ಅರಸ ಕೇಳೈ ಕೌರವೇಶ್ವರ
ನರಸಿಯರು ಲೀಲೆಯಲಿ ಶತಸಾ
ವಿರ ಸಖೀಜನ ಸಹಿತ ಹೊರವಂಟರು ವನಾಂತರಕೆ
ಸರಸಿಜದ ನಿಜಗಂಧದಲಿ ತನು
ಪರಿಮಳವ ತಕ್ಕೈಸಿ ವನದಲಿ
ತರಳೆಯರು ತುಂಬಿದರು ಮರಿದುಂಬಿಗಳ ಡೊಂಬಿನಲಿ (ಅರಣ್ಯ ಪರ್ವ, ೧೯ ಸಂಧಿ, ೩ ಪದ್ಯ)
ತಾತ್ಪರ್ಯ:
ಕೌರವನ ರಾಣಿಯರು ಅಸಂಖ್ಯ ಸಖಿಯರೊಡನೆ ಕಾಡಿನಲ್ಲಿ ವಿಹಾರಕ್ಕೆ ಹೊರಟರು. ಅವರ ದೇಹದ ಸುಗಂಧವನ್ನು ಕಮಲಗಳ ಸುಗಂಧವು ಅಪ್ಪಲು, ದುಂಬಿಗಳ ಹಿಂಡುಗಳು ಅವರನ್ನು ಮುತ್ತಿದವು. ಕಾಡಿನ ತುಂಬಾ ಅವರು ಆವರಿಸಿದರು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ಅರಸಿ: ರಾಣಿ; ಲೀಲೆ: ವಿನೋದ ಕ್ರೀಡೆ; ಶತ: ನೂರು; ಸಾವಿರ: ಸಹಸ್ರ; ಸಖಿ: ಗೆಳೆಯ, ಸ್ನೇಹಿತ; ಸಹಿತ: ಜೊತೆ; ಹೊರವಂಟು: ತೆರಳಿದರು; ವನ: ಕಾಡು; ಸರಸಿಜ: ಕಮಲ; ಗಂಧ: ಪರಿಮಳ; ತನು: ದೇಹ; ತಕ್ಕೈಸು: ಅಪ್ಪು, ಆಲಂಗಿಸು; ತರಳೆ: ಹುಡುಗಿ, ಬಾಲೆ; ತುಂಬು: ಆವರಿಸು; ದುಂಬಿ: ಭ್ರಮರ; ಡೊಂಬು: ಬೂಟಾಟಿಕೆ, ಆಡಂಬರ;
ಪದವಿಂಗಡಣೆ:
ಅರಸ +ಕೇಳೈ +ಕೌರವೇಶ್ವರನ್
ಅರಸಿಯರು +ಲೀಲೆಯಲಿ +ಶತ+ಸಾ
ವಿರ +ಸಖೀಜನ +ಸಹಿತ +ಹೊರವಂಟರು +ವನಾಂತರಕೆ
ಸರಸಿಜದ +ನಿಜಗಂಧದಲಿ +ತನು
ಪರಿಮಳವ +ತಕ್ಕೈಸಿ +ವನದಲಿ
ತರಳೆಯರು +ತುಂಬಿದರು +ಮರಿದುಂಬಿಗಳ +ಡೊಂಬಿನಲಿ
ಅಚ್ಚರಿ:
(೧) ಉಪಮಾನದ ಪ್ರಯೋಗ – ವನದಲಿ ತರಳೆಯರು ತುಂಬಿದರು ಮರಿದುಂಬಿಗಳ ಡೊಂಬಿನಲಿ