ಪದ್ಯ ೫೪:ಭೀಷ್ಮರು ಎಲ್ಲರಿಗು ಯಾವುದನ್ನು ಕೇಳಲು ಹೇಳ ತೊಡಗಿದರು?

ಕೇಳು ಧರ್ಮಜ ಸಕಲಋಷಿಗಳು
ಕೇಳಿರೈ ನೆರೆದವನಿಪಾಲರು
ಕೇಳಿರೈ ನೆರದಖಿಳಜನ ಚಿತ್ತಾವಧಾನದಲಿ
ಶ್ರೀಲತಾಂಗಿಯ ವಲ್ಲಭನ ಶ್ರುತಿ
ಮೌಳಿಮಂಡಿತ ಪಾದಪೀಠನ
ಲೀಲೆಯನು ಚಿತ್ತವಿಸಿ ಗದುಗಿನ ವೀರನಾರಯಣನ (ಸಭಾ ಪರ್ವ, ೯ ಸಂಧಿ, ೫೪ ಪದ್ಯ)

ತಾತ್ಪರ್ಯ:
ಧರ್ಮರಾಯನ ಕೋರಿಕೆಯ ಮೇರೆಗೆ ಭೀಷ್ಮರು ಸಮಸ್ತ ಋಷಿ ಪ್ರಮುಖರೆ, ಎಲ್ಲಾ ರಾಜರೇ, ಸಭೆಯಲ್ಲಿರುವ ಸಮಸ್ತರೂ ಮನಸ್ಸಿಟ್ಟು ಕೇಳಿರಿ, ಲಕ್ಷ್ಮೀವಲ್ಲಭನ, ವೇದಗಳ ಶಿಖರಪ್ರಾಯದಂತೆ ಅಲಂಕೃತನಾದ, ಉಪನಿಷತ್ ವಾಕ್ಯಮಂಡಿತ ಪಾದಪೀಠನೂ ಆದ ಶ್ರೀಕೃಷ್ಣನ ಲೀಲೆಯನ್ನು ಎಲ್ಲರೂ ಚಿತ್ತವಿಟ್ಟು ಕೇಳಿರಿ ಎಂದು ಹೇಳಿದರು.

ಅರ್ಥ:
ಕೇಳು: ಆಲಿಸು; ಸಕಲ: ಎಲ್ಲಾ; ಋಷಿ: ಮುನಿ; ನೆರೆದ: ಸೇರಿದ; ಅವನಿಪಾಲ: ರಾಜ; ಅಖಿಳ: ಎಲ್ಲಾ; ಜನ: ಮನುಷ್ಯರು; ಚಿತ್ತ: ಮನಸ್ಸು; ಅವಧಾನ: ಏಕಚಿತ್ತತೆ; ಶ್ರೀಲತಾಂಗಿ: ಲಕ್ಷ್ಮಿ; ವಲ್ಲಭ: ಗಂಡ, ಪತಿ; ಶ್ರುತಿ: ವೇದ; ಮೌಳಿ: ಶಿರ; ಮಂಡಿತ: ಅಲಂಕೃತವಾದ; ಪಾದ: ಚರಣ;ಪೀಠ: ಆಸನ; ಲೀಲೆ: ಆನಂದ, ಸಂತೋಷ, ವಿಲಾಸ; ಚಿತ್ತವಿಸಿ: ಗಮನವಿಟ್ಟು ಕೇಳಿ;

ಪದವಿಂಗಡಣೆ:
ಕೇಳು +ಧರ್ಮಜ +ಸಕಲ+ಋಷಿಗಳು
ಕೇಳಿರೈ+ ನೆರೆದ್+ಅವನಿಪಾಲರು
ಕೇಳಿರೈ+ ನೆರದ್+ಅಖಿಳ+ಜನ +ಚಿತ್ತ+ಅವಧಾನದಲಿ
ಶ್ರೀಲತಾಂಗಿಯ +ವಲ್ಲಭನ +ಶ್ರುತಿ
ಮೌಳಿ+ಮಂಡಿತ+ ಪಾದ+ಪೀಠನ
ಲೀಲೆಯನು +ಚಿತ್ತವಿಸಿ+ ಗದುಗಿನ+ ವೀರನಾರಯಣನ

ಅಚ್ಚರಿ:
(೧) ಕೇಳು, ಕೇಳಿರೈ – ೧-೩ ಸಾಲಿನ ಮೊದಲ ಪದ
(೨) ಲಕ್ಷ್ಮಿಯನ್ನು ಶ್ರೀಲತಾಂಗಿ ಎಂದು ಕರೆದಿರುವುದು
(೩) ಕೃಷ್ಣನ ಗುಣವಾಚಕಗಳು – ಶ್ರೀಲತಾಂಗಿಯ ವಲ್ಲಭ, ಶ್ರುತಿಮೌಳಿಮಂಡಿತ ಪಾದಪೀಠ;