ಪದ್ಯ ೧೨: ಆಶ್ರಮವಾಸಿಗಳು ಗಣಿಕೆಯರನ್ನು ಏಕೆ ಬಯ್ದರು?

ಶಾಂತರುರೆ ವಿಜಿತೇಂದ್ರಿಯರು ವೇ
ದಾಂತ ನಿಷ್ಠರು ಸುವ್ರತಿಗಳ
ಶ್ರಾಂತವೇದಾಧ್ಯಯನ ಯಾಜ್ಞಿಕ ಕರ್ಮ ಕೋವಿದರು
ಸಂತತಾನುಷ್ಠಾನ ಪರರನ
ದೆಂತು ನೀವಾಕ್ರಮಿಸುವಿರಿ ವಿ
ಭ್ರಾಂತರೌ ನೀವೆನುತ ಜರೆದರು ಕಾಮಿನೀಜನವ (ಅರಣ್ಯ ಪರ್ವ, ೧೯ ಸಂಧಿ, ೧೨ ಪದ್ಯ)

ತಾತ್ಪರ್ಯ:
ಶಾಮ್ತರು, ಜಿತೇಂದ್ರಿಯರು, ವೇದಾಮ್ತ ನಿಷ್ಠರು, ಒಳ್ಳೆಯ ವ್ರತಗಳಲ್ಲಿ ತತ್ಪರರು, ಬಿಡುವಿಲ್ಲದೆ ವೇದಾಧ್ಯಯನ ಮಾಡುವವರು, ಇಂತಹವರನ್ನು ನೀವು ಹೇಗೆ ಕೆಡಿಸುವಿರಿ, ನಿಮಿಗೆಲ್ಲೋ ಹುಚ್ಚು ಎಂದು ಆಶ್ರಮವಾಸಿಗಳು ಗಣಿಕೆಯರನ್ನು ಬಯ್ದರು.

ಅರ್ಥ:
ಶಾಂತ: ತಳಮಳವಿಲ್ಲದ; ಉರೆ: ಅತಿಶಯವಾಗಿ; ವಿಜಿತ: ಗೆದ್ದ; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ವೇದಾಂತ: ಉಪನಿಷತ್ತುಗಳು; ನಿಷ್ಠ:ಶ್ರದ್ಧೆಯುಳ್ಳವನು; ಸುವ್ರತಿ: ನಿಯಮಬದ್ಧವಾದ ನಡವಳಿಕೆಯುಳ್ಳವನು, ಯೋಗಿ; ಶ್ರಾಂತ: ದಣಿದುದು, ಆಯಾಸಗೊಂಡುದು; ವೇದ: ಶೃತಿ; ಅಧ್ಯಯನ: ಓದು; ಯಾಜ್ಞಿಕ: ಯಜ್ಞ ಮಾಡುವವ; ಕರ್ಮ: ಕಾರ್ಯ, ಕೆಲಸ; ಕೋವಿದ: ಪಂಡಿತ; ಸಂತತ: ನಿರಂತರವಾದುದು; ಅನುಷ್ಠಾನ: ಆಚರಣೆ; ಪರರ: ಬೇರೆ; ಆಕ್ರಮಿಸು: ದಾಳಿ ನಡೆಸುವುದು; ವಿಭ್ರಾಂತ: ಮರುಳ; ಜರೆ: ಬಯ್ಯುವುದು; ಕಾಮಿನಿ: ಹೆಣ್ಣು;

ಪದವಿಂಗಡಣೆ:
ಶಾಂತರ್+ಉರೆ +ವಿಜಿತ+ ಇಂದ್ರಿಯರು+ ವೇ
ದಾಂತ +ನಿಷ್ಠರು +ಸುವ್ರತಿಗಳ
ಶ್ರಾಂತ+ವೇದಾಧ್ಯಯನ +ಯಾಜ್ಞಿಕ +ಕರ್ಮ +ಕೋವಿದರು
ಸಂತತ+ಅನುಷ್ಠಾನ +ಪರರನ
ದೆಂತು +ನೀವ್+ಆಕ್ರಮಿಸುವಿರಿ +ವಿ
ಭ್ರಾಂತರೌ +ನೀವೆನುತ+ ಜರೆದರು+ ಕಾಮಿನೀ+ಜನವ

ಅಚ್ಚರಿ:
(೧) ಯಾರನ್ನು ಆಕ್ರಮಿಸಲು ಕಷ್ಟ: ಶಾಂತರು, ವಿಜಿತೇಂದ್ರಿಯರು, ವೇದಾಂತ ನಿಷ್ಠರು ಸುವ್ರತಿಗಳ,ಶ್ರಾಂತವೇದಾಧ್ಯಯನ ಯಾಜ್ಞಿಕ ಕರ್ಮ ಕೋವಿದರು