೆಯೆಂದ (ಸಭಾ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸರ್ವವ್ಯಾಪಿಯಾದ ಹೆಚ್ಚಿನ ತತ್ವವಾದ ಶ್ರೀಕೃಷ್ಣನ ರೀತಿಯನ್ನು ನಿಜವನ್ನು ಮನುವು ಬಲ್ಲ, ಬ್ರಹ್ಮನುಬಲ್ಲ, ಶಿವನು ನೆನೆಯುತ್ತಾನೆ, ನಾರದನು ಕೀರ್ತಿಸುತ್ತಾನೆ. ಸನಕಾದಿಗಳಿಗೆ ಈ ತತ್ವವನ್ನು ಸ್ಮರಿಸುವದೇ ಗೀಳು ಆತ್ಮ ತತ್ತ್ವವನ್ನು ಮನನಮಾಡುವ ಮುನಿಗಳಿಗೆ ಆತ್ಮ ನಿಷ್ಠೆಯಲ್ಲಿ ನೆಲೆ ನಿಂತ ಜೀವನ್ಮುಕ್ತರಿಗೆ ವೈದಿಕ ಕರ್ಮ ನಿರತರಿಗೆ ತಿಳಿದ ವಿದ್ವಾಂಸರಿಗೆ ಈ ತತ್ತ್ವವೇ ಜೀವನ. ಅವರೆಲ್ಲಾ ಬಂದು ಸೇರುವುದು ಇಲ್ಲಿಯೇ ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಅಜ: ಬ್ರಹ್ಮ; ಮನು: ಸ್ವಾಯಂಭು ಮನು; ಅರಿ: ತಿಳಿ; ಈಶ್ವರ: ಭಗವಂತ; ಬಲ್ಲ: ತಿಳಿ; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಮುನಿ: ಋಷಿ; ವರ್ಣಿಪ: ಮನ: ಮನಸ್ಸು; ಆದಿ: ಮುಂತಾದ; ವ್ಯಸನ: ಗೀಳು, ಚಟ; ಮುಕ್ತ: ಬಿಡುಗಡೆ ಹೊಂದಿದವನು; ಕರ್ಮ: ಕೆಲಸ; ಕಣಿ: ನೋಟ, ಕಾಣ್ಕೆ; ಕೋವಿದ: ವಿದ್ವಾಂಸ, ಪಂಡಿತ; ಜೀವನ: ಬಾಳು, ಬದುಕು; ಗತಿ: ಅವಸ್ಥೆ; ಪರಮ: ಶ್ರೇಷ್ಠ; ವೈಷ್ಣವ: ವಿಷ್ಣುಭಕ್ತ; ತತ್ವ: ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ

ಪದವಿಂಗಡಣೆ:
ಮನುವ್+ಅರಿವನ್+ಅಜ +ಬಲ್ಲನ್+ಈಶ್ವರ
ನೆರೆವ+ ನಾರದ+ ಮುನಿಪ+ ವರ್ಣಿಪ
ಮನದಿ +ಸನಕ+ ಸನತ್ಸುಜಾತಾದ್ಯರಿಗ್+ಇದೇ +ವ್ಯಸನ
ಮುನಿಗಳಿಗೆ +ಮುಕ್ತರಿಗೆ +ಕರ್ಮದ
ಕಣಿಗಳಿಗೆ+ ಕೋವಿದರಿಗಿದೆ +ಜೀ
ವನವ್+ಇದೇಗತಿ+ ಪರಮವೈಷ್ಣವ +ತತ್ತ್ವವಿದೆಯೆಂದ

ಪದ್ಯ ೪: ಧೃತರಾಷ್ಟ್ರನ ಸ್ಮರಣೆಯಿಂದ ಯಾರು ಆಗಮಿಸಿದರು?

