ಪದ್ಯ ೬೪: ಕೃಷ್ಣನು ಧರ್ಮಜನಿಗೆ ಏನನ್ನು ಬೋಧಿಸಿದನು?

ಅರಸ ಕೇಳೈ ಕೃಷ್ಣಶಕ್ತಿ
ಸ್ಫುರಣವೈಸಲೆ ನಿಮ್ಮ ಬಲ ಸಂ
ಹರಣಕಾವುದು ಬೀಜ ನಿರ್ದೈವರ ವಿಲಾಸವಿದು
ಹರಿ ಯುಧಿಷ್ಠಿರ ನೃಪನನೆಕ್ಕಟಿ
ಗರೆದು ನಿಜಶಕ್ತಿಪ್ರಯೋಗವ
ನೊರೆದಡೊಡಬಿಟ್ಟನು ಹಸಾದದ ಮಧುರವಚನದಲಿ (ಶಲ್ಯ ಪರ್ವ, ೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರನೇ ಕೇಳು, ನಿಮ್ಮ ಸೇನೆಯ ವೀರರ ಸಂಹಾರಕ್ಕೆ ಕೃಷ್ಣಶಕ್ತಿಯ ಸ್ಫುರಣವೇ ಕಾರಣ. ನಿಮ್ಮ ಯುದ್ಧವು ದೈವಹೀನರ ವಿಲಾಸ. ಶ್ರೀಕೃಷ್ಣನು ಯುಧಿಷ್ಠಿರನನ್ನು ಪಕ್ಕಕ್ಕೆ ಕರೆದು ತನ್ನ ಶಕ್ತಿಯ ಪ್ರಯೋಗವನ್ನು ಬೋಧಿಸಿದನು. ಧರ್ಮಜನು ಮಹಾಪ್ರಸಾದ ಎಂದು ಸ್ವೀಕರಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲ್ಸಿಉ; ಶಕ್ತಿ: ಬಲ; ಸ್ಫುರಣ: ನಡುಗುವುದು, ಕಂಪನ; ಐಸಲೆ: ಅಲ್ಲವೆ; ಸಂಹರಣ: ನಾಶ; ಬೀಜ: ಮೂಲವಸ್ತು; ದೈವ: ಅಮರ; ವಿಲಾಸ: ವಿಹಾರ; ಹರಿ: ಕೃಷ್ಣ; ನೃಪ: ರಾಜ; ಎಕ್ಕಟಿ: ಒಬ್ಬಂಟಿಗ, ಏಕಾಕಿ, ಗುಟ್ಟು; ಕರೆ: ಬರೆಮಾಡು; ನಿಜ: ನೈಜ, ದಿಟ; ಶಕ್ತಿ: ಬಲ; ಪ್ರಯೋಗ: ಉಪಯೋಗ, ನಿದರ್ಶನ; ಒರೆ: ಶೋಧಿಸಿ; ಹಸಾದ: ಪ್ರಸಾದ, ಅನುಗ್ರಹ; ಮಧುರ: ಹಿತ; ವಚನ: ನುಡಿ;

ಪದವಿಂಗಡಣೆ:
ಅರಸ +ಕೇಳೈ +ಕೃಷ್ಣ+ಶಕ್ತಿ
ಸ್ಫುರಣವ್+ಐಸಲೆ +ನಿಮ್ಮ +ಬಲ +ಸಂ
ಹರಣಕ್+ಆವುದು +ಬೀಜ +ನಿರ್ದೈವರ +ವಿಲಾಸವಿದು
ಹರಿ +ಯುಧಿಷ್ಠಿರ+ ನೃಪನನ್+ಎಕ್ಕಟಿ
ಕರೆದು +ನಿಜಶಕ್ತಿ+ಪ್ರಯೋಗವನ್
ಒರೆದಡ್+ಒಡಬಿಟ್ಟನು +ಹಸಾದದ +ಮಧುರ+ವಚನದಲಿ

ಅಚ್ಚರಿ:
(೧) ಕೌರವರ ಸೋಲಿನ ಮೂಲ ಕಾರಣ – ನಿಮ್ಮ ಬಲ ಸಂಹರಣಕಾವುದು ಬೀಜ ನಿರ್ದೈವರ ವಿಲಾಸವಿದು

ಪದ್ಯ ೭೬: ಶ್ರೀಕೃಷ್ಣನು ಯಾವ ಆಯುಧವನ್ನು ಹಿಡಿದನು?

