ಮೆಚ್ಚಿದನು ಮದನಾರಿ ಹೋಮದ
ಕಿಚ್ಚು ತುಡುಕದ ಮುನ್ನ ತೆಗೆದನು
ಬಿಚ್ಚು ಜಡೆಗಳ ಜಹ್ನು ಸುತೆಯಲಿ ನಾದಿದನು ಭಟನ
ಎಚ್ಚ ಶರವಿದೆ ಖಡ್ಗವಿದೆ ಕೋ
ಮುಚ್ಚು ಮರೆಯೇಕಿನ್ನು ಸುತರಲಿ
ಚೊಚ್ಚಿಲವ ನೀನೆಂದು ಮೈದಡವಿದನು ಶಶಿಮೌಳಿ (ಗದಾ ಪರ್ವ, ೯ ಸಂಧಿ, ೨೩ ಪದ್ಯ)
ತಾತ್ಪರ್ಯ:
ಶಿವನು ಮೆಚ್ಚಿ ಅವನ ದೇಹವನ್ನು ಬೆಂಕಿ ಸುಡುವ ಮೊದಲೇ ಮೇಲಕ್ಕೆತ್ತಿ ಗಂಗಾಜಲದಿಂದ ದೇಹವನ್ನು ತೊಳೆದನು. ನೀನು ಬಿಟ್ಟ ಬಾಣವಿದು, ನಿನ್ನ ಕತ್ತಿ ಇಲ್ಲಿದೆ ತೆಗೆದುಕೋ ಎಂದು ಅವನಿಗೆ ನೀಡಿದನು. ನೀನು ನನ್ನ ಮೊದಲ ಮಗ, ನಿನ್ನನ್ನು ಮೆಚ್ಚಿದ್ದೇನೆ ಎಂದು ಹೇಳಿ ಅಶ್ವತ್ಥಾಮನ ಮೈಯನ್ನು ಸವರಿದನು.
ಅರ್ಥ:
ಮೆಚ್ಚು: ಹೊಗಳು; ಮದನಾರಿ: ಶಿವ; ಹೋಮ: ಯಜ್ಞ; ಕಿಚ್ಚು: ಬೆಂಕಿ, ಅಗ್ನಿ; ತುಡುಕು: ಬೇಗನೆ ಹಿಡಿಯುವುದು, ಹೋರಾಡು; ಮುನ್ನ: ಮೊದಲು; ತೆಗೆ: ಹೊರತರು; ಬಿಚ್ಚು: ಹರಡು; ಜಡೆ: ಜಟೆ; ಜಹ್ನುಸುತೆ: ಗಂಗೆ; ನಾದು: ಕಲಸು, ಒದ್ದೆ ಮಾಡು; ಭಟ: ಪರಾಕ್ರಮಿ; ಎಚ್ಚ: ಬಾಣ ಪ್ರಯೋಗ ಮಾಡು; ಶರ: ಬಾಣ; ಖಡ್ಗ: ಕತ್ತಿ; ಕೋ: ನೀಡು, ಪಡೆ; ಮುಚ್ಚು: ಅಡಗು; ಸುತ: ಮಕ್ಕಳು; ಚೊಚ್ಚಿಲ: ಮೊದಲನೆಯ; ಮೈದಡವು: ದೇಹವನ್ನು ತಟ್ಟು, ಪ್ರೀತಿಯಿಂದ ಸವರು; ಶಶಿಮೌಳಿ: ಶಿವ; ಶಶಿ: ಚಂದ್ರ; ಮೌಳಿ: ಶಿರ;
ಪದವಿಂಗಡಣೆ:
ಮೆಚ್ಚಿದನು+ ಮದನಾರಿ +ಹೋಮದ
ಕಿಚ್ಚು+ ತುಡುಕದ +ಮುನ್ನ+ ತೆಗೆದನು
ಬಿಚ್ಚು +ಜಡೆಗಳ +ಜಹ್ನುಸುತೆಯಲಿ +ನಾದಿದನು +ಭಟನ
ಎಚ್ಚ+ ಶರವಿದೆ +ಖಡ್ಗವಿದೆ +ಕೋ
ಮುಚ್ಚುಮರೆ+ ಏಕಿನ್ನು +ಸುತರಲಿ
ಚೊಚ್ಚಿಲವ +ನೀನೆಂದು +ಮೈದಡವಿದನು +ಶಶಿಮೌಳಿ
ಅಚ್ಚರಿ:
(೧) ಮದನಾರಿ, ಶಶಿಮೌಳಿ – ಶಿವನನ್ನು ಕರೆದ ಪರಿ
(೨) ಕಿಚ್ಚು, ಬಿಚ್ಚು,ಮುಚ್ಚು – ಪ್ರಾಸ ಪದಗಳು
(೩) ಗಂಗೆಯನ್ನು ಜಹ್ನುಸುತೆ ಎಂದು ಕರೆದಿರುವುದು