ನೆನೆಯಲೊಡನೆ ಸನತ್ಸುಜಾತನು
ಮನೆಗೆ ಬರಲಿದಿರೆದ್ದು ಕೌರವ
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು
ಮುನಿಪ ನೀ ಕೃಪೆ ಮಾಡಬೇಕೆನ
ಲನುನಯದೊಳವನೀಪತಿಗೆ ಜನ
ಜನಿತವೆನಲರುಹಿದನಲೈ ಪರಲೋಕ ಸಾಧನವ (ಉದ್ಯೋಗ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮನಸ್ಸಿನಲ್ಲಿ ಸ್ಮರಿಸಿದೊಡೆ ಸನತ್ಸುಜಾತನು ಅವನಿದ್ದಲ್ಲಿಗೆ ಆಗಮಿಸಿದನು. ಧೃತರಾಷ್ಟ್ರನು ಅವನಿಗೆ ನಮಸ್ಕರಿಸಿ “ಮುನಿವರ್ಯರೇ, ನನಗೆ ಬ್ರಹ್ಮೋಪದೇಶವನ್ನು ಕೃಪೆಯಿಂದ ಮಾಡಿ, ಎಂದು ಕೇಳಲು ಮುನಿಶ್ರೇಷ್ಠರಾದ ಸನತ್ಸುಜಾತರು ಬ್ರಹ್ಮವಿದ್ಯೆಯನ್ನು ಕುರಿತು ಹೇಳಿದರು.

ಅರ್ಥ:
ನೆನೆ: ಜ್ಞಾಪಿಸು; ಮನೆ: ಆಲಯ; ಬರಲು: ಆಗಮಿಸು; ಜನಕ: ತಂದೆ; ಮೈಯಿಕ್ಕಿದನು: ನಮಸ್ಕರಿಸಿದನು; ಉಪದೇಶ: ಬೋಧಿಸುವುದು; ಮುನಿ: ಋಷಿ; ಕೃಪೆ: ಕರುಣೆ; ಅನುನಯ:ನಯವಾದ ಮಾತುಗಳಿಂದ ಮನವೊಲಿಸುವುದು; ಅವನೀಪತಿ: ರಾಜ; ಜನಜನಿತ: ಜನರಲ್ಲಿ ಹಬ್ಬಿರುವ ವಿಷಯ; ಅರುಹು: ತಿಳಿವಳಿಕೆ; ಪರಲೋಕ: ಬೇರೆ ಜಗತ್ತು; ಸಾಧನ: ಅಭ್ಯಾಸ; ಇದಿರು: ಎದುರು;

ಪದವಿಂಗಡಣೆ:
ನೆನೆಯಲ್+ಒಡನೆ +ಸನತ್ಸುಜಾತನು
ಮನೆಗೆ +ಬರಲ್+ಇದಿರ್+ಎದ್ದು +ಕೌರವ
ಜನಕ +ಮೈಯಿಕ್ಕಿದನ್+ಎನಗೆ +ಬ್ರಹ್ಮೋಪದೇಶವನು
ಮುನಿಪ+ ನೀ +ಕೃಪೆ +ಮಾಡಬೇಕೆನಲ್
ಅನುನಯದೊಳ್+ಅವನೀಪತಿಗೆ+ ಜನ
ಜನಿತವೆನಲ್+ಅರುಹಿದನಲೈ +ಪರಲೋಕ +ಸಾಧನವ

ಅಚ್ಚರಿ:
(೧) ಕೌರವಜನಕ, ಅವನೀಪತಿ – ಧೃತರಾಷ್ಟ್ರನನ್ನು ಕರೆಯಲು ಬಳಸಿದ ಪದಗಳು
(೨) ನಮಸ್ಕರಿಸಿದನು ಎಂದು ಹೇಳಲು ಮೈಯಿಕ್ಕಿದನು ಪದದ ಬಳಕೆ

ಪದ್ಯ ೩: ಬ್ರಹ್ಮವಿದ್ಯೆಯನ್ನು ತಿಳಿಸಲು ಯಾರು ಅರ್ಹರು?