ಕಾದಿದರು ವಿವಿಧಾಸ್ತ್ರ ವಿದ್ಯಾ
ಭೇದದಲಿ ರಥಭಂಗ ಚಾಪವಿ
ಭೇದ ಶಸ್ತ್ರಾಸ್ತ್ರೌಘ ಸಂಹರಣ ಪ್ರಪಂಚದಲಿ
ಈ ದುರಾತ್ಮನ ನಿಲಿಸಿ ನಿಮಿಷದೊ
ಳಾ ದಯಾಂಬುಧಿ ತುಡುಕಿದನು ತ್ರೈ
ವೇದಮಯ ಮೂರ್ತಿತ್ರಯಾತ್ಮಕ ವರ ಸುದರ್ಶನವ (ಸಭಾ ಪರ್ವ, ೧೧ ಸಂಧಿ, ೭೬ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣ ಶಿಶುಪಾಲರು ಅನೇಕ ಅಸ್ತ್ರಗಳನ್ನು ಪ್ರಯೋಗಿಸಿ ಕಾದಿದರು. ಪರಸ್ಪರ ರಥಗಲನ್ನು ಬಿಲ್ಲುಗಳನ್ನೂ ಕತ್ತರಿಸುವುದು, ಎದುರಾಳಿಗಳ ಶಸ್ತ್ರಾಸ್ತ್ರಗಳನ್ನು ನಾಶಮಾಡುವುದು ಈ ರೀತಿಯಾಗಿ ಬಹಳ ಸಮಯ ಯುದ್ಧವಾಯಿತು. ಶ್ರೀಕೃಷ್ಣನು ಮೂರುವೇದಗಳು, ಮೂರುಮೂರ್ತಿಗಳು ಆತ್ಮವಾದ ಸುದರ್ಶನ ಚಕ್ರವನ್ನು ಹಿಡಿದನು.

ಅರ್ಥ:
ಕಾದಿದರು: ಕಾವಲಿರು, ನೋಡು; ವಿವಿಧ: ಹಲವಾರು; ಅಸ್ತ್ರ: ಶಸ್ತ್ರ, ಆಯುಧ; ವಿದ್ಯ: ಜ್ಞಾನ; ಭೇದ: ಮುರಿ, ಸೀಳು; ರಥ: ಬಂಡಿ; ಭಂಗ: ಮುರಿಯುವಿಕೆ, ಚೂರು ಮಾಡುವಿಕೆ; ಚಾಪ: ಬಿಲ್ಲು; ವಿಭೇದ: ಒಡೆಯುವಿಕೆ, ಬೇರ್ಪಡಿಸುವಿಕೆ; ಔಘ: ಗುಂಪು, ಸಮೂಹ; ಸಂಹರಣ: ಅಳಿವು, ನಾಶ; ಪ್ರಪಂಚ: ಜಗತ್ತು; ದುರಾತ್ಮ: ದುಷ್ಟ; ನಿಲಿಸು: ತಡೆ; ನಿಮಿಷ: ಕ್ಷಣ; ದಯೆ: ಕರುಣೆ; ಅಂಬುಧಿ: ಸಾಗರ; ತುಡುಕು: ಹೋರಾಡು, ಸೆಣಸು; ತ್ರೈ: ಮೂರು; ವೇದ: ಶೃತಿ; ಮೂರ್ತಿ: ಆಕಾರ, ಸ್ವರೂಪ; ಆತ್ಮ: ಜೀವ; ವರ: ಶ್ರೇಷ್ಠ; ಸುದರ್ಶನ: ಕೃಷ್ಣನ ಆಯುಧ, ಚಕ್ರ;

ಪದವಿಂಗಡಣೆ:
ಕಾದಿದರು+ ವಿವಿಧ+ಅಸ್ತ್ರ +ವಿದ್ಯಾ
ಭೇದದಲಿ+ ರಥಭಂಗ +ಚಾಪ+ವಿ
ಭೇದ +ಶಸ್ತ್ರಾಸ್ತ್ರ+ ಔಘ +ಸಂಹರಣ+ ಪ್ರಪಂಚದಲಿ
ಈ +ದುರಾತ್ಮನ +ನಿಲಿಸಿ+ ನಿಮಿಷದೊಳ್
ಆ+ ದಯಾಂಬುಧಿ +ತುಡುಕಿದನು +ತ್ರೈ
ವೇದಮಯ +ಮೂರ್ತಿತ್ರಯಾತ್ಮಕ+ ವರ+ ಸುದರ್ಶನವ

ಅಚ್ಚರಿ:
(೧) ಸುದರ್ಶನದ ವರ್ಣನೆ – ತ್ರೈವೇದಮಯ ಮೂರ್ತಿತ್ರಯಾತ್ಮಕ ವರ ಸುದರ್ಶನವ

ಪದ್ಯ ೪೪: ಭುವನಜನ ಏನೆಂದು ಒರಲಿದರು?

