ಪದ್ಯ ೨೩: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೪?

ಮುಳಿದಡಗ್ಗದ ಪರಶುರಾಮನ
ಗೆಲಿದನೊಬ್ಬನೆ ಭೀಷ್ಮ ಪಾಂಡವ
ಬಲದ ಸಕಲ ಮಹಾರಥರ ಸಂಹರಿಸಿದನು ದ್ರೋಣ
ದಳಪತಿಯ ಮಾಡಿದಡೆ ಪಾರ್ಥನ
ತಲೆಗೆ ತಂದನು ಕರ್ಣನೀಯ
ಗ್ಗಳೆಯರಗ್ಗಿತು ಕಡೆಯಲೊಬ್ಬನೆ ಕೆಟ್ಟೆ ನೀನೆಂದ (ಗದಾ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಪರಶುರಾಮನೇ ಕೋಪದಿಂದ ಬಂದರೂ, ಭೀಷ್ಮನೊಬ್ಬನೇ ಅವನನ್ನು ಸೋಲಿಸಿದನು. ಪಾಂಡವ ಬಲದ ಮಹಾರಥರನ್ನು ದ್ರೋಣನು ಸಂಹರಿಸಿದನು. ಸೇನಾಧಿಪತಿಯಾದ ಕರ್ಣನು ಅರ್ಜುನನ ತಲೆಗೆ ಅಪಾಯವನ್ನೊಡಿದ, ಈ ಮಹಾಸತ್ವಶಾಲಿಗಳು ಮಡಿದರು. ಕಡೆಯಲ್ಲಿ ನೀನೊಬ್ಬನೇ ಒಬ್ಬಂಟಿಯಾಗಿ ಉಳಿದು ಕೆಟ್ಟೆ ಎಂದು ಸಂಜಯನು ಹೇಳಿದನು.

ಅರ್ಥ:
ಮುಳಿ: ಕೋಪ; ಅಗ್ಗ: ಶ್ರೇಷ್ಠ; ಗೆಲಿ: ಜಯಿಸು; ಬಲ: ಸೈನ್ಯ; ಸಕಲ: ಎಲ್ಲಾ; ಮಹಾರಥ: ಪರಾಕ್ರಮಿ; ಸಂಹರ: ಸಾವು; ದಳಪತಿ: ಸೇನಾಧಿಪತಿ; ತಲೆ: ಶಿರ; ತಂದು: ತೆಗೆದುಕೊಂಡು ಬಂದು; ಕಡೆ: ಕೊನೆ; ಕೆಡು: ಹಾಳಾಗು; ಅಗ್ಗಿ: ಬೆಂಕಿ;

ಪದವಿಂಗಡಣೆ:
ಮುಳಿದಡ್+ಅಗ್ಗದ +ಪರಶುರಾಮನ
ಗೆಲಿದನ್+ಒಬ್ಬನೆ +ಭೀಷ್ಮ +ಪಾಂಡವ
ಬಲದ +ಸಕಲ +ಮಹಾರಥರ +ಸಂಹರಿಸಿದನು +ದ್ರೋಣ
ದಳಪತಿಯ +ಮಾಡಿದಡೆ +ಪಾರ್ಥನ
ತಲೆಗೆ +ತಂದನು +ಕರ್ಣನ್+ಈ+ಅ
ಗ್ಗಳೆಯರ್+ಅಗ್ಗಿತು +ಕಡೆಯಲೊಬ್ಬನೆ+ ಕೆಟ್ಟೆ +ನೀನೆಂದ

ಅಚ್ಚರಿ:
(೧) ಭೀಷ್ಮರ ಪರಾಕ್ರಮ – ಮುಳಿದಡಗ್ಗದ ಪರಶುರಾಮನಗೆಲಿದನೊಬ್ಬನೆ ಭೀಷ್ಮ
(೨) ದ್ರೋಣರ ಪರಾಕ್ರಮ – ಪಾಂಡವ ಬಲದ ಸಕಲ ಮಹಾರಥರ ಸಂಹರಿಸಿದನು ದ್ರೋಣ
(೩) ಕರ್ಣನ ಪರಾಕ್ರಮ – ದಳಪತಿಯ ಮಾಡಿದಡೆ ಪಾರ್ಥನ ತಲೆಗೆ ತಂದನು ಕರ್ಣ