ಪದ್ಯ ೫೦: ಕೃಷ್ಣನು ಯಾವುದರಲ್ಲಿ ವೃದ್ಧನು?

ಜ್ಞಾನವೃದ್ಧರು ವಿಪ್ರರಲಿ ಸ
ನ್ಮಾನನೀಯರು ಶೌರ್ಯವೃದ್ಧರು
ಮಾನವೇಂದ್ರರೊಳಧಿಕವಿದು ಪೌರಾಣ ಸಿದ್ಧವಲೆ
ಜ್ಞಾನವೃದ್ಧನು ಕೃಷ್ಣನಾಹವ
ದೀನನೇ ಘನ ಶೌರ್ಯನೆಂಬುದ
ತಾನರಿಯನೇ ಚೈದ್ಯ ಭೂಪತಿ ಎಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಬ್ರಾಹ್ಮಣರಲ್ಲಿ ಜ್ಞಾನವಿರುವವರು ವೃದ್ಧರು, ಕ್ಷತ್ರಿಯರಲ್ಲಿ ಶೌರ್ಯದಿಂದ ವೃದ್ಧರಾಗುತ್ತಾರೆ, ಇದು
ಹಿಂದಿನಿಂದಲೂ ಬಂದ ವಾಡಿಕೆ. ಕೃಷ್ಣನು ಜ್ಞಾನವೃದ್ಧನು. ಅವನು ಮಹಾಶೂರನೆಂಬುದು ಶಿಶುಪಾಲನಿಗೆ ತಿಳಿದಿಲ್ಲವೇ ಎಂದು ಭೀಷ್ಮನು ಪ್ರಶ್ನಿಸಿದನು.

ಅರ್ಥ:
ವೃದ್ಧ: ಗೌರವಾರ್ಹ, ಪೂಜ್ಯ, ಪಂಡಿತ, ವಯಸ್ಸಾದವ; ಜ್ಞಾನ: ತಿಳುವಳಿಕೆ, ವಿದ್ಯೆ; ವಿಪ್ರ: ಬ್ರಾಹ್ಮಣ; ಶೌರ್ಯ: ಪರಾಕ್ರಮ; ಪೌರಾಣ: ಪುರಾಣ, ಹಿಂದಿನ ದಾಖಲೆ; ಸಿದ್ಧ: ಅಣಿಯಾದ; ಆಹವ: ಯುದ್ಧ; ದೀನ: ಬಡವ, ದರಿದ್ರ; ಘನ: ಶ್ರೇಷ್ಠ; ಅರಿ: ತಿಳಿ; ಚೈದ್ಯ: ಶಿಶುಪಾಲ; ಭೂಪತಿ: ರಾಜ;

ಪದವಿಂಗಡಣೆ:
ಜ್ಞಾನವೃದ್ಧರು +ವಿಪ್ರರಲಿ +ಸ
ನ್ಮಾನನೀಯರು +ಶೌರ್ಯವೃದ್ಧರು
ಮಾನವೇಂದ್ರರೊಳ್+ಅಧಿಕವಿದು+ ಪೌರಾಣ+ ಸಿದ್ಧವಲೆ
ಜ್ಞಾನವೃದ್ಧನು+ ಕೃಷ್ಣನ್+ಆಹವ
ದೀನನೇ +ಘನ+ ಶೌರ್ಯನ್+ಎಂಬುದ
ತಾನ್+ಅರಿಯನೇ +ಚೈದ್ಯ +ಭೂಪತಿ +ಎಂದನಾ +ಭೀಷ್ಮ

ಅಚ್ಚರಿ:
(೧) ಕೃಷ್ಣನ ಪರಿಣತಿ – ಜ್ಞಾನವೃದ್ಧನು ಕೃಷ್ಣನ್
(೨) ಜ್ಞಾನವೃದ್ಧ, ಶೌರ್ಯವೃದ್ಧ – ಪದಗಳ ಬಳಕೆ