ಒರ್ವನೇ ಬಲ್ಲವನು ಲೋಕದೊ
ಳಿರ್ವರಿಲ್ಲ ಸನತ್ಸುಜಾತನು
ಸರ್ವಗುಣ ಸಂಪೂರ್ಣನಾತನ ಭಜಿಸಿದಡೆ ನೀನು
ಸರ್ವನಹೆಯೆನಲಾ ಮುನಿಪನೆಡೆ
ಸರ್ವಭಾವದೊಳರಸನಿರಲಾ
ಗುರ್ವಿಯಮರರ ತಿಲಕ ಬಂದನು ಕೃಪೆಯೊಳಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಈ ಲೋಕದಲ್ಲಿ ಸನತ್ಸುಜಾನೇ ಬ್ರಹ್ಮವಿದ್ಯೆಯನ್ನು ತಿಳಿದವನು. ಇನ್ನೊಬ್ಬರು ಖಂಡಿತವಾಗಿಯೂ ತಿಳಿದವರಿಲ್ಲ. ಅವನು ಸಂಪೂರ್ಣಗುಣವಂತ. ಅವನನ್ನು ಸ್ಮರಿಸಿದರೆ ನಿನ್ನ ಆಶೆಯೆಲ್ಲವೂ ಕೈಗೂಡುತ್ತದೆ ಎಂದು ವಿದುರನು ಹೇಳಿದ. ಧೃತರಾಷ್ಟ್ರನು ಮನಸ್ಸಿನಲ್ಲೇ ಅವನ ಬಳಿಗೆ ಹೋಗಿ ಬಿಡುವ ಭಾವದಲ್ಲಿರಲು, ಬ್ರಾಹ್ಮಣ ಶ್ರೇಷ್ಠನಾದ ಸನತ್ಸುಜಾತನು ಅಲ್ಲಿಗೆ ಬಂದನು.

ಅರ್ಥ:
ಒರ್ವನೇ: ಒಬ್ಬನೇ; ಬಲ್ಲವ: ತಿಳಿದವ; ಲೋಕ: ಜಗತ್ತು; ಈರ್ವರು: ಇನ್ನೊಬ್ಬರು; ಸರ್ವ: ಎಲ್ಲಾ; ಗುಣ: ನಡತೆ, ಸ್ವಭಾವ; ಸಂಪೂರ್ಣ: ಅಖಂಡವಾದುದು; ಭಜಿಸು: ಧ್ಯಾನಿಸು, ಪೂಜಿಸು; ಅಹೆ: ಆಗಿರುವೆನು, ಆಗುತ್ತೀಯೆ; ಎನಲು: ಹೇಳಿದ ನಂತರ; ಮುನಿ: ಋಷಿ; ಭಾವ: ಅಭಿಪ್ರಾಯ; ಅರಸ: ರಾಜ; ಗುರು: ದೊಡ್ಡ; ಅಮರ: ದೇವತೆ; ತಿಲಕ: ಶ್ರೇಷ್ಠ; ಕೃಪೆ: ಕರುಣೆ, ದಯೆ;

ಪದವಿಂಗಡಣೆ:
ಒರ್ವನೇ +ಬಲ್ಲವನು +ಲೋಕದೊಳ್
ಇರ್ವರಿಲ್ಲ +ಸನತ್ಸುಜಾತನು
ಸರ್ವಗುಣ +ಸಂಪೂರ್ಣನ್+ಆತನ +ಭಜಿಸಿದಡೆ+ ನೀನು
ಸರ್ವನ್+ಅಹೆಯೆನಲಾ+ ಮುನಿಪನೆಡೆ
ಸರ್ವಭಾವದೊಳ್+ಅರಸನಿರಲ್+ ಆ
ಗುರ್ವಿ+ಅಮರರ+ ತಿಲಕ+ ಬಂದನು +ಕೃಪೆಯೊಳಾ +ಮುನಿಪ

ಅಚ್ಚರಿ:
(೧) ಒರ್ವ, ಸರ್ವ, ಇರ್ವ, – ಪ್ರಾಸ ಪದಗಳು
(೨) ಮುನಿಪ – ೩, ೬ ಸಾಲಿನ ಕೊನೆಯ ಪದ

ಪದ್ಯ ೧೩೯: ವಿದುರನು ಕಡೆಯದಾಗಿ ಧೃತರಾಷ್ಟ್ರನಿಗೆ ಏನು ಹೇಳಿದ?

