ಎಲೆ ಮಹೀಪತಿಗಳಿರ ಪುಣ್ಯ
ಸ್ಥಳ ಕುರುಕ್ಷೇತ್ರವು ಮಹಾಸ
ತ್ಕುಲದೊಳಗೆ ಜನನವು ನಿಮಗೆ ವೀರಕ್ಷತ್ರಿಯೋತ್ತಮರು
ಅಳುಕದಂಘೈಸಿದಡೆ ಸುರಸಂ
ಕುಲದ ಸೇರುವ ತಪ್ಪಿದರೆ ನೀ
ವಿಳಿವಿರೈ ರೌರವದೊಳಾವುದು ಲಾಗು ನಿಮಗೆಂದ (ಗದಾ ಪರ್ವ, ೧ ಸಂಧಿ, ೧೮ ಪದ್ಯ)
ತಾತ್ಪರ್ಯ:
ಎಲೈ ರಾಜರೇ, ಕುರುಕ್ಷೇತ್ರವು ಪುಣ್ಯಸ್ಥಳ, ನೀವು ಶ್ರೇಷ್ಠರು, ಕ್ಷತ್ರಿಯರಾಗಿ ಮಹಾಸತ್ಕುಲದಲ್ಲಿ ಜನಿಸಿರುವಿರಿ, ಹೆದರದೆ ಹೋರಾಡಿದರೆ ದೇವತೆಗಳೊಡನೆ ಸೇರುವಿರಿ, ತಪ್ಪಿದರೆ ನೀವು ರೌರವ ನರಕಕ್ಕಿಳಿಯುವಿರಿ. ನಿಮಗೆ ಸಮ್ಮತವಾದುದಾವುದು ಎಂದು ದುಯೋಧನನು ಮೂದಲಿಸಿದನು.
ಅರ್ಥ:
ಮಹೀಪತಿ: ರಾಜ; ಪುಣ್ಯ: ಶ್ರೇಷ್ಠ, ಒಳ್ಳೆಯ; ಸ್ಥಳ: ಜಾಗ; ಸತ್ಕುಲ: ಒಳ್ಳೆಯ ವಂಶ; ಜನನ: ಹುಟ್ಟು; ಉತ್ತಮ: ಶ್ರೇಷ್ಠ; ಅಳುಕು: ಹೆದರು; ಅಂಘೈಸು: ಒಪ್ಪು; ಸುರ: ದೇವತೆ; ಸಂಕುಲ: ಗುಂಪು; ಸೇರು: ಜೊತೆ; ತಪ್ಪು: ನೀತಿಬಿಟ್ಟ ನಡೆ, ಸುಳ್ಳಾಗು; ಇಳಿ: ಜಾರು; ರೌರವ: ಭಯಂಕರವಾದ ನರಕ; ಲಾಗು: ನೆಗೆಯುವಿಕೆ, ಲಂಘನ;
ಪದವಿಂಗಡಣೆ:
ಎಲೆ +ಮಹೀಪತಿಗಳಿರ+ ಪುಣ್ಯ
ಸ್ಥಳ +ಕುರುಕ್ಷೇತ್ರವು +ಮಹಾ+ಸ
ತ್ಕುಲದೊಳಗೆ +ಜನನವು +ನಿಮಗೆ+ ವೀರ+ಕ್ಷತ್ರಿಯೋತ್ತಮರು
ಅಳುಕದ್+ಅಂಘೈಸಿದಡೆ +ಸುರ+ಸಂ
ಕುಲದ +ಸೇರುವ +ತಪ್ಪಿದರೆ+ ನೀವ್
ಇಳಿವಿರೈ+ ರೌರವದೊಳ್+ಆವುದು +ಲಾಗು +ನಿಮಗೆಂದ
ಅಚ್ಚರಿ:
(೧) ಯುದ್ಧಮಾಡುವ ಲಾಭ – ಅಳುಕದಂಘೈಸಿದಡೆ ಸುರಸಂಕುಲದ ಸೇರುವ