ಪದ್ಯ ೧೭: ಭೀಮನು ಅಶ್ವತ್ಥಾಮನಿಗೆ ಏನು ಹೇಳಿದ?

ನಿಲ್ಲು ಗುರುಸುತ ಶೌರ್ಯಪಣ ನ
ಮ್ಮಲ್ಲಿಯೇ ಹುಲುಜೀವರಿಗೆ ಜವ
ನಲ್ಲಿ ಮೇಳವೆ ಉಗುಳು ಪಂಚದ್ರೌಪದೀಸುತರ
ಬಿಲ್ಲ ಗುರು ನೀನಾದಡೆಮಗೇ
ನಿಲ್ಲಿ ದ್ರೌಪದಿಯಕ್ಷಿಜಲಕೃಪೆ
ಯಲ್ಲಿ ಲಂಬಿಸಬೇಕೆನುತ ಮೂದಲಿಸಿದನು ಭೀಮ (ಗದಾ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ಗುಡುಗುತ್ತಾ, ಎಲೈ ಗುರುಪುತ್ರಾ ನಿಲ್ಲು, ಶೌರ್ಯದ ಆಟವನ್ನು ನಮ್ಮಲ್ಲಿ ಆಡಿದೆಯಾ? ಮಕ್ಕಳಿಗೆ ಯಮನೊಡನೆ ಆಟವೇ? ಐವರು ದ್ರೌಪದೀ ಪುತ್ರರನ್ನು ಉಗುಳು. ನೀನು ಬಿಲ್ವಿದ್ಯೆಯ ಗುರುವಾಗಿರಬಹುದು. ಆದರೇನೆಅಂತೆ. ದ್ರೌಪದಿಯ ಕಣ್ಣೀರು, ಕೃಪೆಯಲ್ಲಿ ಮುಂದುವರಿಯಬೇಕು ಎಂದನು.

ಅರ್ಥ:
ಸುತ: ಮಗ; ಶೌರ್ಯ: ಸಾಹಸ, ಪರಾಕ್ರಮ; ಪಣ: ಸಂಕಲ್ಪ, ಶಪಥ; ಹುಲು: ಅಲ್ಪ; ಜೀವ: ಪ್ರಾಣ; ಜವ: ಯಮ; ಮೇಳ: ಗುಂಪು; ಉಗುಳು: ಹೊರಹಾಕು; ಬಿಲ್ಲು: ಚಾಪ; ಗುರು: ಆಚಾರ್ಯ; ಅಕ್ಷಿ: ಕಣ್ಣು; ಅಕ್ಷಿಜಲ: ಕಣ್ಣೀರು; ಕೃಪೆ: ದಯೆ; ಲಂಬಿಸು: ಬೆಳೆಸು, ತೂಗಾಡು; ಮೂದಲಿಸು: ಹಂಗಿಸು;

ಪದವಿಂಗಡಣೆ:
ನಿಲ್ಲು +ಗುರುಸುತ +ಶೌರ್ಯಪಣ+ ನ
ಮ್ಮಲ್ಲಿಯೇ +ಹುಲು+ಜೀವರಿಗೆ +ಜವ
ನಲ್ಲಿ+ ಮೇಳವೆ +ಉಗುಳು +ಪಂಚ+ದ್ರೌಪದೀಸುತರ
ಬಿಲ್ಲ+ ಗುರು +ನೀನಾದಡ್+ಎಮಗೇ
ನಿಲ್ಲಿ+ ದ್ರೌಪದಿ+ಅಕ್ಷಿಜಲ+ಕೃಪೆ
ಯಲ್ಲಿ+ ಲಂಬಿಸಬೇಕ್+ಎನುತ +ಮೂದಲಿಸಿದನು +ಭೀಮ

ಅಚ್ಚರಿ:
(೧) ಅಶ್ವತ್ಥಾಮನು ಸಾಯಬೇಕೆಂದು ಹೇಳುವ ಪರಿ – ದ್ರೌಪದಿಯಕ್ಷಿಜಲ ಕೃಪೆಯಲ್ಲಿ ಲಂಬಿಸಬೇಕೆನುತ ಮೂದಲಿಸಿದನು ಭೀಮ