ಪದ್ಯ ೯೦: ಅರ್ಜುನನು ಭೀಮನನ್ನು ಏನು ಹೇಳಿ ತಡೆದನು?

ಏನಿದೇನೈ ಭೀಮ ನಿಲು ಯಮ
ಸೂನು ಶಿವ ಶಿವ ಗುರುವಲಾ ನಮ
ಗೀ ನಿತಂಬಿನಿಯಾದಿಯಾದ ಸಮಸ್ತ ವಸ್ತುಗಳು
ಈ ನರೇಂದ್ರಗೆ ಸರಿಯೆ ಕುಂತೀ
ಸೂನುವೇ ಪ್ರಾಣಾರ್ಥದಿಂದ ಸ
ಘಾನನೈ ನಮಗೀತನೇ ಗತಿ ಯೆಂದನಾ ಪಾರ್ಥ (ಸಭಾ ಪರ್ವ, ೧೫ ಸಂಧಿ, ೯೦ ಪದ್ಯ)

ತಾತ್ಪರ್ಯ:
ಭೀಮ ಏನಿದು, ಶಿವ ಶಿವಾ, ಏನು ಮಾಡುತ್ತಿರುವೆ, ನಿಲ್ಲು, ಯುಧಿಷ್ಠಿರನು ನಮಗೆ ಗುರು. ದ್ರೌಪದಿಯು ಸೇರಿ ಸಮಸ್ತ ವಸ್ತುಗಳೂ ಇವನಿಗೆ ಸರಿಸಮಾನವಾಗಲಾರವು. ಹೇಚ್ಚೇನು, ಪ್ರಾಣದ ಐಶ್ವರ್ಯಕ್ಕಿಂತಲೂ ಇವನೇ ನಮಗೆ ಶ್ರೇಷ್ಠ ಎಂದು ಹೇಳಿ ಭೀಮನನ್ನು ತಡೆದನು.

ಅರ್ಥ:
ನಿಲು: ನಿಲ್ಲು, ತಡೆ; ಸೂನು: ಮಗ; ಗುರು: ಆಚಾರ್ಯ; ನಿತಂಬಿನಿ: ಹೆಣ್ಣು; ಆದಿ: ಮೊದಲಾದ; ಸಮಸ್ತ: ಎಲ್ಲಾ; ವಸ್ತು: ಸಾಮಗ್ರಿ; ನರೇಂದ್ರ: ರಾಜ; ಸರಿ: ಸಮ; ಪ್ರಾಣ: ಜೀವ; ಘನ: ಶ್ರೇಷ್ಠ; ಗತಿ: ಅವಸ್ಥೆ;

ಪದವಿಂಗಡಣೆ:
ಏನಿದ್+ಏನೈ +ಭೀಮ +ನಿಲು+ ಯಮ
ಸೂನು +ಶಿವ+ ಶಿವ+ ಗುರುವಲಾ +ನಮಗ್
ಈ+ ನಿತಂಬಿನಿ+ಆದಿಯಾದ+ ಸಮಸ್ತ+ ವಸ್ತುಗಳು
ಈ +ನರೇಂದ್ರಗೆ+ ಸರಿಯೆ+ ಕುಂತೀ
ಸೂನುವೇ+ ಪ್ರಾಣಾರ್ಥದಿಂದ +ಸ
ಘಾನನೈ+ ನಮಗ್+ಈತನೇ+ ಗತಿ+ ಯೆಂದನಾ +ಪಾರ್ಥ

ಅಚ್ಚರಿ:
(೧) ಅರ್ಜುನನ ಆಶ್ಛರ್ಯವನ್ನು ವಿವರಿಸುವ ಪರಿ – ಏನಿದೇನೈ ಭೀಮ, ಶಿವ ಶಿವ
(೨) ಧರ್ಮರಾಯನನ್ನು ಇತರ ತಮ್ಮಂದಿರು ನೋಡುವ ಪರಿ – ಗುರುವಲಾ ನಮಗೀ ನಿತಂಬಿನಿಯಾದಿಯಾದ ಸಮಸ್ತ ವಸ್ತುಗಳು ಈ ನರೇಂದ್ರಗೆ ಸರಿಯೆ