ಜೀಯ ಸಿಂಹಾಸನಕೆ ದಿವಿಜರ
ರಾಯನೋ ಶಂಕರನೊ ಮೇಣ್ ನಾ
ರಾಯಣನೊ ನರರಲ್ಲ ದೇವರು ಬಂದು ನೋಡುವುದು
ಕಾಯಲಸದಳವೆಮಗೆನಲು ನಿ
ರ್ದಾಯದಲಿ ನೆಲೆಗೊಂಡ ನಿರ್ಜರ
ರಾಯನಾರೆಂದೆನುತಲಾಗ ವಿರಾಟ ಚಿಂತಿಸಿದ (ವಿರಾಟ ಪರ್ವ, ೧೧ ಸಂಧಿ, ೮ ಪದ್ಯ)
ತಾತ್ಪರ್ಯ:
ದ್ವಾರಪಾಲಕರು, ಅಂತಃಪುರದ ಅಧಿಕಾರಿಗಳು ವಿರಾಟನಲ್ಲಿಗೆ ಬಂದು, ಜೀಯಾ ಸಿಂಹಾಸನದ ಮೇಲೆ ಇಂದ್ರನೋ, ಶಿವನೋ, ವಿಷ್ಣುವೋ, ಯಾರೋ ಬಂದು ಕುಳಿತಿದ್ದಾರೆ, ಅವರು ಮಾನವರಲ್ಲ, ಕಾವಲು ಕಾಯುವುದು ಅಸಾಧ್ಯ, ಎಂದು ಬಿನ್ನವಿಸಲು; ಹೀಗೆ ಬಂದು ಕುಳಿತ ದೇವರಾಜನು ಯಾರು ಎಂದು ವಿರಾಟನು ಚಿಂತಿಸಿದನು.
ಅರ್ಥ:
ಜೀಯ: ಒಡೆಯ; ಸಿಂಹಾಸನ: ಕೇಸರಿ ಪೀಠ; ದಿವಿಜ: ದೇವತೆ; ದಿವಿಜರಾಯ: ಇಂದ್ರ; ಶಂಕರ: ಶಿವ; ಮೇಣ್: ಅಥವ; ನಾರಾಯಣ: ವಿಷ್ಣು; ನರ: ಮನುಷ್ಯ; ದೇವರು: ಭಗವಮ್ತ; ನೋಡು: ವೀಕ್ಷಿಸು; ಕಾಯು: ಕಾಪಾಡು,ಕಾವಲಿರು; ಅಸದಳ: ಅಸಾಧ್ಯ; ನಿರ್ದಾಯದ: ಅಖಂಡ; ನೆಲೆ: ಆಶ್ರಯ, ಆಧಾರ; ನಿರ್ಜರರಾಯ: ಇಂದ್ರ; ಚಿಂತಿಸು: ಯೋಚಿಸು; ನಿರ್ಜರ: ದೇವತೆ;
ಪದವಿಂಗಡಣೆ:
ಜೀಯ +ಸಿಂಹಾಸನಕೆ +ದಿವಿಜರ
ರಾಯನೋ +ಶಂಕರನೊ+ ಮೇಣ್+ ನಾ
ರಾಯಣನೊ +ನರರಲ್ಲ+ ದೇವರು +ಬಂದು +ನೋಡುವುದು
ಕಾಯಲ್+ಅಸದಳವ್+ಎಮಗೆನಲು +ನಿ
ರ್ದಾಯದಲಿ +ನೆಲೆಗೊಂಡ +ನಿರ್ಜರ
ರಾಯನ್+ಆರೆಂದ್+ಎನುತಲ್+ಆಗ +ವಿರಾಟ +ಚಿಂತಿಸಿದ
ಅಚ್ಚರಿ:
(೧) ದ್ವಾರಪಾಲಕರು ಧರ್ಮಜನನನ್ನು ಯಾರಿಗೆ ಹೋಲಿಸಿದರು – ಜೀಯ ಸಿಂಹಾಸನಕೆ ದಿವಿಜರ
ರಾಯನೋ ಶಂಕರನೊ ಮೇಣ್ ನಾರಾಯಣನೊ ನರರಲ್ಲ ದೇವರು ಬಂದು ನೋಡುವುದು