ಪದ್ಯ ೧೦: ಊರ್ವಶಿಯ ಹಿರಿಮೆ ಎಂತಹುದು?

ಜನಮನದ ಸಂಕಲೆವನೆಯೊ ಲೋ
ಚನಮೃಗದ ತಡೆವೇಂಟೆಕಾತಿಯೊ
ಮನುಮಥನ ಸಂಜೀವನೌಷಧಿಯೋ ಮಹಾದೇವ
ಮನಸಿಜನ ಮಾರಾಂಕ ಕಾಮುಕ
ಜನದ ಜೀವಾರ್ಥಕ್ಕೆ ವಿಭುವೆಂ
ದೆನಿಸಿದೂರ್ವಶಿ ಬಂದಳರ್ಜುನದೇವನರಮನೆಗೆ (ಅರಣ್ಯ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಊರ್ವಶಿಯು ಜನಗಳ ನೋಟಕ್ಕೆ ಸೆರೆಮನೆ, ಕಣ್ಣೆಂಬ ಮೃಗಗಳನ್ನು ತಡೆದು ನಿಲ್ಲಿಸಬಲ್ಲ ಬೇಟೆಕಾತಿ, ಸತ್ತಿದ್ದ ಮನ್ಮಥನಿಗೆ ಸಂಜೀವಿನಿಯನ್ನು ಕೊಟ್ಟು ಬದುಕಿಸಿದವಳು, ಮನ್ಮಥನ ಜನರನ್ನು ಪರಿಭವಗೊಳಿಸಲು ಹಾಕಿದ ಕೊಕ್ಕೆ, ಕಾಮುಕರ ಜೀವಕ್ಕೆ ಒಡತಿ, ಅಂತಹ ಊರ್ವಶಿ ಅರ್ಜುನನ ಅರಮನೆಗೆ ಬಂದಳು.

ಅರ್ಥ:
ಜನ: ಗುಂಪು, ಮನುಷ್ಯ; ಮನ: ಮನಸ್ಸು; ಸಂಕಲೆ:ಬೇಡಿ, ಸೆರೆ; ಲೋಚನ: ಕಣ್ಣು; ಮೃಗ: ಜಿಂಕೆ; ತಡೆ: ನಿಲ್ಲಿಸು; ತಡೆವೇಂಟೆಕಾತಿ: ತಡೆಯುವ ಬೇಟೆಕಾರಳು; ಮನುಮಥ: ಕಾಮ; ಸಂಜೀವ: ಚೈತನ್ಯ, ಮರುಜೇವಣಿ; ಮಾರಾಂಕ: ಪ್ರತಿಯುದ್ಧ; ಕಾಮುಕ: ಕಾಮಾಸಕ್ತನಾದವನು; ಜೀವಾರ್ಥ: ಬದುಕುವ ಅರ್ಥ; ವಿಭು:ಒಡೆಯ, ಅರಸು; ಬಂದಳು: ಆಗಮಿಸು; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಜನಮನದ+ ಸಂಕಲೆವನೆಯೊ+ ಲೋ
ಚನಮೃಗದ +ತಡೆವೇಂಟೆಕಾತಿಯೊ
ಮನುಮಥನ +ಸಂಜೀವನ್+ಔಷಧಿಯೋ +ಮಹಾದೇವ
ಮನಸಿಜನ +ಮಾರಾಂಕ +ಕಾಮುಕ
ಜನದ+ ಜೀವಾರ್ಥಕ್ಕೆ +ವಿಭುವೆಂ
ದೆನಿಸಿದ್+ಊರ್ವಶಿ +ಬಂದಳ್+ಅರ್ಜುನದೇವನ್+ಅರಮನೆಗೆ

ಅಚ್ಚರಿ:
(೧) ಊರ್ವಶಿಯ ಹಿರಿಮೆಯನ್ನು ಹೇಳುವ ಪರಿ – ಜನಮನದ ಸಂಕಲೆವನೆಯೊ ಲೋ
ಚನಮೃಗದ ತಡೆವೇಂಟೆಕಾತಿಯೊ ಮನುಮಥನ ಸಂಜೀವನೌಷಧಿಯೋ ಮಹಾದೇವ