ಪದ್ಯ ೫೯: ಭೀಮನು ಗಾಂಧಾರಿಗೆ ಏನೆಂದು ಬಿನ್ನೈಸಿದನು?

ಹೊರಿಸುವಡೆ ದುಷ್ಕೀರ್ತಿ ನಮ್ಮಲಿ
ಹೊರಿಗೆಯಾಯಿತು ನಾಭಿಯಿಂ ಕೆಳ
ಗೆರಗುವುದು ಗದೆಯಿಂದ ಸಲ್ಲದು ಶಸ್ತ್ರವಿದ್ಯೆಯಲಿ
ಅರಿಕೆಯಿಂದನ್ಯಾಯವೀ ಜಗ
ವರಿಯೆ ನಮ್ಮದು ತಾಯೆ ನೀ ಮನ
ಮುರಿಯದವಧರಿಸುವಡೆ ಬಿನ್ನಹವೆಂದನಾ ಭೀಮ (ಗದಾ ಪರ್ವ, ೧೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ತಾಯೇ, ಹೊರಬೇಕೆಂದರೆ ನಾವು ದುಷ್ಕೀರ್ತಿಯನ್ನು ಹೊರುತ್ತೇವೆ. ಗದಾಯುದ್ಧದಲ್ಲಿ ನಾಭಿಯಿಂದ ಕೆಳಗೆ ಹೊಡೆಯುವುದು ಸಲ್ಲದು, ಈ ಅನ್ಯಾಯವನ್ನು ನಾವು ಮಾಡಿರುವುದು ಜಗತ್ತಿಗೇ ಗೊತ್ತಿದೆ, ನೀವು ಮನಸ್ಸನ್ನು ಮುರಿದುಕೊಳ್ಳದೆ ಕೇಳುವುದಾದರೆ ಬಿನ್ನೈಸುತ್ತೇವೆ ಎಂದು ಭೀಮನು ಗಾಂಧಾರಿಗೆ ನುಡಿದನು.

ಅರ್ಥ:
ಹೊರಿಸು: ಧರಿಸು, ಭಾರವನ್ನು ಹೇರು; ದುಷ್ಕೀರ್ತಿ: ಅಪಕೀರ್ತಿ; ನಾಭಿ: ಹೊಕ್ಕಳು; ಎರಗು: ಬೀಳು; ಸಲ್ಲದು: ಸರಿಹೊಂದು, ಒಪ್ಪಿಗೆಯಾಗು; ಶಸ್ತ್ರ: ಆಯುಧ; ವಿದ್ಯೆ: ಜ್ಞಾನ; ಅರಿಕೆ: ವಿಜ್ಞಾಪನೆ; ಅನ್ಯಾಯ: ಸರಿಯಲ್ಲದ; ಜಗ: ಪ್ರಪಂಚ; ಅರಿ: ತಿಳಿ; ಮನ: ಮನಸ್ಸು; ಮುರಿ: ಸೀಳು; ಅವಧರಿಸು: ಮನಸ್ಸಿಟ್ಟು ಕೇಳು; ಬಿನ್ನಹ: ಕೋರಿಕೆ;

ಪದವಿಂಗಡಣೆ:
ಹೊರಿಸುವಡೆ +ದುಷ್ಕೀರ್ತಿ +ನಮ್ಮಲಿ
ಹೊರಿಗೆಯಾಯಿತು +ನಾಭಿಯಿಂ +ಕೆಳಗ್
ಎರಗುವುದು +ಗದೆಯಿಂದ +ಸಲ್ಲದು+ ಶಸ್ತ್ರವಿದ್ಯೆಯಲಿ
ಅರಿಕೆಯಿಂದ್+ಅನ್ಯಾಯವೀ +ಜಗವ್
ಅರಿಯೆ +ನಮ್ಮದು +ತಾಯೆ +ನೀ +ಮನ
ಮುರಿಯದ್+ಅವಧರಿಸುವಡೆ +ಬಿನ್ನಹವೆಂದನಾ+ ಭೀಮ

ಅಚ್ಚರಿ:
(೧) ಹೊರಿ, ಅರಿ – ೧-೨, ೪,೫ ಸಾಲಿನ ಮೊದಲ ಪದ
(೨) ಅರಿ, ಮುರಿ – ಪ್ರಾಸ ಪದ