ಪದ್ಯ ೯: ಕೌರವ ಸೈನ್ಯದ ಸ್ಥಿತಿ ಏನಾಯಿತು?

ಫಡ ಎನುತ ಪಾಂಚಾಲಬಲ ಸಂ
ಗಡಿಸಿತನಿಲಜನೊಡನೆ ಸೃಂಜಯ
ರೆಡೆಯಲಡಹಾಯಿದರು ಸುತ ಸೋಮಾದಿಗಳು ಸಹಿತ
ಕಡೆವಿಡಿದು ಕಲಿಪಾರ್ಥನಂಬಿನ
ವಡಬನೆದ್ದುದು ಕುರುಬಲದ ಹೆ
ಗ್ಗಡಲು ಬರತುದು ಹೇಳಲೇನದ ಭೂಪ ಕೇಳೆಂದ (ಶಲ್ಯ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಥತ್ ಎಂದು ಕೌರವರನ್ನು ತಿರಸ್ಕರಿಸಿ ಪಾಂಚಾಲ ಬಲವು ಭೀಮನೊಡನೆ ಸೇರಿತು. ಸೃಂಜಯರು ಸುತಸೋಮನೇ ಮೊದಲಾದವರು ಕೌರವಬಲವನ್ನು ತಡೆದರು. ಅರ್ಜುನನ ಬಾಣಗಳ ವಡಬಾಗ್ನಿಯು ಮೇಲೆದ್ದಿತು. ಕೌರವ ಬಲದ ಕಡಲು ಬತ್ತಿಹೋಯಿತು.

ಅರ್ಥ:
ಫಡ: ತಿರಸ್ಕಾರದ ಮಾತು; ಬಲ: ಸೈನ್ಯ; ಸಂಗಡಿಸು: ಒಟ್ಟಾಗು, ಗುಂಪಾಗು; ಅನಿಲಜ: ಭೀಮ; ಅಡಹಾಯಿ: ಅಡ್ಡ ಬಂದು; ಆದಿ: ಮುಂತಾದ; ಸಹಿತ: ಜೊತೆ; ಕಡೆ: ಕೊನೆ; ಕಲಿ: ಶೂರ; ಅಂಬು: ಬಾಣ; ವಡಬ: ಸಮುದ್ರದಲ್ಲಿರುವ ಬೆಂಕಿ; ಎದ್ದು: ಮೇಲೇಳು; ಹೆಗ್ಗಡಲು: ದೊಡ್ಡ ಸಮುದ್ರ; ಬರ: ಕ್ಷಾಮ, ದುರ್ಭಿಕ್ಷ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಫಡ +ಎನುತ +ಪಾಂಚಾಲಬಲ +ಸಂ
ಗಡಿಸಿತ್+ಅನಿಲಜನೊಡನೆ +ಸೃಂಜಯರ್
ಎಡೆಯಲ್+ಅಡಹಾಯಿದರು +ಸುತ +ಸೋಮಾದಿಗಳು +ಸಹಿತ
ಕಡೆವಿಡಿದು +ಕಲಿ+ಪಾರ್ಥನ್+ಅಂಬಿನ
ವಡಬನೆದ್ದುದು +ಕುರುಬಲದ +ಹೆ
ಗ್ಗಡಲು +ಬರತುದು +ಹೇಳಲೇನದ +ಭೂಪ +ಕೇಳೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸುತ ಸೋಮಾದಿಗಳು ಸಹಿತ
(೨) ರೂಪಕದ ಪ್ರಯೋಗ – ಕಲಿಪಾರ್ಥನಂಬಿನವಡಬನೆದ್ದುದು ಕುರುಬಲದ ಹೆಗ್ಗಡಲು ಬರತುದು