ಆಡಿದರೆ ಚಿತ್ತದಲಿ ಖತಿಯನು
ಮಾಡಬೇಡೆಲೆ ತಾತ ತನಗೀ
ಗೂಡಿನಲಿ ಸುಖವಿಲ್ಲ ಕಾಮಾದಿಗಳಿಗಾಶ್ರಯದ
ಮಾಡಿ ದೃಢವನು ಶಿಬಿದಧೀಚಿಯ
ಕೂಡಿದೀ ಜೀಮೂತವಾಹನ
ರೂಢಿಗಿವರೊಳಗಿರ್ದ ಕೀರ್ತಿಯನಳಿವನಲ್ಲೆಂದ (ಅರಣ್ಯ ಪರ್ವ, ೨೩ ಸಂಧಿ, ೩ ಪದ್ಯ)
ತಾತ್ಪರ್ಯ:
ತಂದೆ, ನನ್ನ ಮಾತನ್ನು ಕೇಳಿ ನೀನು ಸಿಟ್ಟಾಗಬೇಡ. ಕಾಮಾದಿಗಳಿಗೆ ಆಶ್ರಯವಾದ ಈ ದೇಹವೆಂಬ ಗೂಡಿನಲ್ಲಿ ಸುಖವಿಲ್ಲ. ಶಿಬಿ, ದಧೀಚಿ, ಜೀಮೂತವಾಹನರು ಈ ಲೋಕದಲ್ಲಿ ದಾನಶೂರರೆಂದು ಪ್ರಸಿದ್ಧಿಯಾಗಿರುವರಷ್ಟೇ, ಅಂತಹ ಕೀರ್ತಿಯನ್ನು ನಾನು ಕಳೆದುಕೊಳ್ಳುವುದಿಲ್ಲ.
ಅರ್ಥ:
ಆಡು: ಮಾತಾಡು; ಚಿತ್ತ: ಮನಸ್ಸು; ಖತಿ: ಕೋಪ; ತಾತ: ತಮ್ದೆ; ಗೂಡು: ಮನೆ; ಸುಖ: ಸಂತಸ; ಕಾಮ: ಆಸೆ; ಆದಿ: ಮುಂತಾದ; ಆಶ್ರಯ: ನೆಲೆ; ದೃಢ: ಗಟ್ಟಿಯಾದ; ಕೀರ್ತಿ: ಯಶಸ್ಸು; ಅಳಿ: ನಾಶ;
ಪದವಿಂಗಡಣೆ:
ಆಡಿದರೆ +ಚಿತ್ತದಲಿ +ಖತಿಯನು
ಮಾಡಬೇಡ್+ಎಲೆ +ತಾತ+ ತನಗೀ
ಗೂಡಿನಲಿ+ ಸುಖವಿಲ್ಲ+ ಕಾಮಾದಿಗಳಿಗ್+ಆಶ್ರಯದ
ಮಾಡಿ +ದೃಢವನು +ಶಿಬಿ+ದಧೀಚಿಯ
ಕೂಡಿದ್+ಈ +ಜೀಮೂತವಾಹನ
ರೂಢಿಗ್+ಇವರೊಳಗಿರ್ದ +ಕೀರ್ತಿಯನ್+ಅಳಿವನಲ್ಲೆಂದ
ಅಚ್ಚರಿ:
(೧) ಕರ್ಣನು ನೆನೆದ ಆದರ್ಶ ವ್ಯಕ್ತಿಗಳು – ಶಿಬಿ, ದಧೀಚಿ, ಜೀಮೂತವಾಹನ