ಪದ್ಯ ೮: ಕೌರವರ ಜೊತೆಗೆ ಯಾವ ದೇಶದ ಸೈನಿಕರು ಸೇರಿದರು?

ಪಡಿಬಲಕೆ ಹೊಕ್ಕುದು ತ್ರಿಗರ್ತರ
ಗಡಣ ಕೃಪ ಕೃತವರ್ಮರಿಗೆ ಸಂ
ಗಡಿಗನಶ್ವತ್ಥಾಮನೀ ಹೇರಾಳ ದಳಸಹಿತ
ಕೊಡಹಿದರು ಪಾಂಡವಬಲವನವ
ಗಡಿಸಿದರು ಪವಮಾನಜನನ
ಕ್ಕುಡಿಸಿ ಬೆಬ್ಬಳೆವೋಯ್ತು ಭೀಮನ ಭಾರಣೆಯ ಭಟರು (ಶಲ್ಯ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಅವರ ಬೆಂಬಲಕ್ಕೆ ತ್ರಿಗರ್ತ ದೇಶದ ಸೈನಿಕರ ಬಲವು ನುಗ್ಗಿತು. ಅಶ್ವತ್ಥಾಮನು ಕೃಪ ಕೃತವರ್ಮರ ಸಂಗಡಿಗನಲ್ಲವೇ ಎಂದು ನುಗ್ಗಿ ಪಾಂಡವ ಬಲವನ್ನು ತಡೆದು ಭೀಮನನ್ನು ನಿಲ್ಲಿಸಿದರು. ಭೀಮನ ಪರಾಕ್ರಮಿಗಳು ಕಳವಳಗೊಂಡರು.

ಅರ್ಥ:
ಪಡಿಬಲ: ವೈರಿಸೈನ್ಯ; ಹೊಕ್ಕು: ಸೇರು; ತ್ರಿಗರ್ತ: ದೇಶದ ಹೆಸರು; ಗಡಣ: ಗುಂಪು; ಸಂಗಡಿ: ಜೊತೆಗಾರ; ಹೇರಾಳ: ದೊಡ್ಡ, ವಿಶೇಷ; ದಳ: ಸೈನ್ಯ; ಸಹಿತ: ಜೊತೆ; ಕೊಡಹು: ಚೆಲ್ಲು; ಬಲ: ಸೈನ್ಯ; ಅವಗಡಿಸು: ಕಡೆಗಣಿಸು; ಪವಮಾನಜ: ಭೀಮ; ಅಕ್ಕುಡರ್: ಸತ್ವಶಾಲಿ; ಬೆಬ್ಬಳೆ: ಸೋಜಿಗ, ಗಾಬರಿ; ಭಾರಣೆ: ಮಹಿಮೆ, ಗೌರವ; ಭಟ: ಸೈನಿಕ;

ಪದವಿಂಗಡಣೆ:
ಪಡಿಬಲಕೆ +ಹೊಕ್ಕುದು +ತ್ರಿಗರ್ತರ
ಗಡಣ+ ಕೃಪ +ಕೃತವರ್ಮರಿಗೆ+ ಸಂ
ಗಡಿಗನ್+ಅಶ್ವತ್ಥಾಮನ್+ಈ+ ಹೇರಾಳ +ದಳಸಹಿತ
ಕೊಡಹಿದರು +ಪಾಂಡವಬಲವನ್+ಅವ
ಗಡಿಸಿದರು +ಪವಮಾನಜನನ್
ಅಕ್ಕುಡಿಸಿ +ಬೆಬ್ಬಳೆವೋಯ್ತು +ಭೀಮನ +ಭಾರಣೆಯ +ಭಟರು

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭೀಮನ ಭಾರಣೆಯ ಭಟರು