ಸಕಲ ನೀತಿ ರಹಸ್ಯವನು ಸು
ವ್ಯಕುತವೆನಲರುಹಿದೆನು ತತ್ತ್ವಕೆ
ಯುಕುತಿಯಾದರೆ ನೆನೆವುದಿನ್ನು ಸನತ್ಸುಜಾತನನು
ಮುಕುತಿಗಮಳ ಬ್ರಹ್ಮ ವಿದ್ಯಾ
ಪ್ರಕಟವನು ನೆರೆ ಮಾಡಿ ಚಿತ್ತದ
ವಿಕಳತೆಯನೊಡಮೆಟ್ಟಿ ಸಲಹುವನೆಂದು ಬೋಧಿಸಿದ (ಉದ್ಯೋಗ ಪರ್ವ, ೩ ಸಂಧಿ, ೧೩೯ ಪದ್ಯ)

ತಾತ್ಪರ್ಯ:
ಹೀಗೆ ತನ್ನೆಲ್ಲಾ ಜ್ಞಾನವನ್ನು ನೀತಿಯ ರೂಪದಲ್ಲಿ ವಿದುರನು ಧೃತರಾಷ್ಟ್ರನಿಗೆ ತಿಳಿಸಿದ. ನಿಜ ತತ್ತ್ವವನ್ನರಿಯಲು ಮನಸ್ಸಾದರೆ ಸನತ್ಸುಜಾತನನ್ನು ನೆನೆ. ಮುಕ್ತಿಗೆ ಬೇಕಾದ ಬ್ರಹ್ಮವಿದ್ಯೆಯನ್ನು ಹೇಳಿ ನಿನ್ನ ಮನಸ್ಸಿನ ಭ್ರಾಂತಿಯನ್ನು ತುಳಿದು ಧ್ವಂಸಮಾಡಿ ನಿನ್ನನ್ನು ಉದ್ಧರಿಸುತ್ತಾನೆ ಎಂದು ವಿದುರ ಧೃತರಾಷ್ಟ್ರನಿಗೆ ಸಲಹೆ ನೀಡಿದ.

ಅರ್ಥ:
ಸಕಲ: ಎಲ್ಲಾ; ನೀತಿ: ಮಾರ್ಗ ದರ್ಶನ; ರಹಸ್ಯ:ಗುಟ್ಟು, ಗೋಪ್ಯ; ಸುವ್ಯಕ್ತ: ಸ್ಪಷ್ಟವಾಗಿ ಗೋಚರವಾದ; ಅರುಹು:ತಿಳಿಸು, ಹೇಳು; ತತ್ತ್ವ: ಸಿದ್ಧಾಂತ, ನಿಯಮ; ಯುಕುತಿ: ಬುದ್ಧಿ, ತರ್ಕಬದ್ಧವಾದ ವಾದಸರಣಿ; ನೆನೆ: ಜ್ಞಾಪಿಸು; ಸನಸುಜಾತ: ಬ್ರಹ್ಮನ ಮಾನಸ ಪುತ್ರ; ಮುಕ್ತಿ: ಮೋಕ್ಷ; ಅಮಳ: ನಿರ್ಮಲ; ಬ್ರಹ್ಮ: ಪರತತ್ವ; ವಿದ್ಯ: ಜ್ಞಾನ; ಪ್ರಕಟ: ನಿಚ್ಚಳ, ಸ್ಪಷ್ಟ; ನೆರೆ: ಗುಂಫು; ಚಿತ್ತ: ಬುದ್ಧಿ; ವಿಕಳ: ಭ್ರಾಂತಿ, ಭ್ರಮೆ; ಒಡಮಟ್ಟು: ನಾಶಮಾಡು, ಧ್ವಂಸಮಾಡು; ಸಲಹು:ಪೋಷಿಸು; ಬೋಧಿಸು: ಹೇಳು, ತಿಳಿಸು;

ಪದವಿಂಗಡಣೆ:
ಸಕಲ +ನೀತಿ +ರಹಸ್ಯವನು +ಸು
ವ್ಯಕುತವ್+ಎನಲ್+ಅರುಹಿದೆನು+ ತತ್ತ್ವಕೆ
ಯುಕುತಿಯಾದರೆ +ನೆನೆವುದಿನ್ನು +ಸನತ್ಸುಜಾತನನು
ಮುಕುತಿಗ್+ಅಮಳ +ಬ್ರಹ್ಮ +ವಿದ್ಯಾ
ಪ್ರಕಟವನು +ನೆರೆ +ಮಾಡಿ +ಚಿತ್ತದ
ವಿಕಳತೆಯನ್+ಒಡಮೆಟ್ಟಿ +ಸಲಹುವನೆಂದು+ ಬೋಧಿಸಿದ

ಅಚ್ಚರಿ:
(೧) ಯುಕುತಿ, ಮುಕುತಿ – ಪ್ರಾಸ ಪದಗಳು