ಅಸಮ ಪದ್ಮವ್ಯೂಹವನು ಭೇ
ದಿಸುವನಾವನನೆನಲು ಕೇಳಿದು
ಶಿಶುತನದಲಾಹವಕೆ ನಡೆದನು ನಾವು ಬೇಡೆನಲು
ಹೊಸ ಮದದ ವನದಂತಿ ಕದಳಿಯ
ಕುಸುರಿದರಿದಂದದಲಿ ಘನಪೌ
ರುಷವ ಮಾಡಿದನೆಂದನವನೀಪಾಲನನುಜಂಗೆ (ದ್ರೋಣ ಪರ್ವ, ೮ ಸಂಧಿ, ೨೨ ಪದ್ಯ)
ತಾತ್ಪರ್ಯ:
ಅಸಾಮಾನ್ಯವಾದ ಪದ್ಮವ್ಯೂಹವನ್ನು ದ್ರೋಣನು ರಚಿಸಲು, ಅದನ್ನು ಭೇದಿಸಲು ನಮ್ಮಲ್ಲಿ ಯಾರಿಗೂ ತಿಳಿಯದ ಸಮಯದಲ್ಲಿ ತಾನು ಭೇದಿಸುವೆನೆಂದು ನಾವು ಬೇಡವೆಂದರೂ ಹುಡುಗತನದಿಂದ ಯುದ್ಧಕ್ಕೆ ಹೋದನು. ಆಗ ತಾನೇ ಮದಧಾರೆಯಿಳಿದ ಕಾಡಾನೆಯು ಬಾಳೆಯ ತೋಟಕ್ಕೆ ನುಗ್ಗಿದಂತೆ ಶತ್ರು ಸೈನ್ಯವನ್ನು ಕೊಚ್ಚಿಕೊಚ್ಚಿಕೊಂಡು ಪೌರುಷವನ್ನು ಮೆರೆದನು.
ಅರ್ಥ:
ಅಸಮ: ಸಮವಲ್ಲದ; ಭೇದ: ಮುರಿ; ಕೇಳು: ಪ್ರಶ್ನಿಸು; ಶಿಶು: ಮಗು; ಆಹವ: ಯುದ್ಧ; ನಡೆ: ಚಲಿಸು; ಬೇಡ: ತ್ಯಜಿಸು; ಹೊಸ: ನವೀನ; ಮದ: ಅಹಂಕಾರ, ಗರ್ವ; ವನ: ಕಾಡು; ದಂತಿ: ಆನೆ; ಕದಳಿ: ಬಾಳೆ; ಕುಸುರಿ: ನಾಜೂಕಾದ ಕೆಲಸ; ಅರಿ: ಸೀಳು; ಘನ: ಶ್ರೇಷ್ಠ; ಪೌರುಷ: ಪರಾಕ್ರಮ; ಅವನೀಪಾಲ: ರಾಜ; ಅನುಜ: ತಮ್ಮ;
ಪದವಿಂಗಡಣೆ:
ಅಸಮ +ಪದ್ಮವ್ಯೂಹವನು +ಭೇ
ದಿಸುವನ್+ಆವನನ್+ಎನಲು+ ಕೇಳಿದು
ಶಿಶುತನದಲ್+ಆಹವಕೆ +ನಡೆದನು +ನಾವು +ಬೇಡೆನಲು
ಹೊಸ +ಮದದ +ವನದಂತಿ +ಕದಳಿಯ
ಕುಸುರಿದ್+ಅರಿದಂದದಲಿ+ ಘನ+ಪೌ
ರುಷವ +ಮಾಡಿದನ್+ಎಂದನ್+ಅವನೀಪಾಲನ್+ಅನುಜಂಗೆ
ಅಚ್ಚರಿ:
(೧) ಉಪಮಾನದ ಪ್ರಯೋಗ – ಹೊಸ ಮದದ ವನದಂತಿ ಕದಳಿಯ ಕುಸುರಿದರಿದಂದದಲಿ