ಅರಸ ಕೇಳೈ ಹಿಮದ ಹೊಯ್ಲಿನ
ಸರಸಿಜಕೆ ರವಿಯಂತೆ ಶಿಶಿರದ
ಸರಿದಲೆಯ ವನದಲಿ ವಸಂತನ ಬರವಿನಂದದಲಿ
ಸುರವಿಮಾನ ಶ್ರೇಣಿಗಳ ನವ
ಪರಿಮಳದ ಪೂರದಲಿ ಭಾರತ
ವರುಷಕಿಳಿದನು ಪಾರ್ಥ ಬಂದನು ಧರ್ಮಜನ ಹೊರೆಗೆ (ಅರಣ್ಯ ಪರ್ವ, ೧೨ ಸಂಧಿ, ೧೯ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಹಿಮವರ್ಷದಿಂದ ನಲುಗಿದ ಕಮಲಕ್ಕೆ ಸೂರ್ಯನು ಗೋಚರವಾದಮ್ತೆ, ಶಿಶಿರದ ಚಳಿಯಿಂದ ನಲುಗಿದ ವನಕ್ಕೆ ವಸಂತ ಋತುವು ಬಂದಂತೆ, ದೇವತೆಗಳ ವಿಮಾನದ ಸುಗಂಧವು ಎಲ್ಲೆಡೆ ವ್ಯಾಪಿಸುತ್ತಿರಲು, ಅರ್ಜುನನು ಭಾರತ ವರ್ಷಕ್ಕಿಳಿದು ಧರ್ಮಜನ ಬಳಿಗೆ ಬಂದನು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ಹಿಮ: ಮಂಜಿನ ಹನಿ; ಹೊಯ್ಲು: ಹೊಡೆತ; ಸರಸಿಜ: ಕಮಲ; ರವಿ: ಭಾನು; ಶಿಶಿರ: ಹಿಮ, ಮಂಜು, ಚಳಿಗಾಲ; ಸರಿ: ಹೋಗು, ಗಮಿಸು; ವನ: ಕಾಡು; ಬರವು: ಆಗಮನ; ಸುರ: ದೇವತೆ; ವಿಮಾನ: ಆಗಸದಲ್ಲಿ ಹಾರುವ ವಾಹನ; ಶ್ರೇಣಿ: ಪಂಕ್ತಿ, ಸಾಲು; ನವ: ಹೊಸ; ಪರಿಮಳ: ಸುಗಂಧ; ಪೂರ: ಪೂರ್ಣ, ತುಂಬ; ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಇಳಿ: ಕೆಳಕ್ಕೆ ಬಾ; ಬಂದನು: ಆಗಮಿಸು; ಹೊರೆ: ಸಮೀಪ;
ಪದವಿಂಗಡಣೆ:
ಅರಸ +ಕೇಳೈ + ಹಿಮದ +ಹೊಯ್ಲಿನ
ಸರಸಿಜಕೆ+ ರವಿಯಂತೆ +ಶಿಶಿರದ
ಸರಿದಲೆಯ +ವನದಲಿ+ ವಸಂತನ+ ಬರವಿನಂದದಲಿ
ಸುರ+ವಿಮಾನ +ಶ್ರೇಣಿಗಳ +ನವ
ಪರಿಮಳದ +ಪೂರದಲಿ +ಭಾರತ
ವರುಷಕಿಳಿದನು +ಪಾರ್ಥ +ಬಂದನು +ಧರ್ಮಜನ +ಹೊರೆಗೆ
ಅಚ್ಚರಿ:
(೧) ಉಪಮಾನದ ಪ್ರಯೋಗ – ಹಿಮದ ಹೊಯ್ಲಿನ ಸರಸಿಜಕೆ ರವಿಯಂತೆ; ಶಿಶಿರದ
ಸರಿದಲೆಯ ವನದಲಿ ವಸಂತನ ಬರವಿನಂದದಲಿ