ಎರಡು ಶರದಲಿ ಕರದ ಚಾಪವ
ತರಿದನಾ ರವಿಸೂನು ತುರಗವ
ವರ ರಥವ ಹುಡಿಮಾಡಿದನು ಗಂಗಾಕುಮಾರಕನು
ಶರತತಿಯಲವನುರವನುದರವ
ಬಿರಿಯ ಕೆತ್ತಿದ ದ್ರೋಣನಿದಿರಿನ
ಲಿರದೆ ಹಾಯ್ದನು ಕೀಚಕನು ಪರಿಭವನದ ಸೂರೆಯಲಿ (ಅರಣ್ಯ ಪರ್ವ, ೨೫ ಸಂಧಿ, ೫ ಪದ್ಯ)
ತಾತ್ಪರ್ಯ:
ಎರಡು ಬಾಣಗಳಿಂದ ಕರ್ಣನು ಕೀಚಕನ ಕೈಯಲ್ಲಿದ್ದ ಬಿಲ್ಲನ್ನು ಕತ್ತರಿಸಿದನು. ಭೀಷ್ಮನು ಕೀಚಕನ ರಥ ಮತ್ತು ಕುದುರೆಗಳನ್ನು ಪುಡಿ ಮಾಡಿದನು. ಕೀಚಕನ ಎದೆ ಹೊಟ್ಟೆಗಳನ್ನು ದ್ರೋಣನು ಬಾಣಗಳಿಂದ ಕೆತ್ತಿದನು. ಕೀಚಕನು ಎದುರಿನಲ್ಲಿರಲಾರದೆ ಪಲಾಯನ ಮಾಡಿದನು.
ಅರ್ಥ:
ಶರ: ಬಾಣ; ಕರ: ಹಸ್ತ; ಚಾಪ: ಬಿಲ್ಲು; ತರಿ: ಕಡಿ, ಕತ್ತರಿಸು; ರವಿಸೂನು: ಸೂರ್ಯನ ಮಗ (ಕರ್ಣ); ತುರಗ: ಕುದುರೆ; ವರ: ಶ್ರೇಷ್ಠ; ರಥ: ಬಂಡಿ; ಹುಡಿಮಾಡು: ಪುಡಿಮಾಡು; ಗಂಗಾಕುಮಾರ: ಭೀಷ್ಮ; ಶರ: ಬಾಣ; ತತಿ: ಗುಂಪು, ರಾಶಿ; ಉರು: ಎದೆ, ಉದರ: ಹೊಟ್ಟೆ; ಬಿರಿ: ಒಡೆ, ಬಿರುಕುಂಟಾಗು; ಕೆತ್ತು: ಕತ್ತರಿಸು; ಇದಿರು: ಎದುರು; ಹಾಯ್ದು: ಚಾಚು, ತೆರಳು; ಪರಿಭವ: ಸೋಲು; ಪರಿಭವನ: ವೈರಿಯ ಮನೆ; ಸೂರು: ಮನೆಯ ಮೇಲ್ಛಾವಣಿ; ಸೂರೆ: ಲೂಟಿ;
ಪದವಿಂಗಡಣೆ:
ಎರಡು +ಶರದಲಿ +ಕರದ +ಚಾಪವ
ತರಿದನ್+ಆ+ ರವಿಸೂನು +ತುರಗವ
ವರ +ರಥವ +ಹುಡಿಮಾಡಿದನು+ ಗಂಗಾಕುಮಾರಕನು
ಶರತತಿಯಲ್+ಅವನ್+ಉರವನ್+ಉದರವ
ಬಿರಿಯ +ಕೆತ್ತಿದ +ದ್ರೋಣನ್+ಇದಿರಿನಲ್
ಇರದೆ +ಹಾಯ್ದನು +ಕೀಚಕನು+ ಪರಿಭವನದ +ಸೂರೆಯಲಿ
ಅಚ್ಚರಿ:
(೧) ಕೀಚಕನ ಮೇಲಾದ ನೋವು – ಶರತತಿಯಲವನುರವನುದರವ ಬಿರಿಯ
(೨) ೪ ಸಾಲು ಒಂದೇ ಪದವಾಗಿರುವುದು – ಶರತತಿಯಲವನುರವನುದರವ