ಅರಿಪುರತ್ರಯ ದಹನ ಕರ್ಮ
ಸ್ಫುರಣವಸ್ಮತ್ಕಾರ್ಯವದು ಗೋ
ಚರಿಸಿತಲ್ಲಿಂ ಮೇಲಣುಚಿತಾನುಚಿತ ಕೃತ್ಯವನು
ಕರುಣಿ ನೀವೇ ಬಲ್ಲೆ ಜನ ಸಂ
ಹರಣ ಕಾಲವೊ ಮೇಣು ರಕ್ಷಾ
ಕರಣ ಕಾಲವೊ ದೇವ ಎಂದೊರಲಿದುದು ಭುವನಜನ (ಕರ್ಣ ಪರ್ವ, ೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಲೋಕದ ಜನರು ಶಿವನ ಮುಂದೆ ಬಂದು ದೇವಾ ತ್ರಿಪುರಗಳನ್ನು ದಹಿಸು ಎಂದು ನಾವು ನಿಮ್ಮಲ್ಲಿ ಪ್ರಾರ್ಥಿಸಿದೆವು, ಅದು ಮುಗಿಯಿತು, ಅಲ್ಲಿಂದ ಮುಂದೆ ಇಡೀ ಹದಿನಾಲ್ಕು ಲೋಕಕ್ಕೆ ಬೆಂಕಿಯು ಆವರಿಸಿ ಸುಡುತ್ತಿದೆ ಇದು ಉಚಿತವೋ ಅನುಚಿತವೋ ನೀವೇ ಬಲ್ಲಿರಿ, ಇದು ಜನರನ್ನು ರಕ್ಷಿಸುವ ಕಾಲವೋ, ಸಂಹರಿಸುವ ಕಾಲವೋ ಎಂಬುದನ್ನು ಕರುಣಿಯಾದ ನೀನೇ ಬಲ್ಲೆ ಎಂದು ಜಗತ್ತಿನ ಜನರು ಗೋಳಿಟ್ಟರು.

ಅರ್ಥ:
ಅರಿ: ವೈರಿ; ಪುರ: ಊರು; ತ್ರಯ: ಮೂರು; ದಹನ: ಸುಡು; ಕರ್ಮ: ಕಾರ್ಯ; ಸ್ಫುರಣ: ಡುಗುವುದು, ಕಂಪನ; ಅಸ್ಮತ್: ನನ್ನ; ಕಾರ್ಯ: ಕೆಲಸ; ಗೋಚರಿಸು: ತೋರು; ಮೇಲಣ: ಮುಂದಿನ; ಉಚಿತ: ಸರಿಯಾದ; ಅನುಚಿತ: ಸರಿಯಲ್ಲದ; ಕೃತ್ಯ: ಕೆಲಸ; ಕರುಣಿ: ದಯಾಪರ; ಬಲ್ಲೆ: ತಿಳಿ; ಜನ: ಜೀವರು; ಸಂಹರಣ: ಅಂತ್ಯ; ಕಾಲ: ಸಮಯ; ಮೇಣು: ಅಥವ; ರಕ್ಷಾ: ಕಾಪಾದು; ದೇವ: ಭಗವಂತ; ಒರಲು: ಹೇಳು, ಅರಚು, ಗೋಳಿಡು; ಭುವನಜನ: ಜಗತ್ತಿನ ಜನ;

ಪದವಿಂಗಡಣೆ:
ಅರಿ+ಪುರತ್ರಯ +ದಹನ +ಕರ್ಮ
ಸ್ಫುರಣವ್+ಅಸ್ಮತ್+ಕಾರ್ಯವದು +ಗೋ
ಚರಿಸಿತ್+ಅಲ್ಲಿಂ +ಮೇಲಣ್+ಉಚಿತ+ಅನುಚಿತ +ಕೃತ್ಯವನು
ಕರುಣಿ +ನೀವೇ +ಬಲ್ಲೆ +ಜನ +ಸಂ
ಹರಣ +ಕಾಲವೊ +ಮೇಣು +ರಕ್ಷಾ
ಕರಣ+ ಕಾಲವೊ+ ದೇವ +ಎಂದ್+ಒರಲಿದುದು +ಭುವನಜನ

ಅಚ್ಚರಿ:
(೧) ಹರಣ, ಕರಣ – ಪ್ರಾಸ ಪದ
(೨) ಕರ್ಮ, ಕೃತ್ಯ, ಕಾರ್ಯ – ಸಾಮ್ಯಾರ್ಥದ ಪದಗಳು

ಪದ್ಯ ೬೯: ರಾಜನು ತನ್ನ ಅಭ್ಯುದಯಕ್ಕೆ ಯಾವ ಗುಣಗಳನ್ನು ರೂಢಿಸಿಕೊಳ್ಳಬೇಕು?

