ಪದ್ಯ ೯: ಅಶ್ವತ್ಥಾಮ ಮತ್ತು ಇತರರು ಯಾವ ನಿರ್ಧಾರಕ್ಕೆ ಬಂದರು?

ಹರಿಯದಿಲ್ಲಿಯ ಬವರ ರಾಯನ
ನರಸಬೇಹುದು ಕುರುಪತಿಯ ಮುಂ
ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲಿ ಶರರಚನೆ
ಅರಿವೆನೀ ಸಾತ್ಯಕಿಯ ಸಮರದ
ಮುರುಕವನು ಬಳಿಕೆನುತ ಕೌರವ
ನರಿಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು (ಗದಾ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ಆಗ ಕೃಪಚಾರ್ಯರು, ಕೃಪವರ್ಮ, ಅಶ್ವತ್ಥಾಮರು, ಈ ಯುದ್ಧವನ್ನು ಬೇಗ ಗೆಲ್ಲುವುದು ಆಗದ ಮಾತು. ಇಲ್ಲಿ ಬಾಣ ಪ್ರಯೋಗವು ನಿಷ್ಫಲ. ನಾವೀಗ ಮೊದಲು ಕೌರವನನ್ನು ಹುಡುಕಬೇಕು. ಆಮೇಲೆ ಈ ಸಾತ್ಯಕಿಯ ಬಾಣಗಲ ಬಲುಹವನ್ನು ಗೊತ್ತುಹಚ್ಚೋಣ ಎಂದುಕೊಂಡು ಮುಂದಕ್ಕೆ ಹೋದರು.

ಅರ್ಥ:
ಹರಿ: ಕಡಿ, ಕತ್ತರಿಸು; ಬವರ: ಕಾಳಗ, ಯುದ್ಧ; ಅರಸು: ಹುಡುಕು; ಇರಿ: ಚುಚ್ಚು; ಮೆರೆ: ಹೊಳೆ, ಪ್ರಕಾಶಿಸು; ಕೀರ್ತಿ: ಯಶಸ್ಸು; ನಿಷ್ಫಲ: ಪ್ರಯೋಜನ; ಶರ: ಬಾಣ; ರಚನೆ: ನಿರ್ಮಾಣ; ಅರಿ: ತಿಳಿ; ಸಮರ: ಯುದ್ಧ; ಮುರುಕ: ಬಿಂಕ, ಬಿನ್ನಾಣ; ಬಳಿಕ: ನಂತರ; ಅರಿಕೆ: ವಿಜ್ಞಾಪನೆ; ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಸುತ: ಮಗ;

ಪದವಿಂಗಡಣೆ:
ಹರಿಯದ್+ಇಲ್ಲಿಯ +ಬವರ+ ರಾಯನನ್
ಅರಸಬೇಹುದು +ಕುರುಪತಿಯ+ ಮುಂದ್
ಇರಿದು+ ಮೆರೆವುದು+ ಕೀರ್ತಿ +ನಿಷ್ಫಲವಿಲ್ಲಿ+ ಶರರಚನೆ
ಅರಿವೆನ್+ಈ+ ಸಾತ್ಯಕಿಯ +ಸಮರದ
ಮುರುಕವನು+ ಬಳಿಕೆನುತ +ಕೌರವನ್
ಅರಿಕೆಯಲಿ +ತಿರುಗಿದರು +ಕೃಪ+ ಕೃತವರ್ಮ +ಗುರುಸುತರು

ಅಚ್ಚರಿ:
(೧) ಹರಿ, ಅರಿ, ಇರಿ – ಪ್ರಾಸ ಪದಗಳು