ಗುರು ವಿರೋಧ ಮಹೀಬುಧರ ಮ
ತ್ಸರವು ದೈವದ್ರೋಹ ಗುಣ ಸಂ
ಹರಣ ಬಂಧು ದೇಷವತ್ಯಾಲೀಢ ವಾಕ್ಕಥನ
ಶರಣಜನ ದಂಡಿತ್ವವೆಂಬಿವ
ನರವರಿಸದಂಗೈಪ ಭೂಪನ
ಸಿರಿಗೆ ಮೂಡುಗು ಕೇಡು ನಿಮಿಷದೊಳರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೬೯ ಪದ್ಯ)

ತಾತ್ಪರ್ಯ:
ರಾಜನಾದವನು ಯಾವ ಗುಣವನ್ನು ಬೆಳಸಿಕೊಂಡರೆ ಅವನಿಗೆ ಸಿರಿಯು ಒಲಿಯುತ್ತದೆ ಎಂದು ವಿದುರ ತಿಳಿಸಿದ್ದಾರೆ. ಗುರುವನ್ನು ವಿರೋಧಿಸುವವ, ಬ್ರಾಹ್ಮಣರನ್ನು ಹೊಟ್ಟೆಕಿಚ್ಚಿನಿಂದ ನೋಡುವವ, ಗುಣಗಳನ್ನು ಕೊಲ್ಲುವವ, ಬಂಧುಗಳನ್ನು ದ್ವೇಷಿಸುವ, ಇನ್ನೊಬ್ಬರ ಮನಸ್ಸನ್ನು ಗಾಯಗೊಳಿಸುವ ಮಾತನಾಡುವ, ಆಶ್ರಿತರನ್ನು ಶಿಕ್ಷಿಸುವ, ಈ ಗುಣಗಳನ್ನು ರಾಜನಾದವನು ರೂಢಿಸಿಕೊಂಡರೆ ಅವನ್ ಐಶ್ವರ್ಯಕ್ಕೆ ಕ್ಷಣಮಾತ್ರದಲ್ಲಿ ಕೇಡುಂಟಾಗುತ್ತದೆ.

ಅರ್ಥ:
ಗುರು: ಆಚಾರ್ಯ; ವಿರೋಧ: ಎದುರು,ವೈರತ್ವ, ಹಗೆತನ; ಮಹಿ: ಭೂಮಿ; ಮಹೀಬುಧರು: ಬ್ರಾಹ್ಮಣರು; ಮತ್ಸರ:ಹೊಟ್ಟೆಕಿಚ್ಚು, ಈರ್ಷ್ಯೆ; ದೈವ: ಸುರ, ದೇವತೆ; ದ್ರೋಹ:ವಿಶ್ವಾಸಘಾತ, ವಂಚನೆ, ಮೋಸ; ಗುಣ:ನಡತೆ, ಸ್ವಭಾವ; ಸಂಹರಣ: ನಾಶ; ಬಂಧು: ಬಾಂಧವರು; ದ್ವೇಷ: ಹಗೆ; ಆಲೀಢ: ಆವರಿಸಿದ; ವಾಕ್: ಮಾತು, ವಾಣಿ; ಶರಣ:ಆಶ್ರಿತ; ದಂಡಿತ್ವ: ಹೊಡೆಯುವ, ದಂಡಿಸು, ಶಿಕ್ಷಿಸು; ಅರವರಿಸು: ವಿಚಾರಿಸು, ಕಡೆಗಣಿಸು; ಭೂಪ: ರಾಜ; ಸಿರಿ: ಐಶ್ವರ್ಯ; ಮೂಡು: ಹುಟ್ಟು; ಕೇಡು:ಆಪತ್ತು, ಕೆಡಕು; ನಿಮಿಷ: ಕ್ಷಣಮಾತ್ರ; ಅರಸ: ರಾಜ;

ಪದವಿಂಗಡಣೆ:
ಗುರು +ವಿರೋಧ +ಮಹೀಬುಧರ+ ಮ
ತ್ಸರವು+ ದೈವದ್ರೋಹ +ಗುಣ+ ಸಂ
ಹರಣ+ ಬಂಧು+ ದೇಷವ್+ಅತಿ+ಆಲೀಢ +ವಾಕ್ಕಥನ
ಶರಣಜನ+ ದಂಡಿತ್ವವ್+ಎಂಬ್+ಇವನ್
ಅರವರಿಸದಂಗೈಪ+ ಭೂಪ
ಸಿರಿಗೆ+ ಮೂಡುಗು+ ಕೇಡು+ ನಿಮಿಷದೊಳ್+ಅರಸ +ಕೇಳೆಂದ

ಅಚ್ಚರಿ:
(೧) ವಿರೋಧ, ಮತ್ಸರ, ಸಂಹರಣ, ದ್ವೇಷ, ವಾಕ್ಕಥನ, ದಂಡಿತ್ವ, – ೬ ಬಗೆಯ ಗುಣಗಳನ್ನು ತ್ಯಜಿಸಬೇಕು
(೨) ಭೂಪ, ಅರಸ – ಸಮನಾರ್ಥಕ